ತಾಯಿ ಕಳೆದುಕೊಂಡು ಅರಣ್ಯಾಧಿಕಾರಿಗಳ ರಕ್ಷಣೆಯಲ್ಲಿದ್ದ 1 ತಿಂಗ್ಳ ಮರಿ ಆನೆ ಸಾವು!

Public TV
1 Min Read

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಅರಣ್ಯ ಪ್ರದೇಶದ ಓಂಕಾರ ವಲಯದ ಕಾಡಂಚಿನ ಕುರುಬರಹುಂಡಿಯ ಬಳಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ಮರಿಯಾನೆ ಜ್ವರದಿಂದ ಕೊನೆಯುಸಿರೆಳೆದಿದೆ.

ತಾಯಿಯಾನೆಯಿಂದ ಬೇರ್ಪಟ್ಟಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಣೆ ಮಾಡಿ ಅರಣ್ಯ ಇಲಾಖೆ ಕಚೇರಿಯಲ್ಲಿ ಆರೈಕೆ ಮಾಡುತ್ತಿದ್ದರು. ಒಂದು ತಿಂಗಳ ಮರಿಯಾನೆ ತಾಯಿಯ ಆರೈಕೆ ಇಲ್ಲದೇ ಮಂಗಳವಾರ ಜ್ವರ ಬಂದು ಮೃತಪಟ್ಟಿದೆ.

ಭಾನುವಾರ ಸುಮಾರು ರಾತ್ರಿ 3 ಆನೆಗಳು ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಆನೆಗಳನ್ನ ಓಡಿಸಿದ್ದರು. ಈ ವೇಳೆ ಮರಿಯಾನೆ ಅಲ್ಲೇ ಉಳಿದುಕೊಂಡಿತ್ತು. ಒಂದು ತಿಂಗಳ ಆನೆ ಮರಿಯನ್ನು ತಾಯಿ ಆನೆ ಬಿಟ್ಟು ಹೋಗಿತ್ತು. ಮರಿಯಾನೆ ನಿತ್ರಾಣ ಸ್ಥಿತಿಯಲ್ಲಿತ್ತು. ಅದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ನಿತ್ರಾಣ ಸ್ಥಿತಿಯಲ್ಲಿದ್ದ ಆನೆ ಮರಿಯನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಿಸಿದ್ದರು.

ಆನೆ ಮರಿಯನ್ನು ತಾಯಿಯ ಜೊತೆ ಸೇರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನಿಸಿದ್ದು, ತಾಯಿ ಆನೆ ತನ್ನ ಮರಿಯನ್ನು ಹುಡುಕಿಕೊಂಡು ಬರುತ್ತದೆಂಬ ಭರವಸೆಯಿಂದ ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದ ಬಳಿಯೇ ಆನೆಯನ್ನ ಇರಿಸಿಕೊಂಡಿದ್ದರು. ಆದ್ರೆ ಅವರ ಶ್ರಮ ವ್ಯರ್ಥವಾಗಿದೆ. ತನ್ನ ತಾಯಿ ಮುಖ ನೋಡದೇ ಒಂದು ರಾತ್ರಿ ಕಳೆದ ಮರಿಯಾನೆ ಮಂಗಳವಾರ ಮಧ್ಯಾಹ್ನ ತೀವ್ರ ಜ್ವರದಿಂದ ಮೃತಪಟ್ಟಿದೆ.

ತಾಯಿಯಾಗಿ ಹಂಬಲಿಸುತ್ತಿದ್ದ ಮರಿಯಾನೆ ಕೊನೆಗೂ ತಾಯಿಯ ಮುಖ ನೋಡದೆ ಸಾವನ್ನಪ್ಪಿರುವುದು ದುಃಖದ ಸಂಗತಿಯಾಗಿದೆ. ಇದನ್ನು ಓದಿ: ತಾಯಿ ಆನೆ ಜೊತೆ ಮರಿಯನ್ನ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ

Share This Article
Leave a Comment

Leave a Reply

Your email address will not be published. Required fields are marked *