ರಾಹುಲ್ ಭೇಟಿಗೆ ಬ್ರೇಕ್ ಹಾಕಿದ ಓಸ್ಮಾನಿಯ ವಿಶ್ವವಿದ್ಯಾಲಯ

Public TV
1 Min Read

ಹೈದ್ರಾಬಾದ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಓಸ್ಮಾನಿಯ ವಿಶ್ವವಿದ್ಯಾಲಯದ ಭೇಟಿಗೆ ವಿದ್ಯಾರ್ಥಿ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೆ, ಆಡಳಿತ ಮಂಡಳಿ ಭೇಟಿಯನ್ನು ನಿರಾಕರಿಸಿದೆ.

ಭದ್ರತೆ ಕೊರತೆಯ ಕಾರಣವನ್ನು ಮುಂದಿಟ್ಟು ಓಸ್ಮಾನಿಯಾ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು, ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದ ಅನುಮತಿಯನ್ನು ರದ್ದು ಮಾಡಿದೆ. ಆದರೆ ಇತ್ತ ರಾಹುಲ್ ಗಾಂಧಿ ಬೆಂಬಲಿತ ಸಂಘಟನೆಯು ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದೆ.

ರಾಹುಲ್ ಗಾಂಧಿ ಆಗಸ್ಟ್ 13 ಮತ್ತು 14ರಂದು ತೆಲಂಗಾಣಕ್ಕೆ ಭೇಟಿ ನೀಡಿ, ಪ್ರತ್ಯೇಕ ರಾಜ್ಯ ಹೋರಾಟಗಾರರನ್ನು ಭೇಟಿ ಆಗಲಿದ್ದಾರೆ. ಇತ್ತ ಓಸ್ಮಾನಿಯಾ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮವೂ ಇದೇ ಸಮಯದಲ್ಲಿ ನಡೆಯಲಿದೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ರಾಹುಲ್ ಗಾಂಧಿ ಮುಂದಾಗಿದ್ದರು.

ವಿಶ್ವವಿದ್ಯಾಲಯದ ಒಂದು ವಿದ್ಯಾರ್ಥಿ ಸಂಘಟನೆ ಮಾತ್ರ ರಾಹುಲ್ ಗಾಂಧಿ ಭೇಟಿಗೆ ಮನವಿ ಸಲ್ಲಿಸಿದೆ. ಆದರೆ ಉಳಿದ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಒಂದು ವೇಳೆ ರಾಹುಲ್ ಗಾಂಧಿ ಆಗಮನಕ್ಕೆ ಅವಕಾಶ ನೀಡಿದರೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಎನ್ನುವ ಅಳಕು ಕಾಡುತ್ತಿದೆ. ಹೀಗಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಉಪಕುಲಪತಿ ಎಸ್.ರಾಮಚಂದ್ರಂ ತಿಳಿಸಿದ್ದಾರೆ.

ಸ್ಥಳೀಯ ನಾಯಕರಿಗೆ ಭದ್ರತೆ ನೀಡಬಹುದು. ಆದರೆ ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕ. ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಅವರಿಗೆ ಭಾರೀ ಭದ್ರತೆ ನೀಡಬೇಕಾಗುತ್ತದೆ. ಯಾವುದೇ ಅನಾಹುತ ಸಂಭವಿಸಿದರೂ ಅದಕ್ಕೆ ನಾವೇ ಹೊಣೆ ಆಗಬೇಕಾಗುತ್ತದೆ. ಇಂತಹ ಸಮಸ್ಯೆಯನ್ನು ನಾವು ಎದುರಿಸಲು ಸಿದ್ಧರಿಲ್ಲ ಎಂದು ಅವರು ಹೇಳಿದರು.

ಇತ್ತ ವಿಶ್ವವಿದ್ಯಾಲಯದ ಒಂದು ವಿದ್ಯಾರ್ಥಿ ಸಂಘಟನೆ ಆಡಳಿತ ಮಂಡಳಿ ನಿರ್ಧಾರವನ್ನು ಪ್ರಶ್ನಿಸಿ, ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಇಂದು ಹೈಕೋರ್ಟ್ ಮೆಟ್ಟಿಲೇರಿ ರಾಹುಲ್ ಪ್ರವೇಶಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *