ಪಂಜಾಬ್ ಸಿಎಂ ಪತ್ನಿಗೆ ಬಂತು ‘ಬ್ಯಾಂಕ್’ ಕಾಲ್ – 23 ಲಕ್ಷ ರೂ. ಹೋಯ್ತು

Public TV
1 Min Read

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರೀನೀತ್ ಕೌರ್ ಸೈಬರ್ ವಂಚನೆಗೆ ಬಲಿಯಾಗಿದ್ದು, 23 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಪಟಿಯಾಲಾದ ಕಾಂಗ್ರೆಸ್ ಸಂಸದೆಯೂ ಆಗಿರುವ ಪ್ರೀನೀತ್ ಕೌರ್ ಅವರನ್ನು ಕೆಲ ದಿನಗಳ ಹಿಂದೆ ವಂಚಿಸಲಾಗಿತ್ತು. ಜಾರ್ಖಂಡ್‍ನ ರಾಂಚಿಯಲ್ಲಿ ಆರೋಪಿಯ ಫೋನ್ ಕರೆಗಳನ್ನು ಟ್ರೇಸ್ ಮಾಡಿ ಆತನನ್ನು ಬಂಧಿಸುವಲ್ಲಿ ಪಂಜಾಬ್ ಪೊಲೀಸರ ತಂಡ ಯಶಸ್ವಿಯಾಗಿದೆ. ಆತನನ್ನು ಜಾರ್ಖಂಡ್‍ನಿಂದ ಕರೆ ತರಲಾಗುತ್ತಿದೆ ಎಂದು ಪಟಿಯಾಲಾದ ಹಿರಿಯ ಎಸ್‍ಪಿ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.

ವಂಚಿಸಿದ್ದು ಹೇಗೆ?
ಕೆಲ ದಿನಗಳ ಹಿಂದೆ ಪ್ರೀನೀತ್ ಕೌರ್ ಅವರು ಸಂಸತ್ ಅಧಿವೇಶನಕ್ಕೆ ದೆಹಲಿಗೆ ತೆರಳಿದ್ದರು. ಆಗ ಅವರು ಕರೆಯೊಂದನ್ನು ಸ್ವೀಕರಿಸಿದ್ದಾರೆ. ನಾನು ರಾಷ್ಟ್ರೀಕೃತ ಬ್ಯಾಂಕ್‍ನ ಮ್ಯಾನೇಜರ್ ಎಂದು ವ್ಯಕ್ತಿಯೊಬ್ಬ ಫೋನ್ ಕರೆಯಲ್ಲಿ ಹೇಳಿದ್ದಾನೆ. ಸಂಬಳವನ್ನು ನಿಮ್ಮ ಖಾತೆಗೆ ಹಾಕಬೇಕು ದಯವಿಟ್ಟು ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ತಿಳಿಸಿ ಎಂದು ನಯವಾಗಿ ಕೇಳಿದ್ದಾನೆ.

ಆರೋಪಿಯು ಬ್ಯಾಂಕ್ ಮ್ಯಾನೇಜರ್ ರೀತಿ ಮಾತನಾಡಿ ಸಂಸದೆಯನ್ನು ಯಾಮಾರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲದೆ, ಅವರಿಂದ ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ಪಿನ್, ಸಿವಿವಿ ನಂಬರ್ ಹಾಗೂ ಸಂಸದ ಮೊಬೈಲ್‍ಗೆ ಬಂದಿದ್ದ ಓಟಿಪಿ(ಒನ್ ಟೈಮ್ ಪಾಸ್ವರ್ಡ್) ಸಹ ಪಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಪಡೆದು ವ್ಯಕ್ತಿ ಕಾಲ್ ಕಟ್ ಮಾಡುವಷ್ಟರಲ್ಲಿ ಬ್ಯಾಂಕ್ ಅಕೌಂಟ್‍ನಿಂದ 23 ಲಕ್ಷ ರೂ. ತೆಗೆಯಲಾಗಿದೆ ಎಂದು ಸಂಸದೆ ಪ್ರೀನೀತ್ ಕೌರ್ ಅವರಿಗೆ ಎಸ್‍ಎಂಎಸ್ ಬಂದಿದೆ. ತಕ್ಷಣವೇ ಕೌರ್ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಆರೋಪಿಯ ಮೊಬೈಲ್ ಟ್ರೇಸ್ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *