ಹೈದರಾಬಾದ್: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಗುಂಟೂರಿನ ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶ ಗುಂಟೂರ್ ಜಿಲ್ಲೆಯಲ್ಲಿ ನಡೆದಿದೆ.
ದುಂಗಾ ವೆಂಕಯ್ಯ (45), ಪತ್ನಿ ರಜನಿ (39) ಈ ದಂಪತಿಯ ಮಗಳು ಕೃಷ್ಣ ವೇಣಿ (19) ಆತ್ಮಹತ್ಯೆಗೆ ಶರಣಾದ ಕುಟುಂಬದವರಾಗಿದ್ದು, ಖಮ್ಮಂ ಜಿಲ್ಲೆಯ ಮಾಧೀರಾದಲ್ಲಿ ಈ ಘಟನೆ ಸಂಭವಿಸಿದೆ.
ಕೃಷ್ಣ ವೇಣಿ ಫ್ಯಾಷನ್ ಟೆಕ್ನಾಲಜಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕುಟುಂಬದ ಸದಸ್ಯರು ರೈಲಿನಲ್ಲಿ ಹೋಗುತ್ತಿದ್ದಾಗ ಪೋಷಕರು ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆಗ ಕೃಷ್ಣ ವೇಣಿ ತಾನು ಪ್ರೀತಿಸಿದ ಹುಡುಗನ ಬಗ್ಗೆ ಹೇಳಿದ್ದಾಳೆ. ಆದರೆ ಪೋಷಕರು ಆಕೆಯ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ನಾವು ನೋಡಿದ ಹುಡುಗನನ್ನೆ ಮದುವೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.
ಪೋಷಕರ ಮಾತಿಗೆ ಒಪ್ಪದ ಕೃಷ್ಣ ವೇಣಿ ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಇದಕ್ಕೆ ಪೋಷಕರು ನಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮುಂದೆ ಅವಮಾನವಾಗುತ್ತದೆ. ನೀನು ಮದುವೆಗೆ ಒಪ್ಪದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕೊನೆಗೆ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪೋಷಕರು ಮುಂದಾಗುತ್ತಾರೆ.
ಪೋಷಕರ ಆತ್ಮಹತ್ಯೆಯನ್ನು ತಡೆಯಲು ಕೃಷ್ಣವೇಣಿ ಪ್ರಯತ್ನ ಮಾಡುತ್ತಾಳೆ. ಆದರು ಅದು ಸಾಧ್ಯವಾಗದೇ ಅವರ ಜೊತೆ ಆಕೆಯೂ ರೈಲಿನಿಂದ ಜಿಗಿಯುತ್ತಾಳೆ. ರೈಲಿನಿಂದ ಬಿದ್ದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಟುಂಬದಲ್ಲಿನ ಮದುವೆ ಚರ್ಚೆಯ ಬಗ್ಗೆ ಪೊಲೀಸರಿಗೆ ಕೃಷ್ಣವೇಣಿಯ ತಮ್ಮ ಮಾಹಿತಿ ನೀಡಿದ್ದಾನೆ.
ಪೋಷಕರ ಜೊತೆ ಮಗನು ರೈಲಿನಲ್ಲಿ ಪ್ರಯಾಣಿಸಿದ್ದು, ಆತ ಕಾಲೇಜಿನಲ್ಲಿ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೂವರ ಮೃತದೇಹಗಳನ್ನು ಮಂಗಳವಾರ ಗುಂಟೂರಿಗೆ ರವಾನಿಸಿದ್ದಾರೆ.