ಚಿಕ್ಕಮಗಳೂರು | ಸೇತುವೆ ಕುಸಿದು 6 ಹಳ್ಳಿಗಳ ಸಂಪರ್ಕ ಕಡಿತ

Public TV
1 Min Read

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆಯ (Upper Bhadra Project) ನೀರಿನ ರಭಸಕ್ಕೆ ಅಜ್ಜಂಪುರ (Ajjampura) ತಾಲೂಕಿನ ಅಬ್ಬಿನಹೊಳಲು ಗ್ರಾಮದ ಸೇತುವೆ ಮುರಿದು ಬಿದ್ದಿದೆ. ಪರಿಣಾಮ ಐದಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ಸೇತುವೆ ಕುಸಿತದಿಂದ ಅಬ್ಬಿನಹೊಳಲು, ಮೆಣಸಿನಕಾಯಿ ಹೊಸಳ್ಳಿ, ಭಕ್ತನಕಟ್ಟೆ ಮತ್ತು ಶಿವನಿ ಸುತ್ತಮುತ್ತಲಿನ ಜನರು ಮತ್ತು ವಾಹನಗಳ ಸಂಚಾರ ಸಾಧ್ಯವಿಲ್ಲದಂತಾಗಿದೆ. ಈ ಸೇತುವೆ ಬಹಳ ಹಳೆಯ ಸೇತುವೆಯಾಗಿದೆ. ಸೇತುವೆ ಬಗ್ಗೆ ಗಮನ ಹರಿಸದೆ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಹರಿಸುತ್ತಿದ್ದಾರೆ. ಪರಿಣಾಮ ಜನರು ಪರದಾಡುವಂತಾಗಿದೆ ಎಂದು ಗ್ರಾಮಗಳ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಸಾಧ್ಯವಾಗದೆ, ರೈತರು ಹೊಲ-ಗದ್ದೆ, ತೋಟ, ಮನೆಗಳಿಗೆ ಹೋಗಿ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಸ್ಥಳಕ್ಕೆ ಭೇಟಿ ಕೊಟ್ಟು ಒಂದು ವರ್ಷ ತುಂಬಿಲ್ಲ. ಈಗಲೇ ಇಂತಹ ಅನಾಹುತ ನಡೆದಿದೆ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಜನರಿಗಾಗಿರುವ ತೊಂದರೆ ನಿವಾರಿಸಬೇಕು ಎಂದು ಹಳ್ಳಿಗರು ಆಗ್ರಹಿಸಿದ್ದಾರೆ.

Share This Article