ಪಾಲಾರ್ ಬಾಂಬ್ ಸ್ಫೋಟ ಕೇಸ್‌ ಆರೋಪಿ, ಕಾಡುಗಳ್ಳ ವೀರಪ್ಪನ್ ಸಹಚರ ಅನಾರೋಗ್ಯದಿಂದ ನಿಧನ

Public TV
1 Min Read

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ (Veerappan) ಸಹಚರ, ಪಾಲಾರ್ ಬಾಂಬ್ ಸ್ಪೋಟದ (Palar Bomb Blast)  ಪ್ರಮುಖ ಅಪರಾಧಿ ಜ್ಞಾನಪ್ರಕಾಶ್ (Gnana Prakash) ನಿಧನ ಹೊಂದಿದ್ದಾರೆ.

ಜಾಮೀನಿನ ಮೇಲೆ ಮೈಸೂರು ಜೈಲಿನಿಂದ ಬಿಡುಗಡೆಯಾಗಿದ್ದರು. 2022ರ ಡಿಸೆಂಬರ್ 20 ರಂದು ಮೈಸೂರು ಜೈಲಿನಿಂದ ಬಿಡುಗಡೆ ಆಗಿದ್ದರು. ಇದನ್ನೂ ಓದಿ: KSRTC ಟ್ರೇಡ್‍ಮಾರ್ಕ್ ಉಳಿಸಿಕೊಂಡ ಕರ್ನಾಟಕ- ಕಾನೂನು ಸಮರ ಸೋತ ಕೇರಳ

1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಜ್ಞಾನಪ್ರಕಾಶ್ ಭಾಗಿಯಾಗಿದ್ದರು ಎಂದು ಮೈಸೂರಿನ ಟಾಡಾ ನ್ಯಾಯಾಲಯ 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. 2014ರಲ್ಲಿ ಸುಪ್ರಿಂ ಕೋರ್ಟ್, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ತೀರ್ಪು ನೀಡಿತ್ತು.

ಬೆಳಗಾವಿಯ ಹಿಂಡಲಗಾ ಹಾಗೂ ಮೈಸೂರು ಕಾರಾಗೃಹದಲ್ಲಿ 29 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಜ್ಞಾನಪ್ರಕಾಶ್‌ಗೆ ಮೂರು ವರ್ಷಗಳ ಹಿಂದೆ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮಾನವೀಯತೆ ಆಧಾರದ ಮೇಲೆ ಸುಪ್ರೀಂ ಕೋರ್ಟ್ 2022ರ ನ.26ರಂದು ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರಿಡಲು ಚಿಂತನೆ – ಟಿಪ್ಪು ಹೆಸರು ಶೌಚಾಲಯಕ್ಕೆ ಇಡಲಿ ಎಂದ ಯತ್ನಾಳ್

ಮೈಸೂರಿನ ಕಾರಾಗೃಹದಿಂದ 2022ರ ಡಿ.20ರಂದು ಬಿಡುಗಡೆಯಾಗಿದ್ದ ಅವರು ಸಂದನಪಾಳ್ಯದಲ್ಲಿ ವಾಸವಿದ್ದರು. ಅನಾರೋಗ್ಯದಿಂದ ಚೇತರಿಸಿಕೊಳ್ಳದ ಜ್ಞಾನಪ್ರಕಾಶ್, ಶುಕ್ರವಾರ (ಇಂದು) ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಂದನಪಾಳ್ಯದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Share This Article