ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಪ್ರಜ್ವಲ್ ಕಿಡಿ

Public TV
1 Min Read

ಟಿ ರಮ್ಯಾಗೆ (Ramya) ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಂಡಿದೆ. ಆ ಪ್ರಕರಣದಲ್ಲಿ ಈಗಾಗಲೇ ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರು (Bengaluru Crime Branch Police) ನಾಲ್ಕು ಜನರನ್ನ ಬಂಧಿಸಿದ್ದಾರೆ. ಸುಮಾರು 48 ಜನರ ಜಾಲತಾಣದ ಐಡಿಗಳ ಡಿಟೇಲ್ಸ್ ಕೊಟ್ಟಿದ್ದಾರೆ ನಟಿ ರಮ್ಯಾ. ಪೊಲೀಸರು ಆರು ತಂಡದೊಂದಿಗೆ ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕದ ವಿವಿಧ ಭಾಗದಲ್ಲಿ ಪೊಲೀಸರ ಕಾರ್ಯಾಚರಣೆಗೆ ಬೆಚ್ಚಿಬಿದ್ದ ಮುಖೇಡಿಗಳು ಚೆಲ್ಲಾಪಿಲ್ಲಿಯಾಗಿದ್ದಾರೆ.

ಈ ಪ್ರಕರಣದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. `ಸು ಫ್ರಮ್ ಸೋ’ ಸಿನಿಮಾವನ್ನ ವೀಕ್ಷಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ದೇವರಾಜ್ (Prajwal Devaraj) `ಯಾರ ಫ್ಯಾನ್ಸ್ ಆದರೂ ಜವಾಬ್ದಾರಿ ಬೇಕು. ಹೆಣ್ಣುಮಕ್ಕಳಿಗೆ ಕಿರುಕುಳ ಕೊಡಬಾರದು ಅನ್ನೋದು ಈ ಸು ಫ್ರಮ್ ಸೋ ಸಿನಿಮಾದ ಮೇನ್ ಕಂಟೆಂಟ್. ಧೈರ್ಯ ಇದ್ದರೆ ಮುಂದೆ ಬಂದು ಮಾತಾಡಲಿ. ಎಲ್ಲ ಚಿಕ್ಕ ಚಿಕ್ಕ ಹುಡುಗರ ಕೈಯಲ್ಲಿ ಮೊಬೈಲ್ ಇದೆ ಅಂತಾ, ಯಾರಿಗೂ ಗೊತ್ತಾಗಲ್ಲ ಎಂಬ ಭಾವನೆಯಿಂದ ಕೆಟ್ಟದಾಗಿ ಮೆಸೇಜ್ ಮಾಡಬಾರದು’ ಎಂದಿದ್ದಾರೆ.

ಅಲ್ಲದೇ ಇಷ್ಟೆಲ್ಲ ಬೆಳವಣಿಗೆಗಳು ಆಗುತ್ತಿದ್ದರೂ ಇದರ ಮಧ್ಯೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯವರ ಸಹೋದರಿಗೆ ಅಪರಿಚಿತ ವ್ಯಕ್ತಿಯಿಂದ 280 ಫೋನ್ ಕಾಲ್ ಹಾಗೂ ಅಶ್ಲೀಲ ಸಂದೇಶ, ಫೋಟೋಗಳು ಬರುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಇನ್ನು ಆ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ ನಟ ಪ್ರಜ್ವಲ್ ದೇವರಾಜ್. ಏನೇ ಆದರೂ ಕಾನೂನಾತ್ಮಕವಾಗಿ ಅಂತವರಿಗೆ ಬಿಸಿ ಮುಟ್ಟಿಸಬೇಕು ಎಂದು ನುಡಿದಿದ್ದಾರೆ ಪ್ರಜ್ವಲ್ ದೇವರಾಜ್.

Share This Article