ವೆಂಟಿಲೇಟರ್ ಕೆಟ್ಟುಹೋಗಿ ಮಂಡ್ಯ ಆಸ್ಪತ್ರೆಯಲ್ಲಿ ರೋಗಿ ಸಾವು

Public TV
1 Min Read

ಮಂಡ್ಯ: ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ರೋಗಿಗೆ ಹಾಕಿದ್ದ ವೆಂಟಿಲೇಟರ್ ಕೆಟ್ಟು ಹೋದ ಪರಿಣಾಮ ಮಗ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆ ಗಾಜುಗಳನ್ನು ಪುಡಿ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಸಮೀವುಲ್ಲಾಖಾನ್ ಮತ್ತು ಸರಿಯಾಸುಲ್ತಾನ್ ದಂಪತಿಯ ಪುತ್ರ, ಮಹಮದ್ ಉಮರ್ ಖಾನ್(18) ಜೂನ್ 27 ರಂದು ಬೈಕ್‍ನಿಂದ ಬಿದ್ದು ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆತನನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರ ಸೂಚನೆಯಂತೆ ನಿಮಾನ್ಸ್ ನಲ್ಲಿಯೂ ಚಿಕಿತ್ಸೆ ಕೊಡಿಸಿ ಮತ್ತೆ ಮಂಡ್ಯ ಮಿಮ್ಸ್ ಆಸ್ಪತ್ರೆಯ ಕೊಠಡಿ ಸಂಖ್ಯೆ 22ರಲ್ಲಿ ಐಸಿಯುನಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಕೊಠಡಿ ಸಂಖ್ಯೆ 22ರಲ್ಲಿ ಒಟ್ಟು ಐದು ವೆಂಟಿಲೇಟರ್‍ಗಳು ಇದ್ದು ಅದರಲ್ಲಿ ಈಗಾಗಲೇ ನಾಲ್ಕು ವೆಂಟಿಲೇಟರ್‍ಗಳು ತಾಂತ್ರಿಕ ದೋಷ ಹೊಂದಿದ್ದವು.

ಇದನ್ನು ಸರಿಪಡಿಸುವ ಬಗ್ಗೆ ತಲೆಕೆಡಿಸಿಕೊಳ್ಳದ ಆಸ್ಪತ್ರೆ ಸಿಬ್ಬಂದಿ ಕೆಟ್ಟು ಹೋಗಿದ್ದ ವೆಂಟಿಲೇಟರ್‍ನಲ್ಲೇ ನನ್ನ ಮಗನಿಗೆ ಚಿಕಿತ್ಸೆ ನೀಡುತ್ತಿದ್ದು, ಇದ್ದಕ್ಕಿದ್ದಂತೆ ಮಗನಿಗೆ ಅಳವಡಿಸಿದ್ದ ವೆಂಟಿಲೇಟರ್ ಕೈಕೊಟ್ಟಿದೆ. ಪರಿಣಾಮ ನಮ್ಮ ಮಗ ಮಹಮದ್ ಉಮರ್‍ಖಾನ್ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಮೃತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಆಸ್ಪತ್ರೆ ಕಿಟಕಿ ಗಾಜುಗಳನ್ನು ಪುಡಿ ಆಕ್ರೋಶ ಹೊರಹಾಕಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದರು.

ಕೊನೆಗೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯಶಸ್ವಿಯಾದ್ರು. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪದೇ ಪದೇ ಇಂತಹ ಅಹಿತಕರ ಘಟನೆಗಳು ಪುನರಾವರ್ತನೆಯಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಮಗನಿಗೆ ಒದಗಿದ ದುಸ್ಥಿತಿ ಬೇರೆ ಯಾವ ತಂದೆ, ತಾಯಿಗೂ ಬರಬಾರದು ಎಂದು ಮೃತನ ತಂದೆ, ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

Share This Article
Leave a Comment

Leave a Reply

Your email address will not be published. Required fields are marked *