ಬೆಂಗ್ಳೂರು ಹಾರರ್ – ಓಲಾ ಚಾಲಕನನ್ನು ಅಪಹರಿಸಿ ಬಿಡುಗಡೆಗಾಗಿ ಪತ್ನಿಯನ್ನು ಬೆತ್ತಲೆಗೊಳಿಸಿದ ಕಾಮುಕರು!

Public TV
3 Min Read

ಸಾಂಧರ್ಬಿಕ ಚಿತ್ರ

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದ ಕಾಮುಕರು ಓಲಾ ಚಾಲಕನನ್ನು ಅಪಹರಿಸಿ ಬಿಡುಗಡೆಗಾಗಿ ಆತನ ಪತ್ನಿಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಅಮಾನವೀಯ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಹೌದು, ನಗರದ ಬೊಮ್ಮಸಂದ್ರ ಏರಿಯಾದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಓಲಾ ಕ್ಯಾಬ್ ಚಾಲಕನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಆತನ ಹೆಂಡತಿಗೆ ಕರೆ ಮಾಡಿ ಹೆದರಿಸಿ, ಆಕೆಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ.

ಏನಿದು ಪ್ರಕರಣ?
ಕಳೆದ ಶುಕ್ರವಾರ ರಾತ್ರಿ ಬೊಮ್ಮಸಂದ್ರದಿಂದ ಕ್ಯಾಬ್ ಚಾಲಕನಿಗೆ ಪ್ರಯಾಣಿಕರನ್ನು ಪಿಕ್‍ಅಪ್ ಮಾಡಿಕೊಳ್ಳಲು ಕರೆ ಬಂದಿತ್ತು. ಕೂಡಲೇ ಚಾಲಕ ನಿಗಧಿತ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕ್ಯಾಬ್‍ಗಾಗಿ ಕಾಯುತ್ತಿದ್ದ 4 ಮಂದಿ, ಕಾರು ಬರುತ್ತಿದ್ದಂತೆ ಹತ್ತಿ ಕುಳಿತಿದ್ದಾರೆ. ಈ ವೇಳೆ ಚಾಲಕ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ, ಏಕಾಏಕಿ ನಾಲ್ವರು ಹಲ್ಲೆ ಮಾಡಿದ್ದಾರೆ. ಅಲ್ಲದೇ ಬಲವಂತವಾಗಿ ಚಾಲಕನ್ನು ಹಿಂಬದಿ ಸೀಟಿಗೆ ಹಾಕಿ, ಮತ್ತೊಬ್ಬ ಕಾರು ಚಾಲನೆಗೆ ಮುಂದಾಗಿದ್ದನು.

ಈ ವೇಳೆ ಕಾರನ್ನು ರಾಮನಗರ ಕಡೆ ಚಲಾಯಿಸಿದ್ದರು. ಅಲ್ಲದೇ ಕಾರು ಚಾಲಕನ ವಾಲೆಟ್ ನಲ್ಲಿದ್ದ 9 ಸಾವಿರ ರೂಪಾಯಿಯನ್ನು ನೋಡಿ ಹೆಚ್ಚಿನ ಹಣಕ್ಕಾಗಿ ಚಾಲಕನಿಗೆ ಚಿತ್ರಹಿಂಸೆ ನೀಡಿದ್ದಾರೆ. ಈ ವೇಳೆ ಚಾಲಕ ತನ್ನ ಅಳಿಯನಿಗೆ ಕರೆಮಾಡಿ 22 ಸಾವಿರ ರೂಪಾಯಿಯನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆಗೆ ಹಣ ಬರುತ್ತಿದ್ದಂತೆ ದುಷ್ಕರ್ಮಿಗಳು ಹತ್ತಿರದ ಎಟಿಎಂನಲ್ಲಿ ಹಣ ಡ್ರಾ ಮಾಡಿಸಿದ್ದಾರೆ. ನಂತರ ಮೈಸೂರು ಮಾರ್ಗವಾಗಿ ತೆರಳಿ, ಚನ್ನಪಟ್ಟಣದ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿ ಚಾಲಕನನ್ನು ಕೂಡಿ ಹಾಕಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು, ಚಾಲಕನ ಫೋನ್ ಪಡೆದು ಪತ್ನಿಗೆ ವಿಡಿಯೋ ಕಾಲ್ ಮಾಡಿ ಬೆತ್ತಲೆಯಾಗಿ ನಿಲ್ಲುವಂತೆ ಹೆದರಿಸಿದ್ದಾರೆ. ಅಲ್ಲದೇ ನಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದರೆ ನಿನ್ನ ಪತಿಯನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ. ಪತಿಯ ಪ್ರಾಣಕ್ಕಾಗಿ ಪತ್ನಿ ಬೆತ್ತಲಾಗಿದ್ದಾಳೆ. ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ನಮಗೆ ಹಣ ಬೇಕು ಇಲ್ಲದಿದ್ದರೇ, ನಿನ್ನ ಹೆಂಡತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ದುಷ್ಕರ್ಮಿಗಳ ಕೈಗೆ ಸಿಕ್ಕು ನಲುಗಿದ್ದ ಚಾಲಕ ಶನಿವಾರ ಮಧ್ಯಾಹ್ನ ಶೌಚಾಲಯದ ಕಿಟಕಿ ಒಡೆದು ಅವರಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಚಾಲಕ ತಪ್ಪಿಸಿಕೊಳ್ಳುತ್ತಿದ್ದಂತೆ ಹೆದರಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಚಾಲಕ ನೇರವಾಗಿ ಚನ್ನಪಟ್ಟಣ ಪೊಲೀಸರ ಬಳಿ ಹೋಗಿದ್ದಾನೆ. ಆದರೆ ದೂರು ದಾಖಲಿಸಿಕೊಳ್ಳುವ ಬದಲು ಪೊಲೀಸರು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ನೀನು ಬೆಂಗಳೂರಿಗೆ ಹೋಗಿ ದೂರು ನೀಡೆಂದು ಪೊಲೀಸರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಈ ವೇಳೆ ನಡೆದ ಎಲ್ಲಾ ಘಟನೆಯನ್ನು ಪೊಲೀಸರ ಮುಂದೆ ಚಾಲಕ ತೋಡಿಕೊಂಡಿದ್ದಾನೆ.

ಆಡಗೋಡಿ ಪೊಲೀಸರ ಆರೋಪಿಗಳ ವಿರುದ್ಧ ಅಪಹರಣ, ದರೋಡೆ ಮತ್ತು ಬೆದರಿಕೆ ದೂರನ್ನು ದಾಖಲಿಸಿಕೊಂಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾಗಿ ರಾಬಿನ್ ಮತ್ತು ಅರುಣ್ ಬೆತ್ನಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನುಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಇವರಿಬ್ಬರ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪತ್ರಿಕ್ರಿಯಿಸಿರುವ ಚಾಲಕ, ಪತ್ನಿಯ ಬೆತ್ತಲೆ ವಿಡಿಯೋ ಮಾಡಿರುವುದು ಕುಟುಂಬದ ಮಾನದ ಪ್ರಶ್ನೆ ಎಂದು ಪೊಲೀಸರು ಹೇಳಿದ್ದರು. ಹೀಗಾಗಿ ನಾನು ಆರೋಪಿಗಳ ವಿರುದ್ಧ ಅಪಹರಣ, ದರೋಡೆ ಮತ್ತು ಬೆದರಿಕೆಯ ದೂರನ್ನು ದಾಖಲಿಸಿದ್ದೇನೆಂದು ಹೇಳಿದ್ದಾರೆ.

ಘಟನೆ ಬಗ್ಗೆ ಒಲಾ ವಕ್ತಾರು ಪ್ರತಿಕ್ರಿಯಿಸಿ, ಇದೊಂದು ದುರದೃಷ್ಟಕರ ಘಟನೆ, ಚಾಲಕ ಮತ್ತು ಅವರ ಕುಟುಂಬದವರು ಎದುರಿಸಿದ ಪರಿಸ್ಥಿತಿ ನಿಜಕ್ಕೂ ಆಘಾತಕಾರಿ. ಇಂತಹ ಕೃತ್ಯವನ್ನು ನಾವು ಖಂಡಿಸುತ್ತೇವೆ. ಘಟನೆ ಬೆಳಕಿಗೆ ಬಂದ ಕೂಡಲೇ ಆ ಪ್ರಯಾಣಿಕರ ಒಲಾ ಖಾತೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೇವೆ. ಈ ಮಧ್ಯೆ ಚಾಲಕನಿಗೆ ಮುಂದಿನ ತನಿಖೆ ವೇಳೆ ಎಲ್ಲಾ ರೀತಿಯಲ್ಲಿಯೂ ಸಹಕರಿಸುವುದಾಗಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *