ರಾಜ್ಯದ ಹಲವೆಡೆ ಧಾರಾಕಾರ ಮಳೆ- ತುಮಕೂರು, ಚಿತ್ರದುರ್ಗದಲ್ಲಿ ತುಂಬಿ ಹರಿದ ಕೆರೆ ಕಟ್ಟೆಗಳು

Public TV
1 Min Read

ಬಳ್ಳಾರಿ/ಚಿತ್ರದುರ್ಗ/ತುಮಕೂರು : ರಾಜ್ಯದ ಹಲವೆಡೆ ಗುರುವಾರ ರಾತ್ರಿ ಭಾರೀ ಮಳೆಯಾಗಿದೆ.

ಸುಮಾರು 5 ಗಂಟೆಗಳ ಕಾಲ ಎಂದೂ ಸುರಿದಂತಹ ಮಳೆ ಗುರುವಾರ ರಾತ್ರಿ ಬಳ್ಳಾರಿಯಲ್ಲಿ ಸುರಿದಿದೆ. ನಗರದಲ್ಲಿ ಗುಡುಗು ಸಿಡಿಲು ಸಹಿತ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಜಿಲ್ಲೆಯ ತಗ್ಗು ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಮಳೆ ಸುರಿದ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ತುಮಕೂರಿನಲ್ಲಿ ಕೂಡ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಮಳೆಯ ಪರಿಣಾಮ ಕೆರೆಕಟ್ಟೆಗಳು ತುಂಬಿ ಹರಿದಿವೆ. ಗುಬ್ಬಿ ತಾಲೂಕಿನ ಹಾಗಲವಾಡಿಯ ಮಾರುತಿನಗರದ ಕೆರೆ ಕೊಡಿ ಹರಿದಿದೆ. ಇದರಿಂದ ರೈತಾಪಿ ವರ್ಗದವರಲ್ಲಿ ಸಂತಸ ಮೂಡಿದೆ. ಇನ್ನು ಕೆಲವೆಡೆ ತಗ್ಗುಪ್ರದೇಶಕ್ಕೆ ನೀರು ತುಂಬಿ ಅಲ್ಪಪ್ರಮಾಣದ ಹಾನಿಯಾಗಿದೆ.

ಬರದ ನಾಡು ಚಿತ್ರದುರ್ಗ ಜಿಲ್ಲೆಯ ಹಲವೆಡೆ ವರುಣನ ಅಬ್ಬರ ಮುಂದುವರೆದಿದೆ. ಚಳ್ಳಕೆರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ರಾತ್ರಿ ಸುರಿದ ಮಳೆಯಿಂದ ಕೆರೆ ಕಟ್ಟೆಗಳು ತುಂಬಿವೆ. ನಗರದ ರಸ್ತೆ ಹಾಗೂ ಚರಂಡಿಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿತ್ತು. ನಗರದ ಸಂಚಾರ ಅಸ್ತವ್ಯಸ್ತವಾಗಿತ್ತು. ವರುಣನ ಆಗಮನದಿಂದ ನಗರದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬರದಿಂದ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *