ಲಾರಿ ಪಲ್ಟಿಯಾಗಿ ಜನ ಈರುಳ್ಳಿ ಹೊತ್ತೊಯ್ದರು ಎಂದ- 7.16 ಲಕ್ಷ ಮೌಲ್ಯದ ಈರುಳ್ಳಿ ಕದ್ದ ಚಾಲಕ

Public TV
1 Min Read

ತುಮಕೂರು: ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು ಅದನ್ನು ಕದಿಯುವ ಕಳ್ಳರ ಹಾವಳಿ ಕೂಡ ಹೆಚ್ಚಾಗುತ್ತಿದೆ. ತುಮಕೂರಿನಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಚಾಲಕನೇ ಮಾಲೀಕನಿಗೆ ಯಾಮಾರಿಸಿ ಈರುಳ್ಳಿ ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.

ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯ ಯರಗುಂಟೇಶ್ವರ ನಗರದ ಬಳಿ ಈ ಘಟನೆ ನಡೆದಿದೆ. ಆನಂದಕುಮಾರ್ ಎಂಬವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಚ್ಚವನಹಳ್ಳಿಯಿಂದ ಸುಮಾರು 10 ಕ್ವಿಂಟಾಲ್ ಈರುಳ್ಳಿಯನ್ನು ಚೆನ್ನೈನ ಮೋರ್ ವೆಲ್ ಕಂಪನಿಗೆ ಲಾರಿಯಲ್ಲಿ ಲೋಡ್ ಮಾಡಿ ಕಳುಹಿಸಿದ್ದರು. ಈ ಈರುಳ್ಳಿಗಳನ್ನು 183 ಚೀಲಗಳಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಇದನ್ನೂ ಓದಿ: ಈರುಳ್ಳಿ ತುಂಬಿದ್ದ ಲಾರಿಯೇ ಮಾಯ – ಬರೋಬ್ಬರಿ 20 ಲಕ್ಷ ರೂ. ಈರುಳ್ಳಿ ಲೂಟಿ

ಯರಗುಂಟೇಶ್ವರ ನಗರದ ಬಳಿ ಲಾರಿ ಅಪಘಾತಕ್ಕೀಡಾಗಿ ಮುಗುಚಿ ಬಿದ್ದು ಈರುಳ್ಳಿಯನ್ನ ಜನರು ಹೊತ್ತೋಯ್ದಿದ್ದಾರೆ. ನನಗೂ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಲಾರಿ ಚಾಲಕ ಚೇತನ್ ತನ್ನ ಮಾಲೀಕನಿಗೆ ಕರೆ ಮಾಡಿ ಬೇಗ ಸ್ಥಳಕ್ಕೆ ಬನ್ನಿ ಎಂದು ಸುಳ್ಳು ಹೇಳಿದ್ದಾನೆ. ಬಳಿಕ ಹಿರಿಯೂರು ತಾಲೂಕಿನ ಕಸ್ತೂರಿರಂಗನ್ ಬಳಿಯ ಗೊಲ್ಲಡಕು ಬಳಿ ಮಾರ್ಗ ಮಧ್ಯೆಯೇ 80 ಚೀಲ ಈರುಳ್ಳಿಯನ್ನು ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಮೂಟೆಯಷ್ಟು ಈರುಳ್ಳಿ ರಾತ್ರೋರಾತ್ರಿ ಕಳ್ಳತನ

ಆದರೆ ಈರುಳ್ಳಿ ಮಾಲೀಕ ಆನಂದ್‍ಕುಮಾರ್ ಸ್ಥಳಕ್ಕೆ ಬಂದು ನೋಡಿದಾಗ ಲಾರಿಯನ್ನ ಉದ್ದೇಶಪೂರ್ವಕವಾಗಿ ಪಲ್ಟಿ ಮಾಡಿದ ರೀತಿ ಕಂಡುಬಂತು. ಹಾಗಾಗಿ ತಾವರೆಕೆರೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಕ್ಷಣ ಕಾರ್ಯ ಪ್ರವರ್ತರಾದ ಪೊಲೀಸರು ಖತರ್ನಾಕ್ ಪ್ಲಾನ್ ಮಾಡಿ ಈರುಳ್ಳಿ ಕದ್ದಿದ್ದ ಚಾಲಕ ಹಾಗೂ ಆತನ ಜೊತೆಗಿದ್ದ ಕ್ಲೀನರ್ ಸಂತೋಷ್, ಕದ್ದ ಮಾಲನ್ನು ಪಡೆದುಕೊಂಡಿದ್ದ ಬುಡೆನ್ ಸಾಬ್, ದಾದಾಫೀರ್ ಹಾಗೂ ಶೇಖ್ ಅಲಿಖಾನ್ ಅನ್ನು ಬಂಧಿಸಿದ್ದಾರೆ.

ಸದ್ಯ ಈ ಕುರಿತು ಶಿರಾದ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿ ಚಾಲಕ ಸೇರಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಅಲ್ಲದೆ ಖದೀಮರು ಕದ್ದ ಈರುಳ್ಳಿಗಳನ್ನು ವಶಕ್ಕೆ ಪಡೆದುಕೊಂಡು ಮಾಲೀಕನಿಗೆ ತಲುಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *