ವಿಡಿಯೋ: ಗಿಟಾರ್ ಬಾರಿಸುತ್ತಲೇ ಮೆದುಳು ಸರ್ಜರಿ ಮಾಡಿಸಿಕೊಂಡ ಬೆಂಗ್ಳೂರು ವ್ಯಕ್ತಿ

Public TV
1 Min Read

ಬೆಂಗಳೂರು: ವ್ಯಕ್ತಿಯೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೆದುಳು ಸರ್ಜರಿಗೆ ಒಳಗಾಗಿದ್ದು, ಈ ವೇಳೆ ಅವರು ಗಿಟಾರ್ ಬಾರಿಸಿದ್ದಾರೆ.

ಜುಲೈ 11 ರಂದು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ 37 ವರ್ಷದ ಅಭಿಷೇಕ್ ಪ್ರಸಾದ್ ಅವರಿಗೆ ಬ್ರೇನ್ ಸಕ್ರ್ಯೂಟ್ ಸರ್ಜರಿ ಮಾಡಲಾಗಿದೆ. ಈ ರೀತಿ ಸರ್ಜರಿ ನಡೆದಿರುವುದು ದೇಶದಲ್ಲಿ ಇದೇ ಮೊದಲು ಎಂದು ವರದಿಯಾಗಿದೆ. ಅಭಿಷೇಕ್ ಅವರಿಗೆ ಗಿಟಾರ್ ಬಾರಿಸುವುದೆಂದರೆ ಅಚ್ಚುಮೆಚ್ಚು. ಆದ್ರೆ ಗಿಟಾರಿಸ್ಟ್ ಡಿಸ್ಟೋನಿಯಾ ಎಂಬ ನರಸಂಬಂಧಿ ಕಾಯಿಲೆಯಿಂದಾಗಿ ಇವರ ಬೆರಳುಗಳನ್ನು ಆಡಿಸಲು ಆಗುತ್ತಿರಲಿಲ್ಲ.

ಅಭಿಷೇಕ್ ಅವರಿಗೆ ಆಪರೇಷನ್ ನಡೆದ ಅಷ್ಟೂ ಹೊತ್ತು ಎಚ್ಚರವಾಗಿಯೇ ಇದ್ದರು. ಗಿಟಾರ್ ಬಾರಿಸಲು ಪ್ರಯತ್ನಿಸಿದಾಗಲೇ ಈ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಯ ವೇಳೆಯೂ ಗಿಟಾರ್ ಬಾರಿಸಿದರು. ಯಾಕಂದ್ರೆ ರೋಗಿಯ ಪ್ರತಿಕ್ರಿಯೆಯಿಂದ ಎಲ್ಲಿ ಸರ್ಜರಿ ಮಾಡಬೇಕೋ ಆ ಗುರಿಯ ನಿರ್ದಿಷ್ಟ ಜಾಗ ತಿಳಿಯುವುದು ಮುಖ್ಯ ಎಂದು ವೈದ್ಯರು ವರದಿಗಾರರಿಗೆ ಹೇಳಿದ್ದಾರೆ.

ಅಭಿಷೇಕ್ ಪ್ರಸಾದ್ ಬಿಹಾರ ಮೂಲದವರಾಗಿದ್ದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ಸಂತಸಗೊಂಡಿದ್ದಾರೆ. ವೈದ್ಯರು ಕೂಡ 100% ರಿಸಲ್ಟ್ ಸಿಗುತ್ತದೆಂದು ನಿರೀಕ್ಷಿಸಿರಲಿಲ್ಲ. ನನಗೆ ಹಾಗೂ ವೈದ್ಯರಿಗಿಬ್ಬರಿಗೂ ಇದೊಂದು ಅದ್ಭುತ ಅನುಭವ. ನಾನೀಗ ತುಂಬಾ ಉತ್ಸುಕನಾಗಿದ್ದೇನೆ. ಕೊನೆಗೂ ನನ್ನ ಕನಸನ್ನ ಈಡೇರಿಸಿಕೊಳ್ಳಬಹುದು. ಒಂದು ತಿಂಗಳ ನಂತರ ನಾನು ಗುಣಮುಖವಾದ ಬಳಿಕ ನಾನು ಗಿಟಾರ್ ನುಡಿಸಬಹುದು ಎಂದು ಹೇಳಿದ್ದಾರೆ.

ಮೊದಲಿಗೆ ನನ್ನ ಬೆರಳುಗಳು ಗಟ್ಟಿಯಾಗಿರುತ್ತಿದ್ದವು. ಒಂದು ತಂತಿಯಿಂದ ಮತ್ತೊಂದಕ್ಕೆ ಬದಲಿಸಬೇಕಾದ್ರೆ ಕಷ್ಟವಾಗ್ತಿತ್ತು. ಈಗ ನನ್ನ ಬೆರಳುಗಳು ಸಂಪೂರ್ಣವಾಗಿ ಹೇಳಿದಂತೆ ಕೇಳುತ್ತಿವೆ ಎಂದಿದ್ದಾರೆ. ಅಭಿಷೇಕ್ ಅವರ ಆಸ್ಪತ್ರೆ ಬಿಲ್ ಸುಮಾರು 2 ಲಕ್ಷ ರೂ. ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *