ಗದಗ: ನಾವೆಲ್ಲ ಖಾದಿ ಹಾಕ್ತೀವಿ, ಆದ್ರೆ ಒಳಗಡೆ ಮಷಿನ್ ನಿಂದ ತಯಾರಿಸಿದ ಬನಿಯನ್ ಹಾಕ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಗದಗ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ವಿವಿ ಉದ್ಘಾಟನಾ ಸಮಾರಂಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಟೀಲ್ ಪುಟ್ಟಪ್ಪ ಅವರನ್ನ ಶ್ಲಾಘಿಸಿ, ನಾವೆಲ್ಲ ಖಾದಿ ಹಾಕ್ತೀವಿ, ಆದ್ರೆ ಒಳಗಡೆ ಮಷಿನ್ ನಿಂದ ತಯಾರಿಸಿದ ಬನಿಯನ್ ಹಾಕ್ತೀವೆ. ಆದ್ರೆ ಪಾಟೀಲ್ ಪುಟ್ಟಪ್ಪ ಅವರು ಹಾಗಲ್ಲ. ಅಪ್ಪಟ ಗಾಂಧಿವಾದಿಯಾಗಿದ್ದರೆಂದು ನೆನೆದರು. ಗ್ರಾಮೀಣಾಭಿವೃದ್ಧಿಗೆ ಸರ್ಕಾರದಿಂದ ಸಹಾಯಕ್ಕೆ ಸಿದ್ಧವಾಗಿದ್ದೇವೆ. ಆದ್ರೆ ಅಭಿವೃದ್ಧಿ ನಿರೀಕ್ಷಿತ ಹಾದಿಯಲ್ಲಿರಬೇಕೆಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕಡಿಮೆ ಇದೆ. ಸಮಾಜದಲ್ಲಿ ಶಿಕ್ಷಣದಿಂದ ವಂಚಿತರಾದವರು ಹಿಂದೆ ಇರ್ತಾರೆ. ಈ ತಾರತಮ್ಯ ಯಾವಾಗ್ಲೂ ಇದೆ. ಶತಶತಮಾನದಿಂದ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಬಸವಣ್ಣನವರ ಕಾಲದಲ್ಲಿ ಮಾತ್ರ ಮಹಿಳೆಯರಿಗೆ ಸಮಾನ ಸ್ಥಾನಮಾನವಿತ್ತು. ಆದರೆ ಈಗ ಮತ್ತೆ ಪ್ರತಿಭೆ ವಿಕಾಸಕ್ಕೆ ಅವಕಾಶ ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭೆ ಯಾರ ಸ್ವತ್ತು ಅಲ್ಲ, ಒಂದು ವರ್ಗಕ್ಕೆ ಸೀಮಿತವೂ ಅಲ್ಲ. ಅವಕಾಶ ಸಿಕ್ಕಾಗ ಮಾತ್ರ ಸುಪ್ತ ಪ್ರತಿಭೆಯ ಅನಾವರಣ ಸಾಧ್ಯವಾಗುತ್ತೆ. ಗ್ರಾಮಗಳ ಸಬಲೀಕರಣಕ್ಕೆ ಇಂದು ಅನೇಕ ಪ್ರಯತ್ನಗಳು ನಡೆದಿವೆ. ಅಧಿಕಾರ, ಸಂಪತ್ತು ಹಂಚಿಕೆಯಾಗಬೇಕು. ಹಳ್ಳಿಯ ಜನರು ಬೆಳವಣಿಗೆಯಾಗಲು ಗ್ರಾಮೀಣಾಭಿವೃದ್ಧಿ ವಿವಿ ಮೂಲಕ ಸಂಶೋಧನೆ ನಡೆಯಬೇಕೆಂದು ಮನವಿ ಮಾಡಿದರು.
ಅಧ್ಯಯನ ಮತ್ತು ಸಂಶೋಧನೆ ಒಟ್ಟಿಗೆ ಹೋದಾಗ ಮಾತ್ರ ವಿವಿಯ ಕಾರ್ಯ ಸಾರ್ಥಕವಾಗುತ್ತೆ. ಏನು ಮಾಡಿದ್ರೆ ಗ್ರಾಮಗಳ ವಿಕಾಸವಾಗುತ್ತೆ ಅಂತ ವಿಶ್ವವಿದ್ಯಾಲಯದವರಿಗೆ ಅರ್ಥವಾಗಿರಬೇಕು. ಎಷ್ಟು ಶಿಕ್ಷಣ ಪಡೆದಿದ್ದೇವೆ ಅನ್ನೋದು ಮುಖ್ಯವಲ್ಲ. ಸಮಾಜಕ್ಕೆ ಸ್ಪಂದಿಸುವ ಮನಸ್ಥಿತಿ ಬೆಳೆಯಬೇಕು. ಶಿಕ್ಷಣದಲ್ಲಿ ನೈತಿಕತೆ ಇದ್ರೆ ಮಾತ್ರ ಜ್ಞಾನ ವಿಕಾಸವಾಗುತ್ತೆ. ಗದಗದಲ್ಲಿರೋ ಗ್ರಾಮೀಣಾಭಿವೃದ್ಧಿ ವಿವಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದು ಹಾರೈಸಿದರು.