ಬಿಸಿಸಿಐ ಜೊತೆ ಕಾನೂನು ಸಮರ: 471 ಕೋಟಿ ರೂ. ಪರಿಹಾರ ಕೇಳಿದ ಪಿಸಿಬಿ

Public TV
3 Min Read

ನವದೆಹಲಿ: ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಿರುದ್ಧ ಕಾನೂನು ಸಮರ ಆರಂಭಿಸಿದ್ದು 70 ದಶಲಕ್ಷ ಡಾಲರ್(ಅಂದಾಜು 471 ಕೋಟಿ ರೂ.) ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

2014 ರಲ್ಲಿ ಬಿಸಿಸಿಐ ಪಾಕ್ ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲು ಒಪ್ಪಂದಕ್ಕೆ ಸಹಿ ಮಾಡಿತ್ತು. ಇದರಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ.

ಈ ಕುರಿತು ಪಾಕ್ ಕ್ರಿಕೆಟ್ ಮಂಡಳಿ ತನ್ನ ವಕೀಲರ ಮೂಲಕ ಐಸಿಸಿಯಲ್ಲಿ ನೋಟಿಸ್ ನೀಡಿದೆ. ಈ ನೋಟಿಸನ್ನು ಐಸಿಸಿ ವಿವಾದ ಪರಿಹಾರ ಮಾಡುವ ಸಮಿತಿಯ ಅಧ್ಯಕ್ಷರಿಗೆ ಕಳುಹಿಸಲಾಗಿದೆ ಎಂದು ಐಸಿಸಿಯ ವಕ್ತಾರರು ಗುರುವಾರ ಹೇಳಿದ್ದಾರೆ.

2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ 6 ಕ್ರಿಕೆಟ್ ಸರಣಿ ನಡೆಯಬೇಕು. ಆದರೆ ಇಲ್ಲಿಯವರೆಗೆ ಯಾವುದೇ ಸರಣಿ ನಡೆಯದ ಕಾರಣ ನಮಗೆ 70 ದಶಲಕ್ಷ ಡಾಲರ್ ನಷ್ಟವಾಗಿದೆ. ಒಪ್ಪಂದ ಉಲ್ಲಂಘನೆಯಾಗಿರುವ ಕುರಿತು ನಾವು ಐಸಿಸಿಗೆ ಅರ್ಜಿ ಸಲ್ಲಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ನಡೆಯುವ ಸರಣಿಯಲ್ಲೂ ಭಾರತ ಭಾಗವಹಿಸಬೇಕಾಗಿತ್ತು. 2008 ನಂತರ ಬಿಸಿಸಿಐ ಯಾವುದೇ ಕಾರಣ ನೀಡದೆ ನಮ್ಮೊಂದಿಗೆ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಿಲ್ಲ. ಆದರೆ ಐಸಿಸಿ ನಡೆಸುವ ಎಲ್ಲಾ ಸರಣಿಯಲ್ಲೂ ನಮ್ಮ ವಿರುದ್ಧ ಆಡಿದೆ ಎಂದು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.

ಪಾಕಿಸ್ತಾನದ ಉಗ್ರಗಾಮಿಗಳು 2018 ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ ಬ್ರೇಕ್ ಬಿದ್ದಿತ್ತು. ಇದಾದ ಬಳಿಕ 2012 ರಲ್ಲಿ ಎರಡು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗೆ ಪಾಕ್ ಭಾರತಕ್ಕೆ ಆಗಮಿಸಿತ್ತು. ಈ ಸರಣಿಯ ಬಳಿಕ ಇಲ್ಲಿಯವರೆಗೆ ಭಾರತ ಪಾಕ್ ಮಧ್ಯೆ ಯಾವುದೇ ಸರಣಿ ನಡೆದಿಲ್ಲ.

2017ರಲ್ಲಿ ಇಂಗ್ಲೆಂಡ್‍ನಲ್ಲಿ ಆಯೋಜನೆಗೊಂಡಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ಹಾಗೂ ಪಾಕ್ ಎರಡು ಬಾರಿ ಮುಖಾಮುಖಿಯಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಜಯಗಳಿಸಿದರೆ, ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಪಡೆದಿತ್ತು.

ಭಾರತ ಪಾಕ್ ಸರಣಿ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ, ಪಾಕ್ ಹಾಗೂ ಭಾರತ ನಡುವೆ ಕ್ರಿಕೆಟ್ ಸರಣಿ ಕೇವಲ ಕ್ರಿಕೆಟ್ ಸರಣಿ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚು. ಈ ಕುರಿತು ಅನುಮತಿ ನೀಡುವ ನಿಟ್ಟಿನಲ್ಲಿ ಸರ್ಕಾರವು ಉತ್ತಮ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದರು.

ಅಲ್ಲದೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಪ್ರತಿಕ್ರಿಯೆ ನೀಡಿ ಭಾರತ ಪಾಕ್ ಕ್ರಿಕೆಟ್ ಸರಣಿ ಆಯೋಜಿಸುವುದನ್ನು ರಾಜಕೀಯಗೊಳಿಸಲಾಗುತ್ತಿದೆ. ದೇಶದ ಭಕ್ತಿಯ ಅರ್ಥವನ್ನು ಈ ರೀತಿ ಕಿರಿದಾಗಿಸಬಾರದು. ಪಾಕ್ ವಿರುದ್ಧದ ಸರಣಿಗೆ ನನ್ನ ಬೆಂಬಲವಿದೆ ಎಂದು ಅಭಿಪ್ರಾಯ ಪಟ್ಟಿದ್ದರು.

ಸರ್ಕಾರ ಅನುಮತಿ ನೀಡದ್ದು ಯಾಕೆ?
ಪಂಜಾಬ್‍ನ ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ, ಕಾಶ್ಮೀರ ಉರಿ ಸೇನಾ ಕಚೇರಿ ಮೇಲೆ ಉಗ್ರರ ದಾಳಿ ಆ ಬಳಿಕ ಸೇನೆಯ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಭಾರತ ಪಾಕಿಸ್ತಾನದ ಸಂಬಂಧ ಹದಗೆಟ್ಟಿದೆ. 2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕು. ಆದರೆ ಉಗ್ರರ ದಾಳಿ ಮತ್ತು ಗಡಿಯಲ್ಲಿನ ಅಪ್ರಚೋದಿತ ದಾಳಿಯಿಂದ ಭಾರತ ಸರ್ಕಾರ ಸರಣಿ ಆಡಲು ಬಿಸಿಸಿಐಗೆ ಅನುಮತಿ ನೀಡಿಲ್ಲ. 2016ರಲ್ಲಿ ದುಬೈನಲ್ಲಿ ಸರಣಿ ಆಡಲು ಬಿಸಿಸಿಐ ಉತ್ಸುಕವಾಗಿದ್ದು ಈ ಸಂಬಂಧ ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು.

2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *