9 ದಿನಗಳಲ್ಲಿ 3ನೇ ಬಾರಿ ಪತ್ರಕರ್ತರಿಗೆ ನೋ ಎಂಟ್ರಿ: ಬಾಲಕೋಟ್ ಪ್ರದೇಶಕ್ಕೆ ಮಾಧ್ಯಮಗಳಿಗೆ ನಿಷೇಧ

Public TV
2 Min Read

ಇಸ್ಲಾಮಾಬಾದ್: ಜೈಷ್ ಉಗ್ರ ಸಂಘಟನೆಯ ಅಡಗು ತಾಣವಿರುವ ಬಾಲಕೋಟ್ ಪ್ರದೇಶಕ್ಕೆ ಭೇಟಿ ನೀಡಲು ಪತ್ರಕರ್ತರಿಗೆ ಅನುಮತಿಯನ್ನು ನಿರಾಕರಿಸಲಾಗಿದೆ.

ಪಾಕಿಸ್ತಾನ ಸರ್ಕಾರ ರಾಯಟರ್ಸ್ ಸುದ್ದಿಸಂಸ್ಥೆಯ ಪ್ರತಿನಿಧಿಗಳಿಗೆ ಉಗ್ರ ಸಂಘಟನೆಯ ಮದರಸಾ ಇರುವ ಸ್ಥಳಕ್ಕೆ ಭೇಟಿ ನೀಡಲು ಮತ್ತೊಮ್ಮೆ ಅವಕಾಶ ನಿರಾಕರಿಸಿದೆ. ಕಳೆದ 9 ದಿನಗಳಲ್ಲಿ ಮೂರನೇ ಬಾರಿ ಮಾಧ್ಯಮ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.

ಬಾಂಬ್ ಬಿದ್ದ ಸ್ಥಳಕ್ಕೆ ಭೇಟಿ ನೀಡಲು ನಾವು ಮೂರು ಬಾರಿ ಪ್ರಯತ್ನಿಸಿ ವಿಫಲರಾಗಿದ್ದೇವೆ. ಪಾಕ್ ಸೇನೆ ಭದ್ರತೆಯ ನೆಪ ಹೇಳಿ ಯಾರಿಗೂ ಅವಕಾಶವನ್ನೇ ನೀಡುತ್ತಿಲ್ಲ. ನಮ್ಮನ್ನು 100 ಮೀಟರ್ ದೂರದಿಂದ ತಡೆಯಲಾಗಿತ್ತು ಎಂದು ರಾಯಟರ್ಸ್ ವರದಿಗಾರರು ಹೇಳಿದ್ದಾರೆ.

ದಾಳಿ ನಡೆದ ಸಮೀಪದ ಗ್ರಾಮಸ್ಥರನ್ನು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದ್ದಾರೆ. ಈ ವೇಳೆ ಜೈಷ್ ಸಂಘಟನೆ ಬಾಲಕೋಟ್ ಎತ್ತರದ ಪ್ರದೇಶದಲ್ಲಿ ಮದರಸಾ ನಡೆಸುತಿತ್ತು. ಇಲ್ಲಿ ಉಗ್ರರಿಗೆ ಜಿಹಾದ್ ಬಗ್ಗೆ ಪಾಠ ಹೇಳಿಕೊಡುತಿತ್ತು ಎಂದು ತಿಳಿಸಿದ್ದಾರೆ.

 ಬಾಲಕೋಟ್ ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಬಾಂಬ್ ದಾಳಿ ನಡೆದಿದ್ದು, 15 ಪೈನ್ ಮರಗಳು ನಾಶವಾಗಿದೆ. ಯಾವುದೇ ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆದಿಲ್ಲ ಎಂದು ಪಾಕ್ ಸರ್ಕಾರ ಹೇಳಿಕೆ ನೀಡಿತ್ತು. ಆದರೆ ಮಾಧ್ಯಮ ಪ್ರತಿನಿಧಿಗಳಿಗೆ ಅನುಮತಿ ನಿರಾಕರಿಸಿದ್ದನ್ನು ನೋಡಿದಾಗ ಪಾಕ್ ಈ ವಿಚಾರದಲ್ಲಿ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗಿದೆ. ಪತ್ರಕರ್ತರಿಗೆ ಅನುಮತಿ ನೀಡಿದರೆ ದಾಳಿಯ ಬಳಿಕ ಹೇಳಿಕೊಂಡು ಬಂದಿರುವ ಸುಳ್ಳು ಬಯಲಾಗಬಹುದು ಎನ್ನುವ ಭೀತಿಗೆ ಭದ್ರತಾ ನೆಪದ ತಂತ್ರ ಹೂಡಿದೆ.

ಭಾರತ ಸರ್ಕಾರ ಉಗ್ರರ ಕ್ಯಾಂಪ್ ಮೇಲೆ ನಾವು ಬಾಂಬ್ ದಾಳಿ ನಡೆಸಿದ್ದೇವೆ. ಈ ದಾಳಿಯಲ್ಲಿ ಹಲವು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು. ಏರ್ ಚೀಫ್ ಮಾರ್ಷಲ್ ಧನೋವಾ ಅವರು ನಮಗೆ ನೀಡಿದ ಗುರಿಗಳಿಗೆ ಸೈನಿಕರು ಬಾಂಬ್ ದಾಳಿ ಮಾಡಿದ್ದಾರೆ. ಎಷ್ಟು ಜನ ಉಗ್ರರು ಸಾವನ್ನಪ್ಪಿದ್ದಾರೆ ಎನ್ನುವುದನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಸುಳ್ಳು ಹೇಳಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಪಾಕಿಸ್ತಾನ – ಇಲ್ಲಿದೆ ಪ್ರೂಫ್

ಹೇಳೋದೆಲ್ಲ ಸುಳ್ಳು:
ಸುಳ್ಳು ಹೇಳುವುದರಲ್ಲಿ ಪಾಕಿಸ್ತಾನದಷ್ಟು ನಿಸ್ಸೀಮ ದೇಶ ಬೇರೊಂದಿಲ್ಲ. 2017 ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ಕಳೆದುಕೊಂಡು ನಗೆಪಾಟಲಿಗೆ ಗುರಿಯಾಗಿತ್ತು. ವಿಶ್ವ ಸಂಸ್ಥೆಯ 72ನೇ ಮಹಾ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ನೈಜ ಬಣ್ಣವನ್ನು ತೆರೆದಿಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತ ಭಯೋತ್ಪಾದನೆಯ ತವರು ನೆಲ ಎಂಬ ಆರೋಪವನ್ನು ಮಾಡಿತ್ತು. ಆದರೆ ಈ ಆರೋಪವನ್ನು ಮಾಡಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮಾನ ವಿಶ್ವಸಂಸ್ಥೆಯಲ್ಲಿ ತನ್ನ ಅಧಿಕಾರಿಯ ಮೂಲಕ ಹರಾಜು ಆಗಿತ್ತು.

ಪಾಕಿಸ್ತಾನ ಪ್ರತಿನಿಧಿ ಮಲೇಹಾ ಲೋಧಿ ಭಾರತದಲ್ಲಿ ಹೇಗೆ ಹಿಂಸಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಲು ಪೆಲೆಟ್ ಗನ್‍ನಿಂದ ಗಾಯಗೊಂಡಿದ್ದ ಯುವತಿ ಫೋಟೋ  ಪ್ರದರ್ಶಿಸಿದ್ದರು. ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿತ್ತು.

ಗಾಜಾ ಯುದ್ಧದ ಸಂದರ್ಭದಲ್ಲಿ ದಾವಿ ಅಬು ಜೊಮ್(17) ಯುವತಿ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *