ಹೆಣ ಹೂಳಲು ಕಾಂಗ್ರೆಸ್‌ ಬಳಿ ಹಣವಿಲ್ಲ – ಆರ್. ಅಶೋಕ್‌ ಲೇವಡಿ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ವಕ್ಫ್‌ ಆಸ್ತಿ ವಿವಾದದ (Waqf property Controversy) ಬೆನ್ನಲ್ಲೇ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಗ್ಯಾರಂಟಿ ಗದ್ದಲ ಜೋರಾಗಿದೆ. ಗ್ಯಾರಂಟಿಗಳ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಈ ಸಂಬಂಧ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಕೈ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಗ್ಯಾರಂಟಿ ಯೋಜನೆಗಳು (Guarantee Scheme) ಅವೈಜ್ಞಾನಿಕವಾಗಿವೆ. ಖರ್ಗೆಯವರೇ ಬಜೆಟ್ ನೋಡಿಕೊಂಡು ಗ್ಯಾರಂಟಿ ಘೋಷಿಸಬೇಕಿತ್ತು ಅಂದಿದ್ದಾರೆ. ಮಹಾರಾಷ್ಟ್ರದವರಿಗೂ ಹುಚ್ಚರ ಥರ ಐದಾರು ಗ್ಯಾರಂಟಿ ಘೋಷಿಸಬೇಡಿ ಅಂದಿದ್ದೇನೆ ಅಂತ ಖರ್ಗೆಯವರು ಹೇಳಿದ್ದಾರೆ. ಅಂದ್ರೆ ಕರ್ನಾಟಕದ ಕಾಂಗ್ರೆಸ್ ನವ್ರು ಹುಚ್ಚರು ಅಂತ ಆಯ್ತಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಒಂದು ಚುನಾವಣಾ ಕಾರ್ಯತಂತ್ರಕ್ಕೆ 100 ಕೋಟಿ ಶುಲ್ಕ ಪಡೆಯುತ್ತೇನೆ: ಪ್ರಶಾಂತ್‌ ಕಿಶೋರ್‌

ಖರ್ಗೆಯವರು ಹೇಳಿದ್ದನ್ನು ಮೋದಿಯವರು (PM Modi) ಎಕ್ಸ್‌ನಲ್ಲಿ ಹೇಳಿದ್ದಾರೆ ಅಷ್ಟೇ. ಹೆಣ ಮುಚ್ಚಲೂ ಕಾಂಗ್ರೆಸ್ ಬಳಿ ಹಣ ಇಲ್ಲ. ಇಂತಹ ಕಾಲ್ಪನಿಕ ಭರವಸೆಗಳಿಂದ ಹಿಮಾಚಲ ಪ್ರದೇಶ ದಿವಾಳಿ ಆಗಿದೆ ಅಂದಿದ್ದಾರೆ ಎಂದು ಮೋದಿ ಹೇಳಿದ್ದಾರೆ ಎಂದು ಅಶೋಕ್‌ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: Mumbai | ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹೋದರನನ್ನು ಭಾರತಕ್ಕೆ ಕರೆತರಲು ತಯಾರಿ ಶುರು

1 ಲಕ್ಷ ರೇಷನ್‌ ಕಾರ್ಡ್‌ ರದ್ದು ಮಾಡಲು ಪ್ಲ್ಯಾನ್‌:
ಇನ್ನು ಗ್ಯಾರಂಟಿ ಪರಿಷ್ಕರಣೆ ಕುರಿತ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿ ತಿಂಗಳು 1 ಲಕ್ಷ ರೇಷನ್ ಕಾರ್ಡ್‌ ರದ್ದು ಮಾಡಲು ಸರ್ಕಾರ ಸೂಚನೆ ಕೊಟ್ಟಿದೆ ಅನ್ನೋ ಮಾಹಿತಿ ನಮಗಿದೆ. ಈ ಹಿಂದೆ ಕರ್ನಾಟಕ ಬಿಜೆಪಿ ಸರ್ಕಾರ 40% ಸರ್ಕಾರ ಅಂತ ಸಿಎಂ ಹೇಳುತ್ತಿದ್ದರು. ಆದ್ರೆ ಅವರ ಯೋಗ್ಯತೆಗೆ 16 ತಿಂಗಳಲ್ಲಿ ಹದಿನಾರು ಆಟ ಆಡಿದ್ದಾರೆ. 40% ಆರೋಪಕ್ಕೆ ಸಂಬಂಧಿಸಿದಂತೆ ಯಾವ ದಾಖಲೆ ಅವರ ಬಳಿಯಿದೆ? ಯಾವ ದಾಖಲೆ ಕೋರ್ಟ್‌ಗೆ ಸಲ್ಲಿಸಿದ್ದೀರಿ ಹೇಳಿ? ನಿಮ್ಮ ಸರ್ಕಾರ 75% ಕಮೀಷನ್ ಸರ್ಕಾರ ಎಂದು ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ʻನಮ್ಮ ಭೂಮಿ ನಮ್ಮ ಹಕ್ಕುʼ ಹೆಸರಲ್ಲಿ ಮೋದಿಗೆ ಪತ್ರ:
ಇದೇ ವೇಳೆ ವಕ್ಫ್‌ ಆಸ್ತಿ ವಿವಾದಕ್ಕೆ ಪ್ರತಿಕ್ರಿಯಿಸಿ, ವಕ್ಫ್ ಕಾಯ್ದೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್‌ಗೆ ಪತ್ರ ಬರೆಯುತ್ತಿದ್ದೇನೆ. ಕರ್ನಾಟಕಕ್ಕೆ ಭೇಟಿ ಕೊಟ್ಟು ಪರಿಶೀಲಿಸುವಂತೆ ಪತ್ರ ಬರೆಯುತ್ತೇನೆ. ರಾಜ್ಯದಲ್ಲಿ ವಕ್ಫ್ ಮೂಲಕ ರೈತರ ಜಮೀನು ಕಬಳಿಸುವ ಸಂಚು ನಡೀತಿದೆ. ಮೋದಿಯವರಿಗೂ ಪತ್ರ ಬರೆಯುತ್ತೇವೆ. ʻನಮ್ಮ ಭೂಮಿ ನಮ್ಮ ಹಕ್ಕುʼ ಹೆಸರಿನಲ್ಲಿ ಮೋದಿಯವರಿಗೆ, ಜಗದಾಂಬಿಕ ಪಾಲ್ ಅವರಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದ್ದರೆ.

Share This Article