ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

Public TV
2 Min Read

ರಿಯಾದ್: ಕಲಹ ಪೀಡಿತ ಸುಡಾನ್‍ನಿಂದ (Sudan) ಹೊರಟಿದ್ದ ಅಪರೇಷನ್ ಕಾವೇರಿಯ ಐಎಎಫ್ ಸಿ-130ಜೆ (IAF C-130J) ವಿಮಾನವು 135 ಭಾರತೀಯರ (Indians) ಮೂರನೇ ಬ್ಯಾಚ್ ಸೌದಿ ಅರೇಬಿಯಾದ (Saudi Arabia) ಜೆಡ್ಡಾವನ್ನು (Jeddah) ಬುಧವಾರ ತಲುಪಿದೆ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ (V Muraleedharan) ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಸಿ-130ಜೆ ವಿಮಾನದಲ್ಲಿ ಜೆಡ್ಡಾ ವಿಮಾನ ನಿಲ್ದಾಣಕ್ಕೆ ಬಂದಿಳಿದ 148 ಭಾರತೀಯರ ಎರಡನೇ ಬ್ಯಾಚ್‍ನ್ನು ಬುಧವಾರ ಮುಂಜಾನೆ ಅವರು ಬರಮಾಡಿಕೊಂಡಿದ್ದಾರೆ. ಅಲ್ಲದೆ ನೌಕಾಪಡೆಯ ಐಎನ್‍ಎಸ್ ಸುಮೇಧಾ (INS Sumedha) ನೌಕೆಯು 278 ಜನರೊಂದಿಗೆ ಜೆಡ್ಡಾ ಬಂದರನ್ನು ತಲುಪಿದೆ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ

ಆಪರೇಷನ್ ಕಾವೇರಿ (Operation Kaveri) ಹೆಸರಿನಲ್ಲಿ ನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ, ಸುಡಾನ್‍ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ದೇಶಕ್ಕೆ ಕಳಿಸುವ ಮುನ್ನ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸ್ವಲ್ಪ ಸಮಯ ಇರಿಸಲಾಗುತ್ತದೆ. ನಂತರ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ ಎಂದು ಮುರುಳೀಧರನ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಸುಡಾನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ನೌಕಾಪಡೆಯ ಐಎನ್‍ಎಸ್ ಟೆಗ್ ಮಂಗಳವಾರ ಆಪರೇಷನ್ ಕಾವೇರಿಗೆ ಸೇರಿದೆ. ಸುಡಾನ್‍ನಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಹೆಚ್ಚುವರಿ ಅಧಿಕಾರಿಗಳು, ಅಗತ್ಯ ಪರಿಹಾರ ಸಾಮಗ್ರಿಗಳೊಂದಿಗೆ ನೌಕೆಯಲ್ಲಿ ಪೋರ್ಟ್ ಸುಡಾನ್‍ಗೆ ತಲುಪಿದೆ ಎಂದು ಹಿರಿಯ ಎಂಇಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಡಾನ್‍ನ ರಾಜಧಾನಿ ಖಾರ್ತೌಮ್‍ನಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಕಾಳಗ ತೀವ್ರಗೊಂಡಿದೆ. ಕದನ ಪೀಡಿತ ಸುಡಾನ್‍ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ ತಿಳಿಸಿದ್ದರು.

ಸುಡಾನ್‍ನ ಇತ್ತೀಚಿನ ಬೆಳವಣಿಗೆಯಲ್ಲಿ, ವಿವಿಧ ದೇಶಗಳು ತಮ್ಮ ಪ್ರಜೆಗಳನ್ನು ಸುಡಾನ್‍ನಿಂದ ಸ್ಥಳಾಂತರಿಸುತ್ತಿದ್ದಾರೆ. ಈ ವೇಳೆ ಅನಾಹುತಗಳಾಗದಂತೆ ತಡೆಯಲು ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮನವಿಯ ನಂತರ ಹೋರಾಟ ನಡೆಸುತ್ತಿದ್ದ ಎರಡು ಬಣಗಳು ಸೋಮವಾರ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ

Share This Article