ಸಾಧನೆ ಶಿಖರವೇರಿದ ಸಂಕೇತ್ – ಪಾನ್‌ಬೀಡಾ ಮಾರುತ್ತಿದ್ದ ಹುಡುಗನ `ಬೆಳ್ಳಿ’ ಸಾಧನೆ

Public TV
2 Min Read

ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಆರಂಭಸಿದ್ದು, ಈಗಾಗಲೇ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ.

ಸಂಕೇತ್ ಮಹಾದೇವ್ ಸರ್ಗರ್ (21) ಪುರುಷರ ವಿಭಾಗದ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 248 ಕೆಜಿ (113+135) ಭಾರ ಎತ್ತುವ ಮೂಲಕ ಬೆಳ್ಳಿ ಕಿರೀಟ ಧರಿಸಿದ್ದಾರೆ. ಇಂದು ದೇಶವೇ ಹೆಮ್ಮೆ ಪಡುವ ಮಟ್ಟದಲ್ಲಿ ಅವರು ಸಾಧನೆ ಮಾಡಿದ್ದಾರೆ. ಆದರೆ ಸಂಕೇತ್ ಹಿನ್ನೆಲೆ ಕೇಳಿದ್ರೆ ಪ್ರತಿಯೊಬ್ಬರು ಅಚ್ಚರಿ ಪಡುತ್ತಾರೆ. ಜೀವನೋಪಾಯಕ್ಕಾಗಿ ಪಾನ್ ಬೀಡಾ, ಚಹಾ ಮಾರಿಕೊಂಡಿದ್ದ ಸಂಕೇತ್ ಇಂದು ದೇಶವೇ ಕೊಂಡಾಡುವ ಕ್ರೀಡಾಪಟುವಾಗಿದ್ದಾರೆ. ಇದನ್ನೂ ಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

ಯಾರಿದು ಸಂಕೇತ್ ಸರ್ಗರ್?
1990ರ ದಶಕದಲ್ಲಿ ಜೀವನೋಪಾಯಕ್ಕಾಗಿ ಮಹಾರಾಷ್ಟ್ರದ ಸಾಂಗ್ಲಿಗೆ ಬಂದ ಸಂಕೇತ್ ಮೊದಲು ತಳ್ಳುಗಾಡಿಯಿಂದ ಹಣ್ಣುಗಳನ್ನು ಮಾರುವ ವೃತ್ತಿ ಆರಂಭಿಸಿದರು. ನಂತರದಲ್ಲಿ ಪಾನ್ ಶಾಪ್ ತೆರೆದು, ಇದರ ಪಕ್ಕದಲ್ಲೇ ಚಹಾ ಹಾಗೂ ಸಣ್ಣ ಉಪಾಹಾರ ಮಂದಿರವನ್ನೂ ತೆರೆದರು. ಇದರಿಂದಾಗಿ ಇವರ ಚಿತ್ತವೆಲ್ಲವೂ ವ್ಯವಹಾರವನ್ನು ನಡೆಸಲು ಸಹಾಯ ಮಾಡುವುದೇ ಆಗಿತ್ತು. ಸಂಕೇತ್ ಪಾನ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿಬಿಟ್ಟಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾದಾ ಪಾನ್, ಮೀಟಾ ಪಾನ್ (ಸ್ವೀಟ್ ಪಾನ್), ಮಸಾಲೆ ಪಾನ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇದರೊಂದಿಗೆ ಚಾಯ್, ವಡಾ ಪಾವ್ ಹಾಗೂ ಕಂಡಪೋವಾ ಮಾಡುವುದರಲ್ಲೂ ಎತ್ತಿದ ಕೈ.

ಸಂಕೇತ್ ಕ್ರೀಡಾಪಟು ಆಗಬೇಕು ಅನ್ನೋ ಕನಸೇ ಇರಲಿಲ್ಲ. ಅದು ಸಾಧ್ಯವಿಲ್ಲವೆಂದು ಅವರೇ ನಿರ್ಧರಿಸಿದ್ದರು. ಒಂದೊಮ್ಮೆ ಸಂಕೇತ್ ತಂದೆ ತಮ್ಮ ಅಂಗಡಿ ಪಕ್ಕದಲ್ಲೇ ವೇಟ್‌ಲಿಫ್ಟಿಂಗ್ ಜಿಮ್‌ಗೆ ಸೇರಿಸಿದರು. ಮಾರನೇ ದಿನ ಬೆಳಗ್ಗೆ 6.30ಕ್ಕೆ ತರಬೇತಿಗೆ ಬರಬೇಕು ಎಂದು ಕೋಚ್ ಹೇಳಿದರು. ಮಾರನೇ ದಿನದಿಂದ ನಿರಂತರ ಅಭ್ಯಾಸವಾಯಿತು. ‘ಮೊದಲು ಲಿಫ್ಟ್ ಮಾಡುವಾಗ ಅಷ್ಟೇನೂ ಪ್ರೀತಿ ಇರಲಿಲ್ಲ. ಏಕೆಂದರೆ ಅದು ಕಷ್ಟವೋ ಸುಲಭವೋ ಎಂದೂ ನಾನು ಯೋಚಿಸಿರಲಿಲ್ಲ. ಆದರೆ ಹೆಚ್ಚೆಚ್ಚು ಕಲಿಯುತ್ತಲೇ ಇದ್ದೆ. ಕಲಿತಷ್ಟು ಬಲಶಾಲಿಯಾಗುತ್ತಿದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಜಿಮ್ ಪ್ರಾರಂಭವಾದ ಒಂದೆರಡು ವರ್ಷಗಳ ನಂತರ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ಆ ವೇಳೆಗೆ ಜಿಲ್ಲಾಮಟ್ಟದ ಸ್ಪರ್ಧೆಗಳ ಬಗ್ಗೆಯೂ ಸಂಕೇತ್‌ಗೆ ತಿಳಿದಿರಲಿಲ್ಲ. ಇದರ ಹೊರತಾಗಿಯೂ 9ನೇ ತರಗತಿಯಲ್ಲಿದ್ದಾಗ ವಿಭಾಗೀಯ ಸ್ಪರ್ಧೆಯಲ್ಲಿ ಭಾಗವಹಿಸಿ, ತರಬೇತಿ ಇಲ್ಲದೆಯೇ ಬೆಳ್ಳಿ ಪಡೆದುಕೊಂಡಿದ್ದರು. ಸಂಕೇತ್ ಸರ್ಗರ್ 13 ವರ್ಷ ವಯಸ್ಸಿನವರಾಗಿದ್ದಾಗ ಕುಸ್ತಿ ಅಖಾಡಕ್ಕಿಳಿದರು. ಅಲ್ಲಿಂದ ಒಂದಿಲ್ಲೊಂದು ಪದಕಗಳನ್ನು ಮುಡಿಗೇರಿಸಿಕೊಂಡರು. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

ಇವರು ಪ್ರಖ್ಯಾತ ವೇಟ್‌ಲಿಫ್ಟಿಂಗ್ ಕೋಚ್ ವಿಜಯ್ ಶರ್ಮಾ ಅವರ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರು. ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಭಾರತ ಸರ್ಕಾರವು ಆತಿಥೇಯ ನಗರದಲ್ಲಿ ವೇಟ್‌ಲಿಫ್ಟರ್‌ಗಳಿಗೆ ಪೂರ್ವಸಿದ್ಧತಾ ಶಿಬಿರವನ್ನು ಏರ್ಪಡಿಸಿದ್ದರಿಂದ ಒಂದು ತಿಂಗಳ ಮುಂಚಿತವಾಗಿ ಬರ್ಮಿಂಗ್‌ಹ್ಯಾಮ್‌ಗೆ ಆಗಮಿಸಿ ತರಬೇತಿ ನಡೆಸಿದ್ದರು.

ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ 21ರ ತರುಣ ಮುಂದೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *