ರಾಹುಲ್‌ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುತ್ತೇನೆ: ಅಸ್ಸಾಂ ಸಿಎಂ

Public TV
1 Min Read

ಗುವಾಹಟಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಮಾನನಷ್ಟ ಪ್ರಕರಣ (Defamation Case) ದಾಖಲಿಸುವುದಾಗಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅದಾನಿ ಸಮೂಹಕ್ಕೂ (Adani Group) ತಮಗೂ ಸಂಬಂಧ ಇದೆ ಎಂಬ ಅರ್ಥ ಬರುವಂತೆ ರಾಹುಲ್‌ ಗಾಂಧಿ ಶನಿವಾರ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಮಾನಹಾನಿಕರವಾಗಿದ್ದು ರಾಹುಲ್‌ ವಿರುದ್ಧ ಗುವಾಹಟಿಯಲ್ಲೇ ಕೇಸ್‌ ದಾಖಲಿಸುವುದಾಗಿ ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

ರಾಹುಲ್‌ ಟ್ವೀಟ್‌ನಲ್ಲಿ ಏನಿತ್ತು?
ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಕೆಲವು ನಾಯಕರನ್ನು ಗುರಿಯಾಗಿಸಿ, ರಾಹುಲ್‌ ಗಾಂಧಿ ಅವರು ಶನಿವಾರ ಟ್ವೀಟ್‌ ಮಾಡಿದ್ದರು. ಇಂಗ್ಲಿಷ್‌ನಲ್ಲಿ ಅದಾನಿ ಹೆಸರನ್ನು ದೊಡ್ಡದಾಗಿ ಬರೆದು, ಕಾಂಗ್ರೆಸ್‌ ತೊರೆದ ನಾಯಕರ ಹೆಸರುಗಳನ್ನು ಅದಾನಿಯ ಇಂಗ್ಲಿಷ್‌ ಹೆಸರಿಗೆ ಹೊಂದುವಂತೆ ಜೋಡಿಸಿ ಟ್ವೀಟ್‌ ಮಾಡಿದ್ದರು.

ಗುಲಾಂ ನಬಿ ಆಜಾದ್‌, ಜೋತಿರಾಧಿತ್ಯ ಸಿಂಧಿಯಾ, ಹಿಮಂತ ಬಿಸ್ವಾ ಶರ್ಮಾ, ಕಿರಣ್‌ ಕುಮಾರ್‌ ರೆಡ್ಡಿ ಹಾಗೂ ಅನಿಲ್‌ ಕೆ. ಆ್ಯಂಟನಿ ಅವರ ಹೆಸರುಗಳನ್ನು ರಾಹುಲ್‌ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ಅವರು ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಅದಕ್ಕಾಗಿಯೇ ಎಲ್ಲರನ್ನೂ ಅವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಪ್ರಶ್ನೆಯು ಹಾಗೆಯೇ ಉಳಿಯಲಿದ್ದು ಅದಾನಿ ಕಂಪನಿಗೆ ಯಾರ 20 ಸಾವಿರ ಕೋಟಿ ರೂ. ಬೇನಾಮಿ ಹಣ ಸಂದಾಯವಾಗಿದೆ ರಾಹುಲ್‌ ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದರು.

Share This Article