ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು `ಕಾವಿ’ಯಿಂದ ಮಾತ್ರ ಸಾಧ್ಯ: ಸಚಿವ ಅನಂತ್ ಕುಮಾರ್ ಹೆಗ್ಡೆ

Public TV
1 Min Read

ದಾವಣಗೆರೆ: ನಾನು ಜೀವನದಲ್ಲಿ ಗೌರವ ಕೊಡುವುದು ಕಾವಿಗೆ ಮಾತ್ರ. ಅದಕ್ಕೆ ಸದಾ ತಲೆಬಾಗುತ್ತೇನೆ. ಕಾವಿಗೆ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಸಾಮರ್ಥ್ಯವಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ನೀಡಿದ್ರು.

ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ತರಳುಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಮಾಜದಲ್ಲಿ ಎಲ್ಲದಕ್ಕೂ ಮಿಗಿಲಾಗಿ ನಾನು ಕಾವಿತೊಟ್ಟ ಸ್ವಾಮೀಜಿಗಳಿಗೆ ಸದಾ ತಲೆಬಾಗುವೆ. ರಾಜಕೀಯ ಇತಿಹಾಸದಲ್ಲಿ ಸರಿದಾರಿಗೆ ತರುವ ಶಕ್ತಿ ಇರುವುದು ಕೇಸರಿ ಬಟ್ಟೆಗೆ ಮಾತ್ರ. ಇತಿಹಾಸದ ಮಹಾಪುರುಷರು ರಾಜ ಮಹಾರಾಜರುಗಳಲ್ಲ. ಇತಿಹಾಸ ಹುಟ್ಟಿದ್ದು ಸಂತರಿಂದ ಕಾವಿಧಾರಿಗಳಿಂದ ಎಂದರು.

ಬಸವಣ್ಣ ಎಲ್ಲರನ್ನೂ ಒಂದು ಮಾಡಲು ಮುಂದಾಗಿದ್ದರು. ಜಾತಿ ವ್ಯವಸ್ಥೆಯನ್ನು ಸರಿದಾರಿಗೆ ತರಲು ಯತ್ನಿಸಿದ್ದರು. ಅಲ್ಲದೇ ಜಾತಿ ವ್ಯವಸ್ಥೆ ನಿರ್ಮೂಲನೆ ಆಗಬೇಕು ಎಂದು ಬಸವಣ್ಣ ಹೇಳಿದ್ದರು. ಆದ್ರೆ ಇದೀಗ ಅದೇ ಒಂದು ಜಾತಿಯಾಗುತ್ತಿದೆ. ಅವರು ಹೇಳಿದ್ದನ್ನು ನಾವು ಸರಿಯಾಗಿ ಗ್ರಹಿಸಿದ್ದೇವೆಯೇ ಎಂದು ಅವಲೋಕನ ಮಾಡಿಕೊಳ್ಳಬೇಕಿದೆ. ಬಸವಣ್ಣನವರು ಹೇಳಿದ್ದು ಒಂದು ಆದರೆ ನಡೆಯುತ್ತಿರುವುದು ಬೇರೆ ಎಂದು ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಟಾಂಗ್ ನೀಡಿದ್ರು.

ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದ ದಲಿತ ಸಂಘಟನೆಗಳು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ರು.

Share This Article
Leave a Comment

Leave a Reply

Your email address will not be published. Required fields are marked *