ಆಸ್ಪತ್ರೆಯ ಬೆಡ್‍ನಲ್ಲಿದ್ದಾಗ ಡಿಕೆಶಿಯಿಂದ ‘ನವೆಂಬರ್’ ಶಪಥ

Public TV
1 Min Read

ಬೆಂಗಳೂರು: ದೆಹಲಿಯಲ್ಲಿ ಇಡಿ ಬಲೆಗೆ ಬಿದ್ದಿರುವ ಡಿ.ಕೆ.ಶಿವಕುಮಾರ್ ಅಲ್ಲಿಂದಲೇ ರಾಜಕೀಯ ಶಪಥವೊಂದನ್ನು ಮಾಡಿದ್ದಾರೆ. ತಮ್ಮನ್ನ ನೋಡಲು ಆಸ್ಪತ್ರೆಗೆ ಬಂದಿದ್ದ ರಾಜ್ಯ ಕೈ ನಾಯಕನ ಮುಂದೆ ಗದ್ಗದಿತರಾದ ಡಿಕೆಶಿ ‘ನವೆಂಬರ್’ ಮಾಡಿದ ಶಪಥ ಮಾಡಿದ್ದಾರೆ.

ಹೌದು. ಎರಡು ದಿನದ ಹಿಂದೆ ದೆಹಲಿಯ ರಾಮ ಮನೋಹರ್ ಲೋಹಿಯ ಆಸ್ಪತ್ರೆಯಲ್ಲಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಭೇಟಿ ಮಾಡಿದ್ದ ಸಂದರ್ಭದಲ್ಲಿ ಟ್ರಬಲ್ ಶೂಟರ್ ಈ ಶಪಥ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ತಮ್ಮನ್ನ ಕಂಡು ದುಃಖಿತರಾದ ಪರಮೇಶ್ವರ್ ಗೆ ಡಿಕೆಶಿ ಧೈರ್ಯ ತುಂಬಿದ್ದಾರೆ. ಈ ಸಂಕಷ್ಟ ಜಾಸ್ತಿ ದಿನ ಇರಲ್ಲ. ಕಾನೂನು ಪ್ರಕಾರ ಅವರು ನನ್ನನ್ನ ಏನೂ ಮಾಡಲು ಆಗಲ್ಲ. ನಾನೇನು ತಪ್ಪು ಮಾಡಿಲ್ಲ. ಅಕೌಂಟ್ಸ್ ನಲ್ಲಿ ಸಣ್ಣ ಪುಟ್ಟ ತಪ್ಪಾಗಿದೆ. ಅದನ್ನೇ ಕಾರಣ ಮಾಡಿಕೊಂಡು ರಾಜಕೀಯ ಜಿದ್ದಿಗೆ ಬಿದ್ದಿದ್ದಾರೆ. ಇವರ ಆಟ ತುಂಬಾ ದಿನ ನಡೆಯಲ್ಲ ಶೀಘ್ರವಾಗಿ ಬಂಧನದಿಂದ ಬಿಡುಗಡೆ ಆಗುತ್ತೇನೆ. ನೋಡುತ್ತಾ ಇರಿ ಎಂದಿದ್ದಾರೆ.

ಹೆಚ್ಚೆಂದರೆ ಈ ಸಂಕಷ್ಟ ನನಗೆ ನವೆಂಬರ್ ವರೆಗೆ ಮಾತ್ರ. ನವೆಂಬರ್ ನಿಂದ ನನ್ನ ಹಾದಿಯೇ ಬೇರೆ ಎಂದು ಡಿಕೆಶಿ ಖಡಕ್ ಆಗಿ ಮಾತನಾಡಿದ್ದಾರೆ. ಮುಂದಿನ ನವೆಂಬರ್ ವರೆಗೆ ನನ್ನ ಸಮಯ ಸರಿ ಇಲ್ಲ. ನವೆಂಬರ್ ನಂತರ ನನ್ನನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೆ ಮುಂದಿನ 10 ವರ್ಷ ನನ್ನ ಜಾತಕದ ಪ್ರಕಾರ ಒಳ್ಳೆಯ ರಾಜಕೀಯ ಯೋಗ, ಅಧಿಕಾರ ಯೋಗವಿದೆ. 10 ವರ್ಷದಲ್ಲಿ ರಾಜಕೀಯ ಜೀವನದಲ್ಲಿ ನನ್ನ ಕನಸಾದ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಿಯೇ ರಾಜಕೀಯದಿಂದ ನಿರ್ಗಮಿಸುತ್ತೇನೆ ಎಂದು ಡಿಕೆಶಿ ಅವರು ಪರಮೇಶ್ವರ್ ಅವರ ಬಳಿ ಹೇಳಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸಂಕಷ್ಟದ ಈ ಸಂದರ್ಭದಲ್ಲೂ ಡಿಕೆಶಿಯ ಆತ್ಮ ವಿಶ್ವಾಸದ ಈ ಶಪಥವನ್ನ ಕಂಡು ಸ್ವತಃ ಪರಮೇಶ್ವರ್ ಅಚ್ಚರಿಗೊಂಡಿದ್ದಾರೆ. ನವೆಂಬರ್ ಒಳಗೆ ಡಿಕೆಶಿ ಈ ಎಲ್ಲಾ ಸಂಕಷ್ಟದಿಂದ ಪಾರಾಗಿ ತಮ್ಮ ಮಾತಿನಂತೆ ರಾಜಕೀಯ ಪುನರ್ಜನ್ಮ ಪಡೆಯುತ್ತಾರೆಯಾ, ರಾಜ್ಯ ಆಳುವ ಕನಸು ನನಸಾಗುತ್ತಾ ಎಂಬುದೇ ಸದ್ಯದ ಕುತೂಹಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *