ಪನಾಮ ಪ್ರಕರಣದಲ್ಲಿ ಷರೀಫ್ ದೋಷಿ: ಪ್ರಧಾನಿಯಾಗಿ ಮುಂದುವರಿಯಲು ಅನರ್ಹ ಎಂದ ಸುಪ್ರೀಂ

Public TV
1 Min Read

ಇಸ್ಲಾಮಾಬಾದ್: ಪನಾಮಾ ಪೇಪರ್ಸ್ ಹಗರಣದಲ್ಲಿ ಪ್ರಧಾನಿ ನವಾಜ್ ಷರೀಫ್ ದೋಷಿ ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಶುಕ್ರವಾರ ತೀರ್ಪು ನೀಡಿದೆ.

ಪಾಕ್ ಪ್ರಧಾನಿಯಾಗಿ ಮುಂದುವರಿಯಲು ನವಾಜ್ ಷರೀಫ್ ಅರ್ಹರಲ್ಲ ಎಂದು ಅಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ತೀರ್ಪು ಬಂದ ಹಿನ್ನೆಲೆಯಲ್ಲಿ ಷರೀಫ್ ಪ್ರಧಾನಿ ಪಟ್ಟದಿಂದ ಇಳಿಯಬೇಕಿದೆ.

ಷರೀಫ್ ಅವರು ಸಂಸತ್ತಿನ ಪ್ರಾಮಾಣಿಕ ಸದಸ್ಯರಾಗುವ ಅರ್ಹತೆಯನ್ನು ಹೊಂದಿಲ್ಲ ಎಂದು ಪಂಚ ನ್ಯಾಯಾಧೀಶ ಪೀಠದಲ್ಲಿ ಒಬ್ಬರಾಗಿರುವ ಇಜಾಜ್ ಅಫ್ಜಲ್ ಖಾನ್ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?
ಪನಾಮ ಪೇಪರ್ ಹೊರ ಹಾಕಿರುವ ಮಾಹಿತಿ ಆಧಾರವನ್ನು ಇಟ್ಟುಕೊಂಡು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ನಲ್ಲಿ ಷರೀಫ್ ವಿರುದ್ಧ ಕೇಸ್ ದಾಖಲಿಸಿದ್ದರು. ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ಷರೀಫ್ ಹಾಗೂ ಭ್ರಷ್ಟಾಚಾರದ ಪ್ರಕರಣದ ಕುರಿತು ಜಂಟಿ ತನಿಖಾ ತಂಡ(ಜೆಐಟಿ) ತನಿಖೆ ನಡೆಸುವಂತೆ ಆದೇಶಿಸಿತ್ತು. ಷರೀಫ್ ಲಂಡನ್ ನಲ್ಲಿ 2 ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಜೆಐಟಿ ವರದಿ ನೀಡಿತ್ತು. ಆದರೆ ಷರೀಫ್ ಅವರು ನನ್ನ ಮೇಲಿರುವ ಆರೋಪಗಳು ಎಲ್ಲ ಸುಳ್ಳು, ಯಾವುದೇ ಸಾಕ್ಷ್ಯಧಾರಗಳು ಇಲ್ಲ ಎಂದು ಹೇಳಿದ್ದರು.

ಏನಿದು ಪನಾಮ ಪೇಪರ್ ಕೇಸ್?
ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಘಟನೆಯೊಂದು ‘ಪನಾಮ ಪೇಪರ್’ ಹೆಸರಿನಲ್ಲಿ ದಾಖಲೆಗಳನ್ನು 2015ರ ಏಪ್ರಿಲ್ ನಲ್ಲಿ  ಬಿಡುಗಡೆ ಮಾಡಿತ್ತು. ಪನಾಮ ಮೂಲದ ಕಾನೂನು ಸೇವಾ ಕಂಪನಿ ಮೊಸ್ಸಾಕ್ ಫೋನ್ಸೆಕಾದಿಂದ ಗುಪ್ತವಾಗಿ ಪಡೆದಿದ್ದ ಮಾಹಿತಿಗಳನ್ನು ಐಸಿಐಜೆ ಬಿಡುಗಡೆ ಮಾಡಿತ್ತು. ವಿಶ್ವದ ಸುಮಾರು 12 ವಿವಿಧ ಈಗಿನ ಮತ್ತು ಮಾಜಿ ನಾಯಕರು, 128 ವಿವಿಧ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ವಿವಿಧ ಕಡೆ ಹಣವನ್ನು ಸಂಗ್ರಹಿಸಿದ್ದ ಮಾಹಿತಿ ಈ ವರದಿಯಲ್ಲಿತ್ತು. 1977 ರಿಂದ 2015 ರವರೆಗೆ 40 ವರ್ಷದ ಅವಧಿಯ ಮಾಹಿತಿಗಳು, 2.14 ಲಕ್ಷ ವಿದೇಶಿ ಸಂಸ್ಥೆಗಳ ಮಾಹಿತಿಗಳು ಇದರಲ್ಲಿತ್ತು.

 

Share This Article
Leave a Comment

Leave a Reply

Your email address will not be published. Required fields are marked *