ಉಗ್ರರ ದಾಳಿಯಲ್ಲಿ ಅನೇಕರ ಜೀವ ಉಳಿಸಿದ ನನ್ನ ಪತಿಗೆ ‘ಹುತಾತ್ಮ’ ಸ್ಥಾನಮಾನ ಕೊಡಿ: ಸಂತ್ರಸ್ತೆ ಒತ್ತಾಯ

Public TV
1 Min Read

– ನನ್ನ ಗಂಡ ಹೆಮ್ಮೆಯಿಂದ ಹಿಂದೂ ಅಂತ ಹೇಳಿಕೊಂಡು ಉಗ್ರರ ಗುಂಡಿಗೆ ಬಲಿಯಾದ್ರು

ಲಕ್ನೋ: ಪಹಲ್ಗಾಮ್ ದಾಳಿಯಲ್ಲಿ (Pahalgam Terror Attack) ಅನೇಕ ಜನರ ಜೀವ ಉಳಿಸಿದ ನನ್ನ ಪತಿಗೆ ಹುತಾತ್ಮರ ಸ್ಥಾನಮಾನ ನೀಡಿ ಎಂದು ಉಗ್ರರ ದಾಳಿಗೆ ಬಲಿಯಾದ ಶುಭಂ ದ್ವಿವೇದಿ ಅವರ ಪತ್ನಿ ಅಶಾನ್ಯಾ ಒತ್ತಾಯಿಸಿದ್ದಾರೆ.

ಭಯೋತ್ಪಾದಕರು ದಾಳಿ ನಡೆಸುವಾಗ ತಾನು ಹೆಮ್ಮೆಯಿಂದಲೇ ಹಿಂದೂ ಎಂದು ಹೇಳಿಕೊಂಡರು. ಉಗ್ರರ ಗುಂಡಿಗೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ದಾಳಿಯಲ್ಲಿ ಅನೇಕರ ಜೀವ ಉಳಿಸಿದರು. ಹೀಗಾಗಿ, ನನ್ನ ಪತಿಗೆ ಹುತಾತ್ಮ ಸ್ಥಾನಮಾನ ಕೊಡಿ ಎಂದು ಮಹಿಳೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ | ಉಗ್ರರ ಗುಂಡೇಟಿಗೆ ಸಾಮಾಜಿಕ ಕಾರ್ಯಕರ್ತ ಬಲಿ

ನೀವು ಹಿಂದೂಗಳೇ ಅಥವಾ ಮುಸ್ಲಿಮರೇ ಅಂತ ಭಯೋತ್ಪಾದಕರು ಕೇಳಿದರು. ಆಗ ನನ್ನ ಪತಿ ಮೊದಲು ಮುಂದೆ ನಿಂತು ಹೆಮ್ಮೆಯಿಂದಲೇ ನಾನು ಹಿಂದೂ ಅಂತ ಹೇಳಿದರು. ಆಗ ಉಗ್ರರು ನನ್ನ ಪತಿಗೆ ಮೊದಲು ಗುಂಡು ಹೊಡೆದರು. ಈ ಸಮಯದಲ್ಲಿ ಅನೇಕ ಜನರು ಓಡಿಹೋಗಿ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದು ಘಟನೆ ಕುರಿತು ಅಶಾನ್ಯಾ ಹೇಳಿಕೊಂಡಿದ್ದಾರೆ.

ಕಾನ್ಪುರದ 31 ವರ್ಷದ ಉದ್ಯಮಿ ಶುಭಂ, ಇದೇ ಫೆಬ್ರವರಿ 12 ರಂದು ಅಶಾನ್ಯಾ ಅವರನ್ನು ವಿವಾಹವಾಗಿದ್ದರು. ಏಪ್ರಿಲ್ 22 ರಂದು ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ 26 ಜನರಲ್ಲಿ ಅವರು ಕೂಡ ಒಬ್ಬರು. ಇದನ್ನೂ ಓದಿ: ಧರ್ಮ ಕೇಳಿ ಉಗ್ರರಿಂದ ದಾಳಿ – ಬೇಸತ್ತು ಇಸ್ಲಾಂ ತ್ಯಜಿಸಿದ ಶಿಕ್ಷಕ

ನನ್ನ ಪತಿಗೆ ‘ಹುತಾತ್ಮ’ ಸ್ಥಾನಮಾನ ಬಿಟ್ಟು ಸರ್ಕಾರದಿಂದ ನನಗೆ ಯಾವುದೇ ಪರಿಹಾರ ಬೇಡ. ಸರ್ಕಾರ ನನ್ನ ಆಸೆಯನ್ನು ಒಪ್ಪಿಕೊಂಡರೆ, ನನಗೆ ಬದುಕಲು ಒಂದು ಕಾರಣ ಸಿಗುತ್ತದೆ ಎಂದು ಅಶಾನ್ಯಾ ತಿಳಿಸಿದ್ದಾರೆ.

Share This Article