ಕಲ್ಲಡ್ಕ ಪ್ರಭಾಕರ್ ಶಾಲೆಗಾಗಿ ಭಿಕ್ಷಾಂದೇಹಿ ಆಂದೋಲನ- 2 ದಿನದಲ್ಲಿ ಹರಿದುಬಂದ ಹಣವೆಷ್ಟು ಗೊತ್ತಾ?

Public TV
2 Min Read

ಮಂಗಳೂರು: ನಗರದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಭಿಕ್ಷೆ ಬೇಡೋಕೆ ಶುರು ಮಾಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ ಶಾಲೆಗೆ ಸರ್ಕಾರ ಅನುದಾನ ಕಡಿತಗೊಳಿಸಿದ ಮೇಲೆ ಭಿಕ್ಷಾಂದೇಹಿ ಆಂದೋಲನ ಶುರು ಮಾಡಿದ್ದು, ಲಕ್ಷಾಂತರ ರುಪಾಯಿ ಹರಿದು ಬಂದಿದೆ.

ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಬಂಟ್ವಾಳ ಪುಣಚದ ಶ್ರೀದೇವಿ ಶಾಲೆಗೆ 10 ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಿಂದ ಅನ್ನದಾನಕ್ಕಾಗಿ ಅನುದಾನ ಬರುತ್ತಿತ್ತು. ಆದರೆ ಈ ಅನುದಾನವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿತ್ತು. ನನ್ನ ಪ್ರಾಣ ಇರುವವರೆಗೆ ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕುತ್ತೇನೆಂದು ಭಟ್ ಪ್ರತಿಜ್ಞೆ ಮಾಡಿದ್ದರು. ಈಗ ಮುಂಬೈ ಮೂಲದ ಮೂವರ ತಂಡ ವಿಶಿಷ್ಟ ಭಿಕ್ಷಾಟನೆಗೆ ಕೈ ಹಾಕಿದೆ. ಸಾಮಾಜಿಕ ಜಾಲತಾಣದ ಮೂಲಕ ಭಿಕ್ಷಾಂದೇಹಿ ಅಭಿಯಾನ ಆರಂಭಿಸಿದ್ದು ಎರಡೇ ದಿನದಲ್ಲಿ 5 ಲಕ್ಷದ 60 ಸಾವಿರ ರೂ. ಹಣ ಹರಿದು ಬಂದಿದೆ.

ಮಂಗಳೂರಿಗರೇ ಆಗಿದ್ದು ಮುಂಬೈನಲ್ಲಿ ನೆಲೆಸಿರುವ ಮಹೇಶ್, ವಿಕ್ರಮ್ ಮತ್ತು ವಿವೇಕ್ ಶೆಟ್ಟಿ ಅನ್ನೋರು ಪಬ್ಲಿಕ್ ಟಿವಿ ವರದಿ ನೋಡಿ ಪೋಸ್ಟ್‍ಕಾರ್ಡ್ ಡಾಟ್ ಕಾಂ ವೆಬ್‍ಸೈಟ್ ಮೂಲಕ ಭಿಕ್ಷಾಂದೇಹಿ ಎಂಬ ಆನ್‍ಲೈನ್ ಆಂದೋಲನ ಆರಂಭಿಸಿದ್ದರು. ಅದರಲ್ಲಿ ಶಾಲೆಯ ಬಗ್ಗೆ, ಅನುದಾನದ ಬಗ್ಗೆ, ನಂತರ ಕಡಿತಗೊಳಿಸಿದ್ದರ ಬಗ್ಗೆ ಆಗ್ತಿರೋ ಬೆಳವಣಿಗೆಗಳ ಬಗ್ಗೆ ವಿವರಿಸಿ ಮಕ್ಕಳ ಅನ್ನಕ್ಕಾಗಿ ನೆರವು ಕೇಳಿದ್ದರು.

ಆನ್‍ಲೈನ್ ನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು ಶಾಸಕ ಸಿ.ಟಿ. ರವಿ 1 ಲಕ್ಷ ರೂ. ನೆರವು ನೀಡೋದಾಗಿ ಟ್ವಿಟರ್‍ನಲ್ಲಿ ಘೋಷಿಸಿದ್ದಾರೆ. ಕೆಲವರು ಹೆಸರು ಹೇಳಲಿಚ್ಚಿಸದೆ ಲಕ್ಷಾಂತರ ರೂಪಾಯಿ ಘೋಷಿಸಿದ್ದಾರೆ. ಮಂಗಳೂರಿನ ಉರ್ವಾದಲ್ಲಿ ರೈಸ್ ಮಿಲ್ ಹೊಂದಿರುವ ನಂದನ್ ಮಲ್ಯ ಅನ್ನೋರು 500 ಕೆಜಿ ಅಕ್ಕಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್, ಟ್ವಿಟರ್‍ನಲ್ಲಿ ಈ ಭಿಕ್ಷಾಂದೇಹಿ ಆಂದೋಲನ ವೈರಲ್ ಆಗಿದೆ. ಈ ಸಂಸ್ಥೆ ಒಟ್ಟು 80 ಲಕ್ಷ ರೂ. ಭಿಕ್ಷಾಟನೆ ಮಾಡಿ ಮಕ್ಕಳ ಊಟಕ್ಕಾಗಿ ತೆಗೆದಿಡುವ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರಕ್ಕೆ ಇನ್ನು 8 ತಿಂಗಳ ಕಾಲವಿದ್ದು ಆ 8 ತಿಂಗಳಿಗೆ ಬೇಕಾಗುವ 80 ಲಕ್ಷವನ್ನು ಭಿಕ್ಷಾಟನೆ ಮೂಲಕ ಸಂಗ್ರಹಿಸಲು ನಿರ್ಧರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *