30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್‌ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

Public TV
3 Min Read

ಬೆಂಗಳೂರು: ತಮಗಿರುವ ಸಮಸ್ಯೆಗಳು ಹಾಗೂ ಬಹುಕಾಲದಿಂದ ಈಡೇರದ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು 30ಕ್ಕೂ ಹೆಚ್ಚಿನ ದೇಶಗಳಲ್ಲಿ ನೆಲೆಸಿರುವ ಅನಿವಾಸಿಗಳು ಪ್ರತಿನಿಧಿಸುವ ನೂರಕ್ಕೂ ಹೆಚ್ಚಿನ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಮತ್ತೊಮ್ಮೆ ಟ್ವಿಟರ್ ಮತ್ತು ಇ-ಮೇಲ್ ಅಭಿಯಾನ ನಡೆಸಲು ಅನಿವಾಸಿ ಕನ್ನಡಿಗರು ಮುಂದಾಗಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ (ಭಾರತೀಯ ಕಾಲಮಾನ) ಟ್ವಿಟರ್ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಿ ಸರಣಿ ಮನವಿ ಮತ್ತು ಬೇಡಿಕೆಗಳನ್ನು ಇಡಲಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ ಸ್ಫೋಟ – ಬೆಂಗಳೂರಿನಲ್ಲಿ ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಆರ್‌.ಅಶೋಕ್‌

ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಉದ್ಯೋಗ ಹರಸಿ ವಿದೇಶಕ್ಕೆ ತೆರಳಿದರೂ ಹುಟ್ಟೂರು ಮತ್ತು ರಾಜ್ಯದ ಆಗುಹೋಗುಗಳ ಬಗ್ಗೆ ಕಾಳಜಿ ತೋರಿಸುವವರು ಅನಿವಾಸಿ ಕನ್ನಡಿಗರು. ರಾಜ್ಯದಲ್ಲಿ ನೆರೆ, ಬರ ಸೇರಿದಂತೆ ಯಾವುದೇ ಸಂಕಷ್ಟ ಬಂದೊದಗಿದರೂ ತತ್‌ಕ್ಷಣ ಸಹಾಯಹಸ್ತ ಚಾಚುವವರೇ ಲಕ್ಷಾಂತರ ಅನಿವಾಸಿಗಳು. ಆದರೆ ಆಶ್ಚರ್ಯವೆಂದರೆ ಈ ಅನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸುವವರೇ ಇಲ್ಲ. ಬಹುಕಾಲದಿಂದ ಅವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಇದ್ದರೂ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಕೊರೊನಾ ಸಂಕಷ್ಟ ಸಂದರ್ಭದಲ್ಲಂತೂ ಇವರ ಗೋಳನ್ನು ಕೇಳುವವರೇ ಇರಲಿಲ್ಲ. ಇದೇ ಕಾರಣಕ್ಕೆ ಇದೀಗ ಅನಿವಾಸಿಗಳು ಒಗ್ಗಟ್ಟಾಗಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲೆಂದೇ ಒಂದು ದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಇಂದು ‘ಎನ್ಆರ್‌ಐ ಅಪೀಲ್ ಡೇ’ಯಾಗಿ ‌ಆಚರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಮೂಲಕ ವಿಶಿಷ್ಟ ರೀತಿಯಲ್ಲಿ ಕರ್ನಾಟಕ ಸರ್ಕಾರವನ್ನು ಎಚ್ಚರಿಸಲಿದ್ದಾರೆ. ಈ ಬಾರಿಯಾದರೂ ತಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಮಂತ್ರಿಗಳು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

2021ರ ಜನವರಿ‌ 2ರಂದು ಮೊದಲ ಬಾರಿ ‘ಎನ್ಆರ್‌ಐ ಅಪೀಲ್ ಡೇ’ ಯಶಸ್ವೀ ಟ್ವಿಟ್ಟರ್ ಅಭಿಯಾನ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಸೆಳೆದಿದ್ದ ಅನಿವಾಸಿ ಕನ್ನಡಿಗರಿಗೆ ‘ಖಂಡಿತಾ ನಿಮ್ಮ ಬೇಡಿಕೆ ಈಡೇರಿಸುವೆ’ ಎಂಬ ಭರವಸೆ ಸಿಕ್ಕಿದ್ದರೂ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೊಸ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಡಲು ಮತ್ತೊಮ್ಮೆ ಟ್ವಿಟ್ಟರ್ ಅಭಿಯಾನ ನಡೆಸಲೇಬೇಕಾದ ಅನಿವಾರ್ಯತೆ ಇದೆ. ಇದನ್ನೂ ಓದಿ: ದೇವರೊಂದಿಗೆ ದೇವರಾದ ಪುನೀತ್ ರಾಜ್‌ಕುಮಾರ್

13 ವರ್ಷಗಳ ಹಿಂದೆ ರಾಜ್ಯ ಸರ್ಕಾರ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಕ್ಷೇಮಾಭಿವೃಧ್ಧಿಯಗಾಗಿ ಸ್ಥಾಪಿತವಾದ ಸಮಿತಿಯೇ ಕನ್ನಡಿಗರ ಅನಿವಾಸಿ ಭಾರತೀಯ ಸಮಿತಿ. ಸಿಎಂ ಅವರ ನೇರ ನಿಯಂತ್ರಣಕ್ಕೆ ಒಳಪಡುವ ಈ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬಂದರೂ ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರು. ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಗಳಿರುವ ಕಾರಣ ಉಪಾಧ್ಯಕ್ಷರೇ ಈ ಸಮಿತಿಗೆ ಬೆನ್ನೆಲುಬು. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಸಮಿತಿಗೆ ಉಪಾಧ್ಯಕ್ಷರೇ ಇಲ್ಲದೇ ಅನಾಥವಾಗಿದೆ.

ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಅನಿವಾಸಿಗಳಿಗೆ ವಿಮಾನ ನಿಲ್ದಾಣದಲ್ಲಿ ವಿನಾಕಾರಣ ಕಿರುಕುಳ ನೀಡುವ ಹಲವು ದೂರುಗಳು ನಿರಂತರವಾಗಿ ಬರುತ್ತಿವೆ. ಅಧಿಕಾರಿಗಳು ತಪಾಸಣೆಯ ಹೆಸರಿನಲ್ಲಿ ಪ್ರಯಾಣಿಕರ ಲಗೇಜು ಮಾತ್ರವಲ್ಲದೇ ದಿನಬಳಕೆಯ ವಸ್ತುಗಳನ್ನೂ ವಶಪಡಿಸಿಕೊಂಡು ವಿಚಾರಣೆ ನಡೆಸುವುದು ಕಂಡುಬರುತ್ತಿದೆ. ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ವಿನಾಕಾರಣ ಕಿರುಕುಳ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಅನಿವಾಸಿ ಕನ್ನಡಿಗರ ಬೇಡಿಕೆ.

ಅನಿವಾಸಿ ಕನ್ನಡಿಗರ ಗುರುತಿನ ಚೀಟಿಯಾಗಿ ಜಾರಿಗೆ ಬಂದ ‘Norka Card’ ವಿತರಣೆಯಾಗದೆ ಉಳಿದಿದ್ದು, ಪ್ರತಿಯೊಬ್ಬ ಅನಿವಾಸಿ ಕನ್ನಡಿಗರಿಗೂ ವಿತರಣೆಯಾಗಿ ಉಪಯುಕ್ತವಾಗಿರಬೇಕು. ಅದೇ ರೀತಿ ಅನಿವಾಸಿ ಕನ್ನಡಿಗರು ಹೆಚ್ಚಿನ ಸಂದ್ರತೆಯಲ್ಲಿರುವ ದೇಶದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ಆ ಮೂಲಕ ಕನ್ನಡ ಪಾಠ ಶಾಲೆ, ಕನ್ನಡ ಕಲೆ ಸಂಸ್ಕೃತಿಯ ನಿರಂತರ ಪಸರುವಿಕೆಗೆ ನಾಂದಿಯಾಗಬೇಕು. ಈ ರೀತಿಯ ಹಲವು ಬೇಡಿಕೆಗಳನ್ನು ಈಡೇರಿಸಲು ವಿಶ್ವದಾದ್ಯಂತ ಅನಿವಾಸಿ ಕನ್ನಡಿಗರಿಂದ ಏಕಕಾಲದಲ್ಲಿ ಅಭಿಯಾನ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *