ಪ್ರತಿಪಕ್ಷಗಳ ರಾಜಕಾರಣದಿಂದ ಶತ್ರುಗಳು ಲಾಭ ಪಡೆಯುತ್ತಿದ್ದಾರೆ: ಪ್ರಧಾನಿ ಮೋದಿ

Public TV
1 Min Read

ವಿಶಾಖಪಟ್ಟಣಂ: ದೇಶದಲ್ಲಿ ಪ್ರತಿಪಕ್ಷಗಳು ಮಾಡುತ್ತಿರುವ ರಾಜಕಾರಣದ ಆಟಗಳಿಂದ ಶತ್ರು ದೇಶ ಲಾಭ ಪಡೆಯುತ್ತಿದೆ. ಇದರಿಂದ ಭಾರತಕ್ಕೆ ಹಾನಿ ಅನುಭವಿಸುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರಹಾಕಿದ್ದಾರೆ.

ಶುಕ್ರವಾರದಂದು ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮೋದಿ ಅವರು ಬಳಿಕ ಕನ್ಯಾಕುಮಾರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ, ಕೆಲವು ವಿರೋಧ ಪಕ್ಷಗಳು ಮೋದಿ ಮೇಲಿರುವ ದ್ವೇಷಕ್ಕೆ ದೇಶವನ್ನು ಕೂಡ ದ್ವೇಷಿಸಲು ಆರಂಭಿಸಿವೆ. ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವನ್ನು ಇಡೀ ಜಗತ್ತೇ ಬೆಂಬಲಿಸುತ್ತಿದೆ. ಆದ್ರೆ ಭಾರತದಲ್ಲೇ ಇರುವ ಕೆಲವು ಪಕ್ಷಗಳು ಹಾಗೂ ಅದರ ನಾಯಕರು ನಮ್ಮ ಹೋರಾಟವನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಇದರಿಂದ ಶತ್ರು ದೇಶಕ್ಕೆ ಲಾಭವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

26/11ರಲ್ಲಿ ಮುಂಬಯಿ ದಾಳಿಯಾದಾಗ ಅಂದಿನ ಸರ್ಕಾರ ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಆದ್ರೆ ಉರಿ ದಾಳಿಯಾದಾಗ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರಿಗೆ ಪಾಠ ಕಲಿಸಿತ್ತು. ಬಳಿಕ ಪುಲ್ವಾಮ ದಾಳಿ ನಡೆದಾಗ ಭಾರತೀಯ ವಾಯುಪಡೆ ಏರ್ ಸ್ಟ್ರೈಕ್ ಮಾಡಿರುವುದು ನಿಮ್ಮೆಲ್ಲರಿಗೂ ಗೊತ್ತಿದೆ. ನಾವು ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಉಗ್ರರ ವಿರುದ್ಧ ಹೋರಾಡಲು ಸೇನೆಗೆ ನಮ್ಮ ಸರ್ಕಾರ ಮುಕ್ತ ಅವಕಾಶ ನೀಡಿದೆ. ಉಗ್ರರ ಕೈಯಲ್ಲಿ ಭಾರತ ಅಸಹಾಯಕವಾಗಿ ಸಿಲುಕುವ ಕಾಲ ಮುಗಿದೋಗಿದೆ. ದೇಶ ಸೇವೆಯಲ್ಲಿರುವ ನಮ್ಮ ಯೋಧರಿಗೆ ನನ್ನ ನಮನಗಳು ಎಂದು ಹೇಳಿದರು.

ಬಳಿಕ ಮಹಾ ಘಟಬಂಧನ ಕುರಿತು ಮಾತನಾಡಿ, ಯಾಕೆ ಪ್ರತಿಪಕ್ಷ ನಾಯಕರು ಭಾರತವನ್ನು ದುರ್ಬಲಗೊಳಿಸಲು ನೋಡುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ಪಕ್ಷಗಳ ರಾಜಕಾರಣಕ್ಕೆ ದೇಶವನ್ನು ದುರ್ಬಲಗೊಳಿಸಿ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ. ಯಾಕೆ ಈ ರೀತಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ? ಮೋದಿ ಮೇಲಿನ ದ್ವೇಷಕ್ಕೆ ದೇಶವನ್ನು ಯಾಕೆ ದ್ವೇಷಿಸಲು ಆರಂಭಿಸಿದ್ದಾರೆ? ಇದರಿಂದ ಪಾಕಿಸ್ತಾನ ಲಾಭ ಪಡೆಯುತ್ತಿದೆ. ಎಂದು ವಿಪಕ್ಷ ನಾಯಕರನ್ನು ಪ್ರಶ್ನಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *