40 ರೂ. ಬದಲಿಗೆ 34,000 ರೂ. ಪೇ ಮಾಡಿದ ಪ್ರಯಾಣಿಕ – ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Public TV
3 Min Read

ಮಡಿಕೇರಿ: ಪ್ರಯಾಣಿಕರೊಬ್ಬರು 40 ರೂ. ಬದಲಿಗೆ 34 ಸಾವಿರ ರೂ. ಗೂಗಲ್ ಪೇ ಮಾಡಿದ್ದರು. 34 ಸಾವಿರ ಹಣವನ್ನು ಹಿಂತಿರುಗಿಸುವ ಮೂಲಕ ಮಡಿಕೇರಿಯ ಆಟೋ ಚಾಲಕ (Auto Driver) ಸತೀಶ್ ಹಾಗೂ ಆಟೋ ಮಾಲೀಕರ, ಚಾಲಕರ ಸಂಘದವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಜೂ. 11ರಂದು ಎಮ್ಮೆಮಾಡು ನಿವಾಸಿ ಆಲಿ ಎಂಬವರು ಮಡಿಕೇರಿಯ (Madikeri) ಕಾನ್ವೆಂಟ್ ಜಂಕ್ಷನ್ ಬಳಿಯಿಂದ ಆಟೋ ಏರಿದ್ದು, ಸಬ್ ರಿಜಿಸ್ಟ್ರಾರ್ ಕಛೇರಿ ಬಳಿ ಇಳಿದಿದ್ದರು. ಅವರು ಆಟೋ ಬಾಡಿಗೆಯ ಹಣ 40 ರೂ. ನೀಡಬೇಕಿತ್ತು. ಆದರೆ ಅವರ ಕೈಯಲ್ಲಿ ಹಣವಿರದ ಕಾರಣ ಬಾಡಿಗೆಯ ಹಣ ಸೇರಿಸಿ 500 ರೂ. ಗೂಗಲ್ ಪೇ ಮಾಡುವುದಾಗಿ ಹೇಳಿ, ಬಾಡಿಗೆ ಹಣ ಕಳೆದು ಉಳಿದ 460 ರೂ. ನಗದನ್ನು ನೀಡುವಂತೆ ಕೇಳಿಕೊಂಡಿದ್ದರು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

ಆಟೋ ಚಾಲಕ ಸತೀಶ್ ಅವರು ತಮ್ಮ ಬಳಿ ಅಷ್ಟು ಹಣ ಇಲ್ಲದಿರುವುದರಿಂದ 340 ರೂ. ಗೂಗಲ್ ಪೇ ಮಾಡುವಂತೆ ಹೇಳಿ, ಆಲಿ ಅವರಿಗೆ 300 ರೂ. ಕೊಟ್ಟಿದ್ದರು. ಆದರೆ ಆಲಿಯವರು 340 ರೂ.ಗಳನ್ನು ಗೂಗಲ್ ಪೇ ಮಾಡುವ ಬದಲಾಗಿ ಅರಿವಿಲ್ಲದೆ 34,000 ರೂ.ಗಳನ್ನು ಚಾಲಕನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಿದ್ದರು. ನಂತರ ಇದ್ಯಾವುದರ ಅರಿವಿಲ್ಲದೆ ಇಬ್ಬರೂ ಅವರವರ ಪಾಡಿಗೆ ಹೊರಟು ಹೋಗಿದ್ದರು. ಇದನ್ನೂ ಓದಿ: 1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

ಇದಾದ ಸ್ವಲ್ಪ ಹೊತ್ತಿನ ಬಳಿಕ ಟ್ರಾನ್ಸಾಕ್ಷನ್ ಹಿಸ್ಟರಿ ಪರಿಶೀಲಿಸಿದ ಚಾಲಕ ಸತೀಶ್ ಅವರಿಗೆ ವಿಷಯ ಗಮನಕ್ಕೆ ಬಂದಿದೆ. ಹೆಚ್ಚು ಹಣ ಜಮೆ ಮಾಡಿದ ಆಲಿಯವರನ್ನು ಸಂಪರ್ಕಿಸಲು ಯಾವುದೇ ಸಂಪರ್ಕ ಸಂಖ್ಯೆ ಸ್ಕ್ಯಾನರ್‌ನಲ್ಲಿ ಕೂಡ ಸಿಗದ ಕಾರಣ ಅವರನ್ನು ಸಂಪರ್ಕಿಸಲು ಕಷ್ಟವಾಗಿತ್ತು. ಹಾಗೆಯೇ ಹೆಚ್ಚುವರಿ ಹಣ ನೀಡಿದ ಆಲಿಯವರಿಗೆ ಜೂ. 12ರ ಮಧ್ಯಾಹ್ನದವರೆಗೂ ವಿಷಯ ಗಮನಕ್ಕೆ ಬಂದಿರಲಿಲ್ಲ.

ಬಳಿಕ ಬ್ಯಾಂಕಿಗೆ ಬಂದು ಪಾಸ್ ಪುಸ್ತಕವನ್ನು ಪರಿಶೀಲಿಸಿದಾಗ 34,000 ರೂ.ಗಳನ್ನು ಹಿಂದಿನ ದಿನ ಆಟೋ ಚಾಲಕನಿಗೆ ನೀಡಿರುವುದು ಗೋಚರಿಸಿದೆ. ಈ ಕುರಿತು ಆಟೋ ಮಾಲೀಕರ, ಚಾಲಕರ ಸಂಘಕ್ಕೆ ಮಾಹಿತಿ ನೀಡಿದ ಮೇರೆಗೆ ಸಂಘದ ಮೂಲಕ ಮಾಹಿತಿಯನ್ನು ಗ್ರೂಪ್‌ನಲ್ಲಿ ಶೇರ್ ಮಾಡಲಾಗಿತ್ತು. ಇತರೆ ಚಾಲಕರು ಜೂ. 11ರಂದು ನಡೆದ ಘಟನೆಯ ಬಗ್ಗೆ ಚಾಲಕ ಸತೀಶ್ ತಿಳಿಸಿರುವುದಾಗಿ ಸಂಘದವರಲ್ಲಿ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಭದ್ರತಾ ವೈಫಲ್ಯ?- ಡ್ಯಾಂನ ಕ್ರಸ್ಟ್ ಗೇಟ್ ಬಳಿ ಓಡಾಡುತ್ತ ಸೆಲ್ಫಿ ವೀಡಿಯೋ

ಸಂಘದಿಂದ ಚಾಲಕ ಸತೀಶ್ ಅವರನ್ನು ಸಂಪರ್ಕಿಸಿ, ಘಟನೆಯ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಜೂ. 11ರಂದೇ ಆಲಿರವರ ಖಾತೆಗೆ 1 ರೂ. ಗೂಗಲ್ ಪೇ ಮಾಡಿ ಅವರದ್ದೇ ಖಾತೆ ಎಂಬ ಬಗ್ಗೆ ಖಾತರಿ ಪಡಿಸುವಂತೆ ಮೆಸೇಜ್ ಮಾಡಿರುವುದಾಗಿ ಚಾಲಕ ಸತೀಶ್ ಸ್ಪಷ್ಟಪಡಿಸಿದ್ದರು. ಆದರೆ ಆಲಿ ಅವರು ಅದನ್ನು ಗಮನಿಸಿರಲಿಲ್ಲ. ಇದನ್ನೂ ಓದಿ: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ

ಜೂ. 12ರಂದು ಚಾಲಕ ಸತೀಶ್ ಅವರು ಆಲಿರವರಿಗೆ ಸಂಘದ ಮಧ್ಯಸ್ಥಿಕೆಯಲ್ಲಿ ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಹಣ ಕಳೆದುಕೊಂಡಿದ್ದ ಆಲಿ ಅವರು ಸಂಘದ ಈ ಸೇವೆಯನ್ನು ಮೆಚ್ಚಿ ಸಂಘಕ್ಕೆ ಧನ ಸಹಾಯ ನೀಡಲು ಮುಂದಾದರು. ಆದರೆ ಇದಕ್ಕೆ ಸಂಘವು ನಿರಾಕರಿಸಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ದಿನು ಬಾರನ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

ಇಂತಹ ಪ್ರಾಮಾಣಿಕ ಸೇವೆಯ ಪ್ರತಿಫಲವಾಗಿ ಆಟೋ ಚಾಲಕರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿರುವುದು ದೊಡ್ಡ ಕೊಡುಗೆಯಾಗಿದೆ. ಯಾವುದೇ ವಸ್ತು ಆಗಿರಲಿ, ಕಳೆದುಕೊಂಡವರು ಯಾರೇ ಆಗಿರಲಿ ವಾಸ್ತವ ಅರಿತಲ್ಲಿ ಈ ರೀತಿ ಸಹಕರಿಸಲು ಸಂಘ ಸದಾ ಸಿದ್ಧವಾಗಿರುತ್ತದೆ ಎಂದು ಇತರೆ ಚಾಲಕರಿಗೆ ಮಾದರಿಯಾಗಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಸತೀಶ್ ಅವರಿಗೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

Share This Article