ಸರ್ಕಾರಿ ಆಸ್ಪತ್ರೆಯಿಂದ್ಲೂ ರೋಗಿಗಳು ಶಿಫ್ಟ್- ಕೆಎಂಸಿಯಲ್ಲಿ ಮಾತ್ರ ಎಮರ್ಜೆನ್ಸಿ ಟ್ರೀಟ್‍ಮೆಂಟ್

Public TV
2 Min Read

ಉಡುಪಿ: ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಉಡುಪಿ ಜಿಲ್ಲೆಯ 35ಕ್ಕೆ ಹೆಚ್ಚು ಪ್ರಮುಖ ಖಾಸಗಿ ಆಸ್ಪತ್ರೆಗಳು ಎಮರ್ಜೆನ್ಸಿಯನ್ನೂ ಬಂದ್ ಮಾಡಿದೆ. ಒಪಿಡಿಗಳಲ್ಲೂ ಟ್ರೀಟ್‍ಮೆಂಟ್ ಸಿಗುತ್ತಿಲ್ಲ. ಸಾವಿರಕ್ಕೂ ಮಿಕ್ಕಿ ಕ್ಲಿನಿಕ್‍ಗಳು ಮುಚ್ಚಿದೆ. ಈ ನಡುವೆ ಮಣಿಪಾಲ ಕೆಎಂಸಿ ಆಸ್ಪತ್ರೆ ರೋಗಿಗಳಿಗೆ ತುರ್ತು ಚಿಕಿಕಿತ್ಸೆ ಮಾಡುತ್ತಿದೆ.

ಹೊರ ಜಿಲ್ಲೆ- ಹೊರ ರಾಜ್ಯಗಳಿಂದ ಬರುವ ಪೇಷಂಟ್‍ಗಳಿಗೆ ಕೆಎಂಸಿಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಿಂದಲೂ ಗಂಭೀರವಾಗಿರುವ ರೋಗಿಗಳನ್ನು ಕೆಎಂಸಿಗೆ ರವಾನೆ ಮಾಡಲಾಗುತ್ತಿದೆ. ಆಸ್ಪತ್ರೆಯ ಒಪಿಡಿ ಮಾತ್ರ ಇಂದು ರೋಗಿಗಳು ಇಲ್ಲದೆ ಖಾಲಿಯಾಗಿತ್ತು. ಹೊರ ರಾಜ್ಯದಿಂದ ಬರುವ ಪೇಷಂಟ್‍ಗಳು ಮಾಹಿತಿಯಿಲ್ಲದೆ ಪರದಾಡುವಂತಾಗಿದೆ.

ಮುಷ್ಕರದಲ್ಲಿ ನಾವೂ ಪಾಲ್ಗೊಂಡಿದ್ದೇವೆ. ತುರ್ತು ಮತ್ತು ಅಪಘಾತ ಚಿಕಿತ್ಸೆ ಕೊಡುತ್ತಿದ್ದೇವೆ. ಬೆಳಗ್ಗೆಯಿಂದ ತುಂಬಾ ರೋಗಿಗಳು ಆಸ್ಪತ್ರ¬ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನ ಹಿಂದೆಯೇ ಆಸ್ಪತ್ರೆಯಲ್ಲಿ, ಬಸ್ಸುಗಳಲ್ಲಿ, ಎಲ್ಲಾ ಜಿಲ್ಲೆಗಳ ಇನ್ಫಾರ್ಮೆಷನ್ ಸೆಂಟರ್‍ಗಳಲ್ಲಿ ಕೆಎಂಸಿ ಬಂದ್ ಇರುವ ಬಗ್ಗೆ ಮಾಹಿತಿ ಪ್ರಚಾರ ಮಾಡಿದ್ದೆವು. ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರ ಮೂಲಕ ಬಂದ್ ಇರುವ ಬಗ್ಗೆ ಪ್ರಚಾರ ಕೊಟ್ಟಿದ್ದೆವು. ಈ ಹಿಂದೆ ಅಡ್ಮಿಟಾದ- ಪೇಷಂಟ್‍ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವರ್ಷಪೂರ್ತಿ ನಾವು ಸೇವೆ ಮಾಡುತ್ತೇವೆ. ನಮ್ಮ ನೋವನ್ನು ಸರ್ಕಾರ ಕೇಳಬೇಕು, ಎಂದು ಕೆಎಂಸಿ ಮಣಿಪಾಲ್ ಹಿರಿಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹೇಳಿದರು.

ಮಣಿಪಾಲ ಕೆಎಂಸಿಯ ಒಪಿಡಿ ಕೂಡಾ ಬಿಕೋ ಅನ್ನುತ್ತಿತ್ತು. ಪ್ರತಿಭಟನೆಯ ಮಾಹಿತಿಯಿಲ್ಲದವರು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದು ಹೋಗಿದ್ದಾರೆ. ಕೇರಳದಿಂದ ಕೂಡಾ ರೋಗಿಗಳು ಒಪಿಡಿಗೆ ಬಂದಿದ್ದರು. ನಾಳೆ ಬೆಳಗ್ಗೆ ಚಿಕಿತ್ಸೆ ನೀಡುವುದಾಗಿ ಹೇಳಿ ವೈದ್ಯರು ಸೆಕ್ಯೂರಿಟಿ ಗಾರ್ಡ್‍ಗಳನ್ನು ಕಳುಹಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಣಿಪಾಲ ಕೆಎಂಸಿ ಹಿರಿಯ ವೈದ್ಯ ಡಾ. ಪದ್ಮರಾಜ ಹೆಗ್ಡೆ, ಎಲ್ಲರಿಗೂ ಎಮರ್ಜೆನ್ಸಿ ಟ್ರೀಟ್ ಮೆಂಟ್ ಕೊಟ್ಟಿದ್ದೇವೆ. ಎರಡ್ಮೂರು ಪೇಷಂಟ್ ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದಾರೆ. ಬೈಂದೂರು- ಕುಂದಾಪುರದಿಂದ ಅಪಘಾತದ ಪ್ರಕರಣಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. 24 ಗಂಟೆಯೂ ಆಸ್ಪತ್ರೆಯ ಎಮರ್ಜೆನ್ಸಿ ಓಪನ್ ಇರ್ತದೆ. ಹೆಚ್ಚುವರಿ ವೈದ್ಯರು- ನರ್ಸ್- ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *