ಓಮಿಕ್ರಾನ್ ಭೀತಿ – ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪತ್ರ

Public TV
1 Min Read

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಸೋಂಕು ಹರಡುವಿಕೆ ತೀವ್ರವಾಗುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸೋಂಕು ಹೆಚ್ಚಾಗುತ್ತಿರುವ ಎಂಟು ರಾಜ್ಯಗಳಿಗೆ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ ಪತ್ರ ಬರೆದಿದ್ದು ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ.

ದೆಹಲಿ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಜಾರ್ಖಂಡ್‌ಗೆ ಪತ್ರ ಬರೆಯಲಾಗಿದ್ದು ವ್ಯಾಕ್ಸಿನೇಷನ್‌ ವ್ಯಾಪ್ತಿ ಹೆಚ್ಚಿಸಬೇಕು. ಟೆಸ್ಟಿಂಗ್ ಹೆಚ್ಚು ಮಾಡಬೇಕು ಮತ್ತು ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಸಿದ್ಧವಾಗಿಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: 4 ಬಾರಿ ಕೋವಿಡ್‌ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್‌

ದೇಶದ ಎಲ್ಲ ರಾಜ್ಯಗಳಲ್ಲಿ ಸದ್ಯ ಓಮಿಕ್ರಾನ್ ಪತ್ತೆಯಾಗುತ್ತಿದ್ದು, ಮುಂಬೈ, ದೆಹಲಿ ಸೇರಿದಂತೆ 14 ಮಹಾನಗರಗಳಲ್ಲಿ ಸೋಂಕು ಹೆಚ್ಚುತ್ತಿದೆ. ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಓಮಿಕ್ರಾನ್ ಹರಡುವಿಕೆ ವೇಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಬರೆಯಲಾಗಿದ್ದು ತಕ್ಷಣದ ಕ್ರಮಕ್ಕೆ ಸಲಹೆ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಶ್ಲೇಷಿಸಲಾದ 115 ಕೋವಿಡ್ -19 ಮಾದರಿಗಳಲ್ಲಿ ಶೇ.46 ರಷ್ಟು ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ವೇಗವಾಗಿ ಹರಡುತ್ತಿರುವ ರೂಪಾಂತರವು ಕ್ರಮೇಣ ಸಮುದಾಯದಲ್ಲಿ ಹರಡುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ದೆಹಲಿ ಆಸ್ಪತ್ರೆಗಳಲ್ಲಿ 200 ಕೋವಿಡ್ ರೋಗಿಗಳಿದ್ದು, ಅವರ ಪೈಕಿ 102 ಮಂದಿ ನಗರಕ್ಕೆ ಸೇರಿದವರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ದೃಢ – 43ಕ್ಕೇರಿದ ಸೋಂಕಿತರ ಸಂಖ್ಯೆ

24 ಗಂಟೆಗಳ ಅವಧಿಯಲ್ಲಿ ಮುಂಬೈನಲ್ಲಿ 2,510 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಶೇ. 82 ಕ್ಕೆ ಜಿಗಿದಿದೆ. ದೆಹಲಿಯಲ್ಲಿ ಬುಧವಾರ 923 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ಪ್ರಮಾಣ ಶೇ. 86 ರಷ್ಟು ಹೆಚ್ಚಿದೆ. ರಾತ್ರಿ ಕರ್ಫ್ಯೂ, ಸೆಕ್ಷನ್ 144 ಮತ್ತು ಕಡ್ಡಾಯ ವ್ಯಾಕ್ಸಿನೇಷನ್‌ ನಿರ್ಧಾರಗಳನ್ನು ಹಲವು ರಾಜ್ಯಗಳು ಕೈಗೊಂಡಿವೆ. ಪ್ರಕರಣಗಳು ಹೆಚ್ಚಾದಂತೆ ಹೊಸ ವರ್ಷದ ಸಂಭ್ರಮಾಚರಣೆಯನ್ನು ನಿಯಂತ್ರಣದಲ್ಲಿಡಲು ಹಲವಾರು ರಾಜ್ಯಗಳು ಕಠಿಣ ನಿರ್ಬಂಧಗಳನ್ನು ವಿಧಿಸಿವೆ.

Share This Article
Leave a Comment

Leave a Reply

Your email address will not be published. Required fields are marked *