ಆತ್ಮಹತ್ಯೆ ಮಾಡಿಕೊಂಡನೆಂದು ಮಗನ ಅಂತ್ಯಸಂಸ್ಕಾರ ಮಾಡಿದ ಪೋಷಕರಿಗೆ ಈಗ ಕೊಲೆ ಶಂಕೆ

Public TV
1 Min Read

ಯಾದಗಿರಿ: ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿರುವ ಘಟನೆ ವಡಗೇರಾ ಗ್ರಾಮದಲ್ಲಿ ನಡೆದಿದೆ. ಮಗ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅಂತ್ಯಸಂಸ್ಕಾರ ನೆರವೇರಿಸಿದ್ದ ಪೋಷಕರು ಇದೀಗ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ವಡಗೇರಾ ನಿವಾಸಿ ದೇವಪ್ಪ ಮೃತ ವ್ಯಕ್ತಿ. ದೇವಪ್ಪ ಹಾಗೂ ಇದೇ ಗ್ರಾಮದ ನಿವಾಸಿ ಬಸಮ್ಮ ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಪ್ರೇಯಸಿ ಪೋಷಕರು ಮದುವೆ ನಿರಾಕರಿಸಿದಕ್ಕೆ ಡಿಸೆಂಬರ್ 10 ರಂದು ದೇವಪ್ಪ ಗ್ರಾಮದ ಹೊರಭಾಗದಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ದೇವಪ್ಪನ ಪೋಷಕರು ಮೃತನ ಅಂತ್ಯಸಂಸ್ಕಾರ ಮಾಡಿದ್ದರು.

ಆದರೆ ಈ ಪ್ರಕರಣದಲ್ಲಿ ದೇವಪ್ಪ ವಿಷ ಸೇವಿಸಿ ಸಾವನ್ನಪ್ಪಿಲ್ಲ ಎನ್ನುವುದಕ್ಕೆ ಈಗ ಪೋಷಕರಿಗೆ ದೇವಪ್ಪನ ಮೊಬೈಲ್ ನಲ್ಲಿರುವ ಕೆಲವು ಸಾಕ್ಷಿಗಳು ಸಿಕ್ಕಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಪ್ಪನನ್ನು ಪ್ರೇಯಸಿ ಬಸಮ್ಮಳ ಕಡೆಯವರು ಗ್ರಾಮದ ಹೊರಭಾಗಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

ಕೊಲೆ ದೂರಿನ ಹಿನ್ನಲೆಯಲ್ಲಿ ಮಂಗಳವಾರದಂದು ಸಹಾಯಕ ಆಯುಕ್ತ ಡಾ. ಜಗದೀಶ್, ವಡಗೇರಾ ಪೊಲೀಸರು ಹಾಗೂ ವೈದ್ಯರ ಸಮ್ಮುಖದಲ್ಲಿ ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ದೇವಪ್ಪ ವಿಷ ಸೇವಿಸಿ ಸಾವನ್ನಪ್ಪಿದ್ದಾನಾ ಅಥವಾ ಕೊಲೆ ನಡೆದಿದ್ಯಾ ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟವಾಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *