ನೋಟ್ ಬ್ಯಾನ್ ಎಫೆಕ್ಟ್: ರಾಯಚೂರು ಗ್ರಾಮೀಣ ಭಾಗದ ಬ್ಯಾಂಕ್‍ಗಳಲ್ಲಿ ಇನ್ನೂ ಹಣದ ಕೊರತೆ

Public TV
1 Min Read

ರಾಯಚೂರು: ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1 ಸಾವಿರ ರೂಪಾಯಿ ನೋಟುಗಳ ಅಮೌಲ್ಯೀಕರಣ ಮಾಡಿ 8 ತಿಂಗಳು ಕಳೆದ್ರೂ ಅದರ ಎಫೆಕ್ಟ್ ರಾಯಚೂರಿನ ಗ್ರಾಮೀಣ ಭಾಗದಲ್ಲಿ ಇನ್ನೂ ಮುಂದುವರೆದಿದೆ.

ಬ್ಯಾಂಕ್‍ನಲ್ಲಿ ಹಣ ಸಿಗದೆ ಮೂರ್ನಾಲ್ಕು ದಿನಗಳ ಕಾಲ ಜನ ಬ್ಯಾಂಕ್ ಮುಂದೆ ಈಗಲೂ ಕ್ಯೂ ನಿಲ್ಲುತ್ತಿದ್ದಾರೆ. ಇಡೀ ದೇಶ ಈಗ ಜಿಎಸ್‍ಟಿ ಗೊಂದಲ ಹಾಗೂ ಕುತೂಹಲದಲ್ಲಿ ಮುಳುಗಿದ್ದರೆ, ರಾಯಚೂರಿನ ಗ್ರಾಮೀಣ ಭಾಗದಲ್ಲಿ ಮಾತ್ರ ಇನ್ನೂ ನೋಟ್ ಬ್ಯಾನ್ ಹೊಡೆತದಿಂದ ಸುಧಾರಿಸಿಕೊಳ್ಳದೆ ಪರಿತಪಿಸುತ್ತಿದ್ದಾರೆ.

ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಮುಂದೆ ಯಾವಾಗ ನೋಡಿದ್ರೂ ಗ್ರಾಹಕರ ಸಾಲು ಕಾಣುತ್ತೆ. ಇವತ್ತು ಬ್ಯಾಂಕಿಗೆ ಬಂದ್ರೆ ಎರಡು ದಿನ ಬಳಿಕ ಹಣ ಸಿಗುತ್ತೆ. ಅದೂ ನಿರೀಕ್ಷೆಗಿಂತಲೂ ಕಡಿಮೆ ಹಣವನ್ನ ಬ್ಯಾಂಕ್ ಅಧಿಕಾರಿಗಳು ನೀಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಬ್ಯಾಂಕ್‍ನಲ್ಲಿ ಹಣದ ಕೊರತೆ. ದಿನಕ್ಕೆ ಎರಡರಿಂದ ಮೂರು ಲಕ್ಷ ರೂ. ಮಾತ್ರ ಒಟ್ಟು ಗ್ರಾಹಕರಿಗೆ ಸಿಗುತ್ತಿದೆ. ಒಬ್ಬರಿಗೆ 5 ಸಾವಿರ ರೂ. ಮಾತ್ರ ಹಣ ಕೊಡುತ್ತಿದ್ದಾರೆ. ಇದರಿಂದ ರೈತರು, ಮಹಿಳೆಯರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ರಾಯಚೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಆದ್ರೆ ಬೀಜ, ರಸಗೊಬ್ಬರ ಸೇರಿದಂತೆ ಇತರೆ ವಸ್ತುಗಳನ್ನ ಕೊಳ್ಳಲು ಹಣವಿಲ್ಲದೆ ಪರದಾಡುವಂತಾಗಿದೆ. ಮಾಸದೊಡ್ಡಿ, ಜುಲಮಗೇರಿ, ಗಧಾರ, ಜಾಲಿಬೆಂಚಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಗ್ರಾಮದ ಜನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಯರಗೇರಾ ಶಾಖೆಯನ್ನ ಅವಲಂಬಿಸಿದ್ದಾರೆ. ಒಟ್ಟು ಆರು ಗ್ರಾಮ ಪಂಚಾಯ್ತಿಗಳ ಎನ್.ಆರ್.ಇ.ಜಿ. ಹೌಸಿಂಗ್ ಖಾತೆಗಳು ಇದೇ ಬ್ಯಾಂಕ್‍ನಲ್ಲಿ ಇರುವುದರಿಂದ ಪ್ರತಿನಿತ್ಯ ಕ್ಯೂ ದೊಡ್ಡದಾಗಿ ಇರುತ್ತೆ. ಬ್ಯಾಂಕ್ ಅಧಿಕಾರಿಗಳು ಮಾತ್ರ ಪ್ರತಿದಿನ 10 ರಿಂದ 15 ಲಕ್ಷ ತರುತ್ತಿದ್ದೇವೆ. ಜನ ಹೆಚ್ಚಾಗಿ ಬರುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಒಟ್ನಲ್ಲಿ ಇಲ್ಲಿನ 30ಕ್ಕೂ ಹೆಚ್ಚು ಗ್ರಾಮಗಳ ಜನ ತಮ್ಮ ದುಡ್ಡನ್ನ ತಾವು ಪಡೆಯಲು ನಿತ್ಯ ಪರದಾಡುತ್ತಿದ್ದಾರೆ. ಒಂದೇ ಬ್ಯಾಂಕ್ ಅವಲಂಬಿಸಿರುವುದು ಸಹ ಈ ಸಮಸ್ಯೆಗೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *