ಪೊದೆಗೆ ಎಳೆದೊಯ್ದು ನರ್ಸ್‌ ಮೇಲೆ ಅತ್ಯಾಚಾರವೆಸಗಿ ಕೊಲೆ – ಉತ್ತರಾಖಂಡದಲ್ಲಿ ಬೆಚ್ಚಿಬೀಳಿಸುವ ಘಟನೆ

Public TV
1 Min Read

– ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೀನಕೃತ್ಯ

ಡೆಹ್ರಾಡೂನ್: ಕೋಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಮಾಸುವ ಮುನ್ನವೇ ಉತ್ತರಾಖಂಡದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ನರ್ಸ್‌ವೊಬ್ಬರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ.

ಉತ್ತರಾಖಂಡದ ಖಾಸಗಿ ಆಸ್ಪತ್ರೆಯಿಂದ ಉತ್ತರ ಪ್ರದೇಶದ ಗಡಿ ಬಳಿಯ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ನರ್ಸ್ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯಲಾಗಿದೆ.

ಜುಲೈ 30 ರ ಸಂಜೆ ಆಸ್ಪತ್ರೆಯಿಂದ ಹೊರಟು ನರ್ಸ್‌ ರುದ್ರಪುರದ ಇಂದ್ರ ಚೌಕ್‌ನಿಂದ ಇ-ರಿಕ್ಷಾವನ್ನು ಹತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಆದರೆ ಉತ್ತರ ಪ್ರದೇಶದ ಬಿಲಾಸ್‌ಪುರದ ಕಾಶಿಪುರ್ ರಸ್ತೆಯಲ್ಲಿರುವ ತನ್ನ ಬಾಡಿಗೆ ನಿವಾಸವನ್ನು ಆಕೆ ತಲುಪಿಲ್ಲ. ನರ್ಸ್‌ ತನ್ನ 11 ವರ್ಷದ ಮಗಳೊಂದಿಗೆ ತಂಗಿದ್ದಳು.

ಮರುದಿನ, ನರ್ಸ್‌ ಕಾಣೆಯಾಗಿರುವ ಬಗ್ಗೆ ಆಕೆಯ ಸಹೋದರಿ ದೂರು ನೀಡಿದರು. ಎಂಟು ದಿನಗಳ ನಂತರ ದಿಬ್ದಿಬಾ ಗ್ರಾಮದ ಆಕೆಯ ಮನೆಯಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಆಕೆಯ ಶವ ಪತ್ತೆಯಾಗಿದೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಪತ್ತೆಗೆ ಪೊಲೀಸ್ ತಂಡ ರಚಿಸಿದ್ದಾರೆ. ಸಂತ್ರಸ್ತೆಯ ಕದ್ದ ಮೊಬೈಲ್ ಫೋನ್ ಪೊಲೀಸರಿಗೆ ಸಿಕ್ಕಿದೆ. ಉತ್ತರ ಪ್ರದೇಶದ ಬರೇಲಿಯ ದಿನಗೂಲಿ ಕಾರ್ಮಿಕನಾಗಿದ್ದ ಆರೋಪಿಯನ್ನು ಬುಧವಾರ ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಕುಡಿದ ಅಮಲಿನಲ್ಲಿದ್ದ ಧರ್ಮೇಂದ್ರ ಸಂತ್ರಸ್ತೆಯನ್ನು ನೋಡಿ ಆಕೆಯನ್ನು ಹಿಂಬಾಲಿಸಿದ್ದಾನೆ. ನಂತರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯನ್ನು ಪೊದೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆಯ ಫೋನ್ ಮತ್ತು ಆಕೆಯ ಪರ್ಸ್‌ನಲ್ಲಿದ್ದ 3,000 ರೂ. ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಪ್ರಕರಣದ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ ಈ ಘಟನೆ ಜರುಗಿದೆ.

Share This Article