ಬೆಂಗಳೂರು ಮಾತ್ರವಲ್ಲ ಮಂಗಳೂರು, ಮೈಸೂರು, ಹುಬ್ಬಳ್ಳಿಗೆ ಐಟಿ ಕೊಡುಗೆ ನೀಡಿದ್ದು ಎಸ್‌ಎಂಕೆ – ಪ್ರತಾಪ್ ಸಿಂಹ

Public TV
2 Min Read

– ಎಸ್‌ಎಂ ಕೃಷ್ಣ ನನ್ನ ಫೇವರೆಟ್ ಸಿಎಂ

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದಲ್ಲಿ ವಿದೇಶಾಂಗ ಸಚಿವರು, ಮಹಾರಾಷ್ಟç ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಮುತ್ಸದ್ಧಿ ಎಸ್.ಎಂ.ಕೃಷ್ಣ (SM Krishna) ಇಂದು ಬೆಳಿಗ್ಗೆ ನಮ್ಮನ್ನಗಲಿದ್ದಾರೆ. ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ನೀಡಲಿ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಸಂತಾಪ ಸೂಚಿಸಿದರು.

ಎಸ್‌ಎಂ ಕೃಷ್ಣ ಅವರು ಕರ್ನಾಟಕಕ್ಕೆ ಐಟಿ-ಬಿಟಿ ದೃಷ್ಟಿಯಲ್ಲಿ ಒಂದು ದಿಕ್ಕು ದೆಸೆಯನ್ನು ತೋರಿದವರು, ಹೀಗಾಗಿ ನಮ್ಮ ರಾಜ್ಯ ಯಾವತ್ತಿಗೂ ಕೂಡ ಅವರಿಗೆ ಚಿರಋಣಿಯಾಗಿರಬೇಕು. ಭೂದಾಖಲೆಗಳ ಡಿಜಿಟಲೀಕರಣದ ಮೂಲ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಲಿಕ್ಕರ್ ಲಾಬಿ ಮಾಫಿಯಾ ತಡೆಗೆ ಶ್ರಮಪಟ್ಟವರು. ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೆ ತಂದವರು. ಎಸ್‌ಎಂಕೆ ಅವರಿಂದಲೇ ಮೈಸೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಇನ್‌ಫೋಸಿಸ್ ಟ್ರೈನಿಂಗ್ ಸೆಂಟರ್ ಪ್ರಾರಂಭವಾಯಿತು. ಜೊತೆಗೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಎಂದು ತಿಳಿಸಿದರು.ಇದನ್ನೂ ಓದಿ: ನಾಳೆ ಸರ್ಕಾರಿ ರಜೆ ಘೋಷಣೆ – 3 ದಿನ ಶೋಕಾಚರಣೆ

ದೇಶದ ಅತ್ಯಂತ ಸಂಪದ್ಭರಿತ ಮತ್ತು ಜಿಡಿಪಿ ಬೆಳವಣಿಗೆ ವಿಚಾರದಲ್ಲಿ ಪ್ರತಿ ವರ್ಷ 2 ಅಥವಾ 3ನೇ ಸ್ಥಾನದಲ್ಲಿ ಬರುತ್ತದೆ. ಜೊತೆಗೆ ರಾಜ್ಯದ ಆದಾಯದ ಪೈಕಿ ಶೇ.56-57ರಷ್ಟು ಬೆಂಗಳೂರಿನಿಂದ ಬರುತ್ತದೆ. ಕರ್ನಾಟಕದ ಪಾಲಿಗೆ ಬೆಂಗಳೂರು ಕಾಮಧೇನು ಇದ್ದಂತೆ. ಇದಕ್ಕೆ ಎಸ್‌ಎಂಕೆ ಅವರ ಕೊಡುಗೆ ಸಾಕಷ್ಟಿದೆ. ಒಬ್ಬ ಒಳ್ಳೆಯ ಮುಖ್ಯಮಂತ್ರಿಯಾಗಿ, ಒಳ್ಳೆಯ ಆಡಳಿತವನ್ನು ನೀಡಿದ್ದರು. ಎಸ್.ಎಂ ಕೃಷ್ಣ ಅವರು ನನ್ನ ಒಬ್ಬ ಇಷ್ಟದ ಸಿಎಂ ಆಗಿದ್ದರು ಎಂದು ಸ್ಮರಿಸಿದರು.

ಯಾವ ಊರಿಗೆ ಹೋದರೂ ಅವರ ಕೊಡುಗೆ ಇದೆ. ಅಮೂಲಾಗ್ರ ಬದಲಾವಣೆಗಾಗಿ ಹೊರಟವರು. ಬೆಂಗಳೂರಿನಲ್ಲಿ 6,500 ಐಟಿ 92 ಬಿಟಿ ಕಂಪನಿಗಳ ಸ್ಥಾಪನೆಗೆ ಮೂಲ ಕಾರಣೀಕರ್ತರು. ಹೀಗಾಗಿ ಪಕ್ಷಾತೀತವಾಗಿ ಎಲ್ಲರೂ ಗೌರವಿಸುವಂತಹ ವ್ಯಕ್ತಿತ್ವ ಅವರದ್ದು. ಸಭ್ಯತೆಯ ಗೆರೆಯನ್ನು ದಾಟದೇ ಬೆಳೆದು, ಅಳೆದು ತೂಗಿ ಮಾತನಾಡಿದವರು. ರಾಜ್ಯಕ್ಕೆ ಮಾದರಿಯಾಗಿದ್ದ ಸಿಎಂ ಆಗಿ ಅಭಿವೃದ್ಧಿಯೇ ಮೂಲ ಗುರಿಯಾಗಿ ಮುನ್ನಡೆದವರು ಎಂದು ಹೇಳಿದರು.

ಎಸ್‌ಎಂ ಕೃಷ್ಣ ಅವರ ಅಪಾರ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ನೀಡಲಿ. ತಾಯಿ ಚಾಮುಂಡೇಶ್ವರಿ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪಾರ್ಥಿಸಿದರು.ಇದನ್ನೂ ಓದಿ: ಎಸ್‍ಎಂಕೆ ಬೆಂಗ್ಳೂರನ್ನು ಸಿಂಗಾಪುರ ಮಾಡುವ ಕನಸು ಕಂಡಿದ್ದರು: ಆರಗ ಜ್ಞಾನೇಂದ್ರ

Share This Article