ಕಾಂಗ್ರೆಸ್‌ನಿಂದ ಸಂವಿಧಾನ ಶಿಕಾರಿ..75 ಬಾರಿ ಬದಲಾವಣೆ| ನೆಹರು ಟು ರಾಹುಲ್‌ – ಉದಾಹರಣೆಯೊಂದಿಗೆ ತಿವಿದ ಮೋದಿ

Public TV
6 Min Read

– ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ
– 55 ವರ್ಷದಿಂದ ಒಂದೇ ಕುಟುಂಬದ ಆಡಳಿತ
– ನಮ್ಮ ರಸ್ತೆಗೆ ಅಡ್ಡವಾದರೆ ಸಂವಿಧಾನದ ತಿದ್ದುಪಡಿ
– ಸಿಎಂಗೆ ನೆಹರು ಪತ್ರ ಬರೆದಿದ್ದರು

ನವದೆಹಲಿ: 55 ವರ್ಷ ಒಂದೇ ಕುಟುಂಬ ಭಾರತದಲ್ಲಿ (India) ಆಡಳಿತ ನಡೆಸಿದೆ. ಪ್ರತಿ ಹಂತದಲ್ಲಿ ಈ ಕುಟುಂಬ ಸಂವಿಧಾನ (Constitution) ಮುಗಿಸಲು ಯತ್ನಿಸಿದೆ. ಸಂವಿಧಾನವನ್ನು ಬದಲಾಯಿಸುವುದು ಕಾಂಗ್ರೆಸ್‌ಗೆ ನಂತರ ಅಭ್ಯಾಸವಾಯಿತು. ಕಾಂಗ್ರೆಸ್ ಹಂತ ಹಂತವಾಗಿ ಸಂವಿಧಾನವನ್ನು ಬೇಟೆಯಾಡುತ್ತಾ ಬಂದಿದೆ. ಕಾಂಗ್ರೆಸ್‌ 75 ಬಾರಿ ಸಂವಿಧಾನ ಬದಲಾವಣೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.

ಸಂವಿಧಾನ ನಮ್ಮ ರಸ್ತೆಗೆ ಅಡ್ಡವಾದರೆ ಸಂವಿಧಾನದ ತಿದ್ದುಪಡಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ನೆಹರು ಪತ್ರ ಬರೆದಿದ್ದರು. ಮೊದಲ ಪ್ರಧಾನಿ ಪಾಪ ಮಾಡಿ ಹೋಗಿದ್ದರು. ನಂತರ ಬಂದವರು ಅದನ್ನೇ ಮುಂದುವರಿಸಿದರು ಎಂದು ಹೇಳುವ ಮೂಲಕ ಗಾಂಧಿ ಕುಟುಂಬವನ್ನು ಕುಟುಕಿದರು.

ವಿಶ್ವದ ಅತಿದೊಡ್ಡ, ಕಠಿಣ ಸಂವಿಧಾನ ನಮ್ಮ ದೇಶದ ಸಂವಿಧಾನ ಜಾರಿಯಾಗಿ 75 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸಂವಿಧಾನ ಕುರಿತು ವಿಶೇಷ ಚರ್ಚೆ ನಡೆಯಿತು. ಈ ವೇಳೆ ನೆಹರು ಅವರಿಂದ ಆರಂಭಿಸಿ ರಾಹುಲ್‌ ಗಾಂಧಿಯವರೆಗೆ ಗಾಂಧಿ ಕುಟುಂಬ ಹೇಗೆ ಸಂವಿಧಾನವನ್ನು ದುರ್ಬಳಕೆ ಮಾಡಿದೆ ಎಂಬುದನ್ನು 1 ಗಂಟೆ 47 ನಿಮಿಷಗಳ ಭಾಷಣದಲ್ಲಿ ವಿವರಿಸಿ ಮೋದಿ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಕಳಂಕವನ್ನು ಕಾಂಗ್ರೆಸ್‌ನಿಂದ ಎಂದಿಗೂ ಅಳಿಸಲು ಸಾಧ್ಯವಿಲ್ಲ: ಮೋದಿ

ಮೋದಿ ಹೇಳಿದ್ದೇನು?
ಕಾಂಗ್ರೆಸ್‌ನ (Congress) ಒಂದು ಕುಟುಂಬ ಸಂವಿಧಾನಕ್ಕೆ ಹಾನಿ ಮಾಡಲು ಯಾವುದೇ ಅವಕಾಶ ಬಿಟ್ಟಿಲ್ಲ. 55 ವರ್ಷ ಒಂದೇ ಕುಟುಂಬ ಆಡಳಿತ ನಡೆಸಿದೆ. ಈ ಕುಟುಂಬ ವಿಚಾರ, ನೀತಿ ರೀತಿ ನಿರಂತರವಾಗಿ ನಡೆಯುತ್ತಿದೆ. ಈ ಕುಟುಂಬ ಪ್ರತಿ ಹಂತದಲ್ಲಿ ಸಂವಿಧಾನವನ್ನು ಮುಗಿಸಲು ಯತ್ನಿಸಿದೆ. 1947-52ವರೆಗೆ ಚುನಾಯಿತ ಸರ್ಕಾರ ಇರಲಿಲ್ಲ. ಸೆಲೆಕ್ಟೆಡ್ ಸರ್ಕಾರ ಇತ್ತು. ರಾಜ್ಯಸಭೆ, ರಾಜ್ಯ ಸರ್ಕಾರ ಇರಲಿಲ್ಲ. ಚುನಾವಣಾಯಿತ ಸರ್ಕಾರ ಇಲ್ಲದಿದ್ದಾಗ ಸಂವಿಧಾನ ತಿದ್ದುಪಡಿ ಮಾಡುವ ಕೆಲಸ ಮಾಡಲಾಯಿತು. ಸಂವಿಧಾನ ನಿರ್ಮಾತೃಗಳಿಗೆ ಅವಮಾನಿಸುವ ಕೆಲಸ ಮಾಡಲಾಯಿತು.


ಸಂವಿಧಾನ ನಮ್ಮ ರಸ್ತೆಗೆ ಅಡ್ಡಲಾಗಿ ಬಂದರೆ ಸಂವಿಧಾನದ ತಿದ್ದುಪಡಿ ಮಾಡಬೇಕು ಎಂದು ನೆಹರು ಸಿಎಂಗಳಿಗೆ ಪತ್ರ ಬರೆದಿದ್ದರು. ನೆಹರು ಅವರು ನಿರ್ಧಾರಕ್ಕೆ ಸಾಕಷ್ಟು ಆಕ್ಷೇಪಗಳು ಬಂದರೂ ಲೆಕ್ಕಸದೇ ತಮ್ಮದೇ ಸಂವಿಧಾನ ನಡೆಸಿದರು. ಕಾಂಗ್ರೆಸ್ ಹಂತ ಹಂತವಾಗಿ ಸಂವಿಧಾನವನ್ನು ಬೇಟೆಯಾಡಿದೆ. ಮೊದಲ ಪ್ರಧಾನಿ ಪಾಪ ಮಾಡಿ ಹೋಗಿದ್ದರು. ನಂತರ ಬಂದವರು ಅದೇ ಸಂಪ್ರದಾಯವನ್ನು ಮುಂದುವರಿಸಿದರು.

ನ್ಯಾಯಾಂಗದ ರೆಕ್ಕೆ ಕತ್ತರಿಸುವ ಕೆಲಸವನ್ನು ಇಂದಿರಾಗಾಂಧಿ (Indira Gandhi) ಮಾಡಿದ್ದರು. ತುರ್ತು ಪರಿಸ್ಥಿತಿ ಹೇರುವ ಮೂಲಕ ನ್ಯಾಯಾಂಗದ ಹಕ್ಕುಗಳನ್ನು ಇಂದಿರಾಗಾಂಧಿ ಕಿತ್ತುಕೊಂಡಿದ್ದರು. ನ್ಯಾಯಾಂಗದ ಮೇಲೆ ನಿಯಂತ್ರಣ ಮಾಡಲು ಅಧಿಕಾರ ಮಾಡಿಕೊಂಡಿದ್ದರು.ಕೋರ್ಟ್ ಅವರ ಆಯ್ಕೆಯನ್ನು ರದ್ದು ಮಾಡಿತ್ತು. ಅದಕ್ಕೆ ಸಿಟ್ಟಿನಿಂದ ಇಂದಿರಾಗಾಂಧಿ ಕುರ್ಚಿ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದರು. 1975 ರಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಅಧ್ಯಕ್ಷ ಇವರ ಚುನಾವಣೆ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗದ ತಿದ್ದುಪಡಿ ಮಾಡಿದರು.

ರಾಜೀವ್ ಗಾಂಧಿ (Rajiv Gandhi) ಪ್ರಧಾನಮಂತ್ರಿಯಾದ ಬಳಿಕ ಸಂವಿಧಾನಕ್ಕೆ ಮತ್ತೊಂದು ಹಾನಿ ಮಾಡಿದರು. ಎಲ್ಲರಿಗೂ ಸಮಾನತೆ, ಎಲ್ಲರಿಗೂ ನ್ಯಾಯಕ್ಕೆ ಧಕ್ಕೆ ಮಾಡಿದರು. ಶಹಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕೋರ್ಟ್ ಆದೇಶವನ್ನು ಮೆಟ್ಟಿನಿಂತರು. ಕೋರ್ಟ್ ಆದೇಶ ಬದಲಿಸಲು ಸಂವಿಧಾನ ತಿದ್ದುಪಡಿ ಮಾಡಿದರು. ವೋಟು ಬ್ಯಾಂಕ್‌ಗಾಗಿ, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಮಹಿಳೆಯ ಹಕ್ಕು ಕಸಿಯಲಾಯಿತು.


ಮನಮೋಹನ್‌ ಸಿಂಗ್‌ (Manmohan Singh) ಅವಧಿಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಸಂವಿಧಾನಕ್ಕೆ ಆಳವಾದ ಏಟು ನೀಡಲಾಯಿತು. ಚುನಾವಣೆಯಲ್ಲಿ ಆಯ್ಕೆಯಾದ ಸರ್ಕಾರದ ಪ್ರಧಾನಿಯ ಮೇಲೆ ನ್ಯಾಷನಲ್ ಅಡ್ವೈಸರಿ ಸಮಿತಿ ರಚನೆ ಮಾಡಲಾಯಿತು. ಇದನ್ನೂ ಓದಿ: ನೀವು ಮನುಸ್ಮೃತಿ ಪರವೋ ಸಂವಿಧಾನದ ಪರವೋ? 50% ಮೀಸಲಾತಿ ಗೋಡೆಯನ್ನು ತೆಗೆಯುತ್ತೇವೆ: ರಾಹುಲ್‌ ಗಾಂಧಿ

ಜನರು ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಸಂಸದರು ಪ್ರಧಾನಿ ಅವರನ್ನು ಆಯ್ಕೆ ಮಾಡುತ್ತಾರೆ. ಪ್ರಧಾನಿ ಮಂತ್ರಿ ಮಂಡಲವನ್ನು ರಚನೆ ಮಾಡುತ್ತಾರೆ. ಇಂತಹ ಕ್ಯಾಬಿನೆಟ್ ನಿರ್ಧಾರವನ್ನು ಪತ್ರಕರ್ತರ ಮುಂದೆ ಹರಿದು ಹಾಕಲಾಯಿತು. ಒಬ್ಬ ಅಹಂಕಾರಿ ಕ್ಯಾಬಿನೆಟ್‌ ನಿರ್ಧಾರವನ್ನು ಹರಿದು ಹಾಕುವುದು ಯಾವ ರೀತಿಯ ವ್ಯವಸ್ಥೆ?(ಎರಡು ವರ್ಷ ಜೈಲುಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳ ಸದಸ್ಯತ್ವವನ್ನು ಅನರ್ಹಗೊಳಿಸುವುದರಿಂದ ರಕ್ಷಿಸಲು 2013ರಲ್ಲಿ ಯುಪಿಎ–2 ಸರ್ಕಾರವು ತರಲು ಹೊರಟಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ಸ್ವತಃ ರಾಹುಲ್‌ ಗಾಂಧಿ ಸಾರ್ವಜನಿಕವಾಗಿ ಹರಿದುಹಾಕಿದ್ದರು). ಒಬ್ಬ ಅಹಂಕಾರಿ ಸಂಪುಟ ನಿರ್ಧಾರ ಹರಿದು ಹಾಕಿದರೆ ಸಚಿವ ಸಂಪುಟದ ನಿರ್ಧಾರ ಬದಲಾಗುತ್ತದೆ.

ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬೇಕಾ ಬೇಡವೇ ಎಂದು ಚರ್ಚೆ ನಡೆದಿತ್ತು. ಸ್ವತ: ಅಂಬೇಡ್ಕರ್‌ ಅವರು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕಾಗಿ ವೋಟ್ ಬ್ಯಾಂಕ್ ಖುಷಿಪಡಿಸಲು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಮೂಲಕ ಸಂವಿಧಾನ ನಿರ್ಮಾತೃರ ಮನಸ್ಸಿಗೆ ಕಾಂಗ್ರೆಸ್ ಘಾಸಿ ಮಾಡಿತ್ತು.

ಕಾಂಗ್ರೆಸ್‌ಗೆ ಸಂವಿಧಾನ ಪವಿತ್ರ ಗ್ರಂಥ ಅಲ್ಲ, ಆಟದ ವಸ್ತುವಾಗಿದೆ. ಜನರನ್ನು ಹೆದರಿಸಲು ಸಂವಿಧಾನವನ್ನು ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದೆ. ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಸಂವಿಧಾನವನ್ನೇ ಪಾಲಿಸುವುದಿಲ್ಲ. ಕುಟುಂಬ ರಾಜಕೀಯ, ಅಧಿಕಾರ ದಾಹದಿಂದ ಕೂಡಿದೆ. ಸರ್ದಾರ್ ಪಟೇಲ್ ಪ್ರಧಾನಿಯಾಗಬೇಕಿತ್ತು. ಆದರೆ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಬಿಡಲಿಲ್ಲ. ತಮ್ಮ ಪಕ್ಷದ ಸಂವಿಧಾನ ಪಾಲನೆ ಮಾಡದವರು ದೇಶದ ಸಂವಿಧಾನ ಹೇಗೆ ಸ್ವೀಕಾರ ಮಾಡುತ್ತಾರೆ?

ಕಾಂಗ್ರೆಸ್‌ನಲ್ಲಿ ಸೀತರಾಮ್ ಕೇಸರಿ ಎನ್ನುವ ಅತಿ ಹಿಂದುಳಿದ ಸಮುದಾಯದ ಅಧ್ಯಕ್ಷರಿದ್ದರು. ಅವರನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಅವಮಾನ ಮಾಡಲಾಯಿತು. ಕಾಂಗ್ರೆಸ್ ಪಕ್ಷವನ್ನ ಒಂದು ಕುಟುಂಬ ಕಬ್ಜಾ ಮಾಡಿಕೊಂಡಿತು. ಸಮಾನ ನಾಗರಿಕ ಸಂಹಿತ ಸಂವಿಧಾನ ರಚನಾ ಸಮಿತಿಯ ಗಮನದಲ್ಲಿತ್ತು. ಚರ್ಚೆ ಬಳಿಕ ಆಯ್ಕೆಯಾಗಿ ಬಂದ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡಲಿ ಎಂದು ಬಿಡಲಾಯಿತು. ಧಾರ್ಮಿಕ ಅಧಾರದ ಮೇಲೆ ನೀಡಲಾಗುವ ವೈಯಕ್ತಿಕ ಕಾನೂನು ಅಂತ್ಯಗೊಳಿಸಲು ಅಂಬೇಡ್ಕರ್ ನಿರ್ಧರಿಸಿದ್ದರು. ಸುಪ್ರೀಂಕೋರ್ಟ್ ಕೂಡಾ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಯಾಗಬೇಕು ಎಂದು ಹೇಳಿದೆ. ಎಲ್ಲಾ ಭಾವನೆ ಗಮನದಲ್ಲಿಟ್ಟುಕೊಂಡು ಅದನ್ನು ಜಾರಿ ಮಾಡುವ ದಾರಿಯಲ್ಲಿದ್ದೇವೆ. ಕಾಂಗ್ರೆಸ್ ಇದನ್ನು ವಿರೋಧ ಮಾಡುತ್ತಿದೆ. ಯಾಕೆಂದರೆ ಇದು ಅವರ ರಾಜಕೀಯಕ್ಕೆ ಹೊಂದಿಕೆ ಆಗುವುದಿಲ್ಲ.

 

Share This Article