ಗುಜರಿಗೆ ಹಾಕ್ಬೇಕಿದ್ದ ಬಸ್ಸನ್ನ ರೋಡಿಗೆ ಬಿಟ್ರು- ಟೈರ್ ಬ್ಲಾಸ್ಟ್ ಆಗಿ 3 ಮಂದಿ ಆಸ್ಪತ್ರೆ ಸೇರಿದ್ರು!

Public TV
2 Min Read

ಚಿಕ್ಕಬಳ್ಳಾಪುರ: ಹಣದ ಆಸೆಗೆ ಬಿದ್ದ ಮಾಲೀಕ ಗುಜರಿಗೆ ಹಾಕಬೇಕಿದ್ದ ಖಾಸಗಿ ಬಸ್ಸನ್ನು ರಸ್ತೆಗೆ ಬಿಟ್ಟಿದ್ದು, ಚಲಿಸುತ್ತಿದ್ದ ವೇಳೆ ಬಸ್ಸಿನ ಟೈರ್ ಸ್ಫೋಟಗೊಂಡಿದ್ದರಿಂದ ಸೀಟ್ ನಲ್ಲಿ ಕುಳಿತ್ತಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಸ್ ಎನ್ ಹೆಸರಿನ ಖಾಸಗಿ ಬಸ್ಸು ಪ್ರತಿನಿತ್ಯ ಬೆಂಗಳೂರು ಗೌರಿಬಿದನೂರು ಮಾರ್ಗವಾಗಿ ಸಂಚಾರ ನಡೆಸುತ್ತಿತ್ತು. ಈ ಬಸ್ಸು ತೀರ ಹಳೆಯದಾಗಿದ್ದು, ಪ್ರಯಾಣಿಕ ಓಡಾಡಲು ಯೋಗ್ಯವಾಗಿರಲಿಲ್ಲ. ಅಷ್ಟೇ ಅಲ್ಲದೇ ಸವೆದು ಹೋಗಿದ್ದ ಟೈರ್ ಗಳನ್ನು ಬದಲಿಸಿ ಹೊಸ ಟೈರ್ ಹಾಕಿಸುವ ಬದಲಿಗೆ ಹಳೇ ಟೈರ್ ರೀ-ಬೆಲ್ಟ್ ಮಾಡಿಸಲಾಗಿತ್ತು. ಹೀಗಾಗಿ ಸಂಚರಿಸುತ್ತಿದ್ದ ವೇಳೆ ಟೈರ್ ಬ್ಲಾಸ್ಟ್ ಆಗಿ ಮೂವರೂ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಹೊರಟ ಬಸ್ ಗೌರಿಬಿದನೂರು ಮಾರ್ಗವಾಗಿ ಹೋಗುವ ವೇಳೆ ಮಾಕಳಿ ಕಣಿವೆ ಪ್ರದೇಶದಲ್ಲಿ ಬಸ್ ಟೈರ್ ಸ್ಫೋಟಗೊಂಡಿದೆ. ಸ್ಫೋಟಗೊಂಡ ರಭಸಕ್ಕೆ ಟೈರ್ ಮೇಲ್ಭಾಗದ ಸೀಟ್ ನಲ್ಲಿ ಕುಳಿತ್ತಿದ್ದ ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರ ಕಾಲಿನ ಮೂಳೆಗಳು ಮುರಿದು ಹೋಗಿದ್ದು, ಗಾಯಗೊಂಡವರನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡೆಸಲಾಗುತ್ತಿದೆ. ಬೆಂಗಳೂರು ಉತ್ತರ ತಾಲೂಕಿನ ಪವನ್(10), ಗೌರಿಬಿದನೂರು ತಾಲೂಕಿನ ಕದಿರಿದೇವನಹಳ್ಳಿಯ ಮದ್ದೂರಪ್ಪ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಬಸ್ ಮಾಲೀಕನ ನಿರ್ಲಕ್ಷ್ಯತನವೇ ಘಟನೆಗೆ ಕಾರಣವಾಗಿದೆ. ಹಳೇ ಟೈರ್ ಮತ್ತು ಓವರ್ ಲೋಡ್ ಪ್ರಯಾಣದಿಂದಲೇ ಟೈರ್ ಸ್ಫೋಟಗೊಂಡಿದೆ. ಬಸ್ ಮಾಲೀಕನ ಬೇಜವಾಬ್ದಾರಿಯಿಂದ ಅಮಾಯಕ ಪ್ರಯಾಣಿಕರು ಕಾಲು ಮುರಿದುಕೊಂಡಿದ್ದಾರೆ. ಮಾನವೀಯತೆ ಮೇಲೆ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಬೇಕಾದ ಬಸ್ ಮಾಲೀಕ ನಾಪತ್ತೆಯಾಗಿದ್ದಾನೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಘಟನೆಗೆ ಕಾರಣವಾದ ಬಸ್ಸನ್ನ ವಶಪಡಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಸ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇಂದು ಬೆಳಿಗ್ಗೆ ಬಸ್ ಮಾಲೀಕ ಮತ್ತು ಚಾಲಕ, ಕಾರ್ಖಾನೆ ಮಾಲೀಕರ ಜೊತೆ ರಸ್ತೆ ಸುರಕ್ಷತೆಯ ಬಗ್ಗೆ ಜಾಥಾ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ, ಸರಕು ಸಾಗಾಣಿಕೆ ವಾಹನಗಳಲ್ಲಿ ಜನರನ್ನ ಕರೆದ್ಯೊಯುವ ವೇಳೆ ಅಪಘಾತ ಸಂಭವಿಸಿದ್ದರೆ ವಾಹನ ಮಾಲೀಕನ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಗುಜರಿಗೆ ಸೇರ ಬೇಕಾದ ಬಸ್‍ಗಳು ಯಾವುದೇ ಅಡೆತಡೆ ಇಲ್ಲದೆ ಜನರನ್ನು ಕೊಂಡ್ಯೊಯುತ್ತಿವೆ. ಇದಕ್ಕೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಿದರೆ ಅಮಾಯಕ ಪ್ರಯಾಣಿಕರ ಪ್ರಾಣ ಉಳಿಯುತ್ತೆ. ಜಿಲ್ಲಾಧಿಕಾರಿ ಗುಜರಿ ವಾಹನಗಳಲ್ಲಿ ಪ್ರಯಾಣಿಕರನ್ನು ಕೊಂಡ್ಯೊಯ್ಯುಯವರ ಮೇಲೆ ಕೂಡ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *