ಪಟೇಲರ ಪ್ರತಿಮೆ ಉದ್ಘಾಟನೆ ಮೋದಿಯ ಗಿಮಿಕ್ ಅಷ್ಟೇ: ಮಲ್ಲಿಕಾರ್ಜುನ ಖರ್ಗೆ

Public TV
1 Min Read

ಹುಬ್ಬಳ್ಳಿ: ಸರ್ದಾರ್ ವಲ್ಲಭಭಾಯಿ ಪಟೇಲರ ಮೂರ್ತಿ ಉದ್ಘಾಟಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರ ಮುಂಬರುವ ಲೋಕಸಭಾ ಚುನಾವಣೆಯ ಗಿಮಿಕ್ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಒಂದೊಂದು ವರ್ಷ, ಒಂದೊಂದು ರಾಷ್ಟ್ರ ನಾಯಕರ ನೆನಪು ಬರುತ್ತದೆ. ಇದು ಸಹ ಹಾಗೆ. ಇದೆಲ್ಲವೂ ಬಿಜೆಪಿಯವರ ಚುನಾವಣೆ ಗಿಮಿಕ್ ಅಷ್ಟೇ. ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಯಾವುದೇ ಕಚೇರಿಗಳಲ್ಲಿ ಸ್ವತಂತ್ರ ಹೋರಾಟಗಾರರು ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಗಳಿಲ್ಲ. ಅವರ ಕಚೇರಿಯಲ್ಲಿ ಕೇವಲ ಆರ್‍ಎಸ್‍ಎಸ್ ನಾಯಕರ ಫೋಟೋಗಳಿವೆ. ಕಾಂಗ್ರೆಸ್ ಮೊದಲಿನಿಂದಲೂ ರಾಷ್ಟ್ರ ನಾಯಕರನ್ನು ಗೌರವಿಸುತ್ತಾ ಬಂದಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಅಪ್ಪಣೆ ಇಲ್ಲದೇ, ಯಾವ ಗೃಹ ಮಂತ್ರಿಗಳು ಕೆಲಸ ಮಾಡುವುದಿಲ್ಲ. ಹೊಸ ಮೂರ್ತಿಗಳನ್ನು ಕಟ್ಟಿ, ಅವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋದಿಯವರು ಹಲವು ಹಗರಣಗಳನ್ನು ಎದುರಿಸುತ್ತಿದ್ದಾರೆ. ಅದನ್ನು ಬೇರೆಡೆ ಸೆಳೆಯಲು ಬಿಜೆಪಿ ಈ ರೀತಿಯ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಐದು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರೇ ನಮ್ಮ ಪ್ರಧಾನಿ ಅಭ್ಯರ್ಥಿ. ರಾಹುಲ್ ಗಾಂಧಿಯವರು ಖಚಿತವಾಗಿ ಪ್ರಧಾನಿಯಾಗುತ್ತಾರೆ. ಪಿ.ಚಿದಂಬರಂ ಅವರು ತಮ್ಮ ವೈಯಕ್ತಿವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *