ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ? ಶಾ ಜೊತೆ ಬಿಎಸ್‍ವೈ ಚರ್ಚಿಸಿದ್ದೇನು?

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಬಜೆಟ್ ವಿಷಯವಾಗಿ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೆ ವಿರೋಧಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕೆ ರಣತಂತ್ರ ನಡೆಸಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ಭೇಟಿಯಾಗಿದ್ದು, ರಾಜ್ಯದ ವಿದ್ಯಮಾನ, ಸಮ್ಮಿಶ್ರ ಸರ್ಕಾರ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೇ ಅಮಿತ್ ಷಾ ಅವರಿಗೆ ಅತೃಪ್ತ ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಭಾನುವಾರ ಶಾಸಕರಾದ ಉಮೇಶ್ ಕತ್ತಿ, ಬಸವರಾಜ್ ಬೊಮ್ಮಾಯಿ ಅವರು ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಚರ್ಚಿಸಿ, ಅತೃಪ್ತ ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇಂದು ಬೆಳಗ್ಗೆಯಿಂದ ಯಾರ ಸಂಪರ್ಕಕ್ಕೂ ಸಿಗದೆ, ಬೆಳಗ್ಗೆ 7.30 ಗಂಟೆಗೆ ಮನೆ ಬಿಟ್ಟ ಬಿಎಸ್‍ವೈ ಅವರು ಭದ್ರತಾ ಸಿಬ್ಬಂದಿ, ಸರ್ಕಾರಿ ಕಾರು ಎಲ್ಲವನ್ನೂ ಬಿಟ್ಟು ಎಲ್ಲೋ ಹೋಗಿದ್ದರು ಅಂತಾ ಸುದ್ದಿಯಾಗಿತ್ತು. ಮಧ್ಯಾಹ್ನ ಬಂದ ವರದಿಯ ಪ್ರಕಾರ ಬಿ.ಎಸ್.ಯಡಿಯೂರಪ್ಪ ಅವರು ಅಮಿತ್ ಷಾ ಅವರ ನಿವಾಸಕ್ಕೆ ತೆರಳಿದ್ದಾರೆ ಎನ್ನುವುದು ಖಚಿತವಾದ್ದು, ಈ ಭೇಟಿ ರಾಜ್ಯ ರಾಜಕೀಯ ವಿಧ್ಯಮಾನದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ರಾಜ್ಯಕ್ಕೆ ಶೋಭಾ?
ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆ ಎನ್ನುವ ಚರ್ಚೆ ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ವಿಧಾನ ಪರಿಷತ್‍ನಲ್ಲಿ ಸೋಮಣ್ಣ ಅವರ ಬದಲಿಗೆ ಪಕ್ಷದ ನಾಯಕಿಯನ್ನಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡುವ ಕುರಿತು ಅಮಿತ್ ಷಾ ಜೊತೆ ಬಿ.ಎಸ್.ಯಡಿಯೂರಪ್ಪ ಅವರು ಚರ್ಚಿಸಿದ್ದು, ಇದಕ್ಕೆ ಅಮಿತ್ ಷಾ ಅವರು ಸಮ್ಮತಿ ನೀಡದೆ, ಮುಂದಿನ ದಿನಗಳಲ್ಲಿ ನೋಡೋಣ ಎಂದು ಹೇಳಿದ್ದಾರಂತೆ. ಈ ಹಿಂದೆ ಹಿರಿತನದ ಆಧಾರದ ಮೇಲೆ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಆಯನೂರು ಮಂಜುನಾಥ್ ಹೆಸರು ಕೇಳಿ ಬಂದಿತ್ತು. ಆದರೆ ಕಾಂಗ್ರೆಸ್ ಸಚಿವೆ ಜಯಮಾಲಾ ಅವರು ಸಭಾನಾಯಕಿಯಾದರೆ ಶೋಭಾ ಕರಂದ್ಲಾಜೆ ಅವರನ್ನು ಸದನಕ್ಕೆ ತರುವುದು ಬಿ.ಎಸ್.ಯಡಿಯೂರಪ್ಪ ಅವರ ಯೋಜನೆ ಆಗಿತ್ತು ಎನ್ನಲಾಗಿದೆ.

https://youtu.be/0KekoQNV5nA

Share This Article
Leave a Comment

Leave a Reply

Your email address will not be published. Required fields are marked *