ಪಾಕ್‌ ಪರಿಸ್ಥಿತಿ ಕೆಟ್ಟದ್ದಾಗಿದೆ, ಮೊದಲು ನಿಮ್ಮದನ್ನು ನೋಡಿಕೊಳ್ಳಿ – ಪಾಕ್‌ ಮಾಜಿ ಸಚಿವರ ಟ್ವೀಟ್‌ಗೆ ಕೇಜ್ರಿವಾಲ್‌ ತಿರುಗೇಟು

Public TV
2 Min Read

ಇಸ್ಲಾಮಾಬಾದ್‌/ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರನ್ನು ಬೆಂಬಲಿಸಿ ʻʻಶಾಂತಿ ಮತ್ತು ಸಾಮರಸ್ಯವು ದ್ವೇಷ ಮತ್ತು ಉಗ್ರವಾದದ ಶಕ್ತಿಗಳನ್ನು ಸೋಲಿಸಲಿʼʼ ಎಂಬ ಪಾಕ್‌ ಮಾಜಿ ಸಚಿವರ ಟ್ವೀಟ್‌ಗೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಕುಟುಂಬಸ್ಥರೊಂದಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದರು. ಬಳಿಕ ಕುಟುಂಬಸ್ಥರೊಂದಿಗಿನ ಫೋಟೋವನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರೊಂದಿಗೆ ʻನಾನು ಇಂದು ನನ್ನ ತಂದೆ, ಹೆಂಡತಿ ಮತ್ತು ಮಕ್ಕಳೊಂದಿಗೆ ಮತ ಚಲಾಯಿಸಿದ್ದೇನೆ. ನನ್ನ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರಿಗೆ ಹೋಗಲಾಗಲಿಲ್ಲ. ನಾನು ಸರ್ವಾಧಿಕಾರ, ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಮತ ಹಾಕಿದ್ದೇನೆ. ನೀವೂ ಹೋಗಿ ಮತ ಹಾಕಿʼ ಎಂದೂ ಸಹ ಬರೆದುಕೊಂಡಿದ್ದರು.

ಅರವಿಂದ್‌ ಕೇಜ್ರಿವಾಲ್‌ ಅವರ ಈ ಟ್ವೀಟ್‌ ಸಂದೇಶವನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದ ಪಾಕ್‌ ಮಾಜಿ ಸಚಿವ ಫವಾದ್ ಹುಸೇನ್ (Fawad Hussain), ಶಾಂತಿ ಮತ್ತು ಸಾಮರಸ್ಯವು ದ್ವೇಷ ಮತ್ತು ಉಗ್ರವಾದದ ಶಕ್ತಿಗಳನ್ನು ಸೋಲಿಸಲಿ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಗುಜರಾತ್‌ನ ರಾಜ್‌ಕೋಟ್‌ ಗೇಮಿಂಗ್‌ ವಲಯದಲ್ಲಿ ಅಗ್ನಿ ದುರಂತ – 20 ಮಂದಿ ಸಾವು

ಇದಕ್ಕೆ ಎಕ್ಸ್‌ ಮೂಲಕವೇ ಖಡಕ್‌ ಉತ್ತರ ನೀಡಿದ ಕೇಜ್ರಿವಾಲ್‌, ಚೌಧರಿ ಸಾಹಿಬ್, ನಾನು ಮತ್ತು ನನ್ನ ದೇಶದ ಜನರು ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ. ನಿಮ್ಮ ಟ್ವೀಟ್ ಅಗತ್ಯವಿಲ್ಲ. ಸದ್ಯ ಪಾಕಿಸ್ತಾನದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನೀವು ನಿಮ್ಮ ದೇಶವನ್ನು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಭಾರತದ ಚುನಾವಣೆಗಳು ನಮ್ಮ ಆಂತರಿಕ ವಿಚಾರ. ಇದರಲ್ಲಿ ಭಯೋತ್ಪಾದನೆಯ ಪ್ರಾಯೋಜಕರು ಹಸ್ತಕ್ಷೇಪ ಮಾಡುವುದನ್ನು ಭಾರತ ಸಹಿಸುವುದಿಲ್ಲ ಎಂದೂ ಸಹ ಹೇಳಿದ್ದಾರೆ.

ಬಿಜೆಪಿ ಟೀಕೆ:
ಇನ್ನೂ ಪಾಕ್‌ ಮಾಜಿ ಸಚಿವರ ಹೇಳಿಕೆಗೆ ಬಿಜೆಪಿ (BJP) ಕಳವಳ ವ್ಯಕ್ತಪಡಿಸಿದೆ. ಪಾಕಿಸ್ತಾನದ ರಾಜಕಾರಣಿಗಳು, ಭಾರತದ ರಾಜಕಾರಣಿಗಳನ್ನ ಬೆಂಬಲಿಸುತ್ತಿರುವುದು ಆತಂಕಕಾರಿ ವಿಷಯ. ಪಾಕ್‌ ಏಕೆ ಕೇಜ್ರಿವಾಲ್‌ರನ್ನ ಬೆಂಬಲಿಸುತ್ತಿದೆ? ಅವರಿಗೆ ಅಧಿಕಾರ ಸಿಗಬೇಕೆಂದು ಏಕೆ ಬಯಸುತ್ತಿದೆ? ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ಧ್ವನಿಯಲ್ಲಿ ಮಾತನಾಡಿ 7 ವಿದ್ಯಾರ್ಥಿನಿಯರ ಅತ್ಯಾಚಾರ – ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

Share This Article