ನವಿಲುಗಳನ್ನು ಬೇಟೆಯಾಡಿದ್ದ ವ್ಯಕ್ತಿಯನ್ನ ಕೊಂದ ಗ್ರಾಮಸ್ಥರು

Public TV
1 Min Read

ಭೋಪಾಲ್: ನವಿಲುಗಳನ್ನು ಬೇಟೆಯಾಡಿದ್ದ ವ್ಯಕ್ತಿಯೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿ ಗ್ರಾಮಸ್ಥರು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ.

ಹರಿಲಾಲ್ ಬಂಚದ ಕೊಲೆಯಾದ ವ್ಯಕ್ತಿ. ನೀಮುಚ್ ಜಿಲ್ಲೆಯ ಲಸದಿಯಾ ಅತ್ರಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಆರಂಭದಲ್ಲಿ ನವಿಲುಗಳನ್ನು ಬೇಟಿಯಾಡಿದ್ದ ಮೂವರು ಪ್ರಕರಣದ ದಾರಿಯನ್ನು ತಪ್ಪಿಸಿದ್ದರು. ಹೀಗಾಗಿ ತಡವಾಗಿ ಸತ್ಯ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?:
ಕುಕೇಶ್ವರ್ ಪ್ರದೇಶದಲ್ಲಿ ಹರಿಲಾಲ್ ಸೇರಿದಂತೆ ಒಟ್ಟು ನಾಲ್ವರು ನವಿಲು ಬೇಟಿಯಾಡಲು ಹೋಗಿದ್ದರು. ಬೇಟೆಯಾಡಿ ರಾತ್ರಿ 9 ಗಂಟೆ ಸುಮಾರು ನವಿಲುಗಳನ್ನು ಹಿಡಿದುಕೊಂಡು ಲಸದಿಯಾ ಅತ್ರಿ ಗ್ರಾಮದ ಬಳಿ ಬರುತ್ತಿದ್ದರು. ಗ್ರಾಮದ ಕೆಲವರು ಆರೋಪಿಗಳ ಕೈಯಲ್ಲಿ ನವಿಲುಗಳನ್ನು ನೋಡಿ ಹಿಡಿಯಲು ಮುಂದಾಗಿದ್ದರು. ತಕ್ಷಣವೇ ಎಚ್ಚೆತ್ತುಕೊಂಡು ಓಡಲು ಆರಂಭಿಸಿದ್ದ ಆರೋಪಿಗಳ ಪೈಕಿ ಹರಿಲಾಲ್ ಸಿಕ್ಕಿಬಿದ್ದಿದ್ದ. ಗ್ರಾಮಸ್ಥರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.

ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಹರಿಲಾಲ್‍ನನ್ನು ನೋಡಿ ವ್ಯಕ್ತಿಯೊಬ್ಬ ಪೊಲೀಸ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರಿಲಾಲ್ ಮೃತಪಟ್ಟಿದ್ದಾನೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಮೇಕೆ ಕಳ್ಳತನ ಮಾಡಲು ಹೋಗಿದ್ದ ಹರಿಲಾಲ್‍ನನ್ನು ಗ್ರಾಮಸ್ಥರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಮೂಲಕ ಪ್ರಕರಣದ ದಾರಿ ತಪ್ಪಿಸಲು ಯತ್ನಿಸಿದ್ದರು. ಗ್ರಾಮಸ್ಥರನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

ಭಾರತದ ರಾಷ್ಟ್ರೀಯ ಪಕ್ಷಿ ನವಿಯನ್ನು ಬೇಟೆಯಾಡುವುದು ಹಾಗೂ ಕೊಲ್ಲುವುದು ನಿಷೇಧಿಸಲಾಗಿದೆ. 1972ರ ಭಾರತೀಯ ಅರಣ್ಯ ಕಾಯ್ದೆಯ ಪ್ರಕಾರ, ನವಿಲು ಬೇಟಿಯಾಡುವ ಹಾಗೂ ಕೊಲ್ಲುವ ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಹೀಗಾಗಿ ನವಿಲು ಬೇಟಿಯಾಡಿದ ಮೂವರು ಆರೋಪಿಗಳ ವಿರುದ್ಧ ಹಾಗೂ ಹರಿಲಾಲ್‍ನನ್ನು ಕೊಲೆ ಮಾಡಿದ 10 ಜನರನ್ನು ಪೊಲೀಸರು ಬಂಧಿಸಿದ್ದು, ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *