ಸಂಪುಟದಲ್ಲಿ ನನಗೆ ಜವಾಬ್ದಾರಿ ನೀಡಬೇಡಿ – ಪ್ರಧಾನಿಗೆ ಜೇಟ್ಲಿ ಮನವಿ

Public TV
1 Min Read

ನವದೆಹಲಿ: ದೀರ್ಘ ಅವಧಿಯಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕೇಂದ್ರ ಆರ್ಥಿಕ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಈ ಬಾರಿಯ ಸಂಪುಟದಲ್ಲಿ ತಮಗೇ ಯಾವುದೇ ಜವಾಬ್ದಾರಿ ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ನಿರ್ಧಾರದ ಕುರಿತು ಸ್ಪಷ್ಟಪಡಿಸಿ ಪತ್ರ ಬರೆದಿರುವ ಅರುಣ್ ಜೇಟ್ಲಿ ಅವರು, ಕೇಂದ್ರದಲ್ಲಿ ಪ್ರತಿ ಬಾರಿ ಎನ್‍ಡಿಎ ಸರ್ಕಾರದಲ್ಲಿ ನಾನು ಸಚಿವನಾಗಿದ್ದು, ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ನಾಯಕರಿಗೆ ಧನ್ಯವಾದಗಳು. ಆದರೆ ಈ ಬಾರಿ ಅನಾರೋಗ್ಯದ ಕಾರಣದಿಂದಾಗಿ ವಿಶ್ರಾಂತಿ ಅಗತ್ಯವಿದ್ದು, ಸಂಪುಟ ಸೇರಲು ಅಸಹಾಯಕನಾಗಿದ್ದೇನೆ ಎಂದಿದ್ದಾರೆ.

ನಿಮ್ಮ ಸರ್ಕಾರದ ಅವಧಿಯಲ್ಲಿ 5 ವರ್ಷ ಸಚಿವನಾಗಿ ಕಾರ್ಯನಿರ್ವಹಿಸಿದ್ದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿಂದೆಯೂ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಸಚಿವನಾಗಿದ್ದೆ. ಸದ್ಯ ಇದಕ್ಕಿಂತ ಹೆಚ್ಚು ನಿರೀಕ್ಷೆ ಮಾಡುತ್ತಿಲ್ಲ. ಕಳೆದ 9 ತಿಂಗಳಿನಿಂದ ಆನಾರೋಗ್ಯದ ಸಮಸ್ಯೆ ಎದುರಿಸಿದ್ದೇನೆ. ಚುನಾವಣಾ ಪ್ರಚಾರ ಮುಗಿದ ಬಳಿಕ ನಾನು ಮೌಖಿಕವಾಗಿ ತನ್ನ ನಿರ್ಧಾರವನ್ನು ನಿಮಗೆ ತಿಳಿಸಿದ್ದೆ. ಅನಾರೋಗ್ಯದ ಸಮಸ್ಯೆಯಿಂದ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ಕಷ್ಟ. ಆದ್ದರಿಂದ ಅಧಿಕೃತವಾಗಿ ಈ ಬಗ್ಗೆ ಸ್ಪಷ್ಟಪಡಿಸುತ್ತಿದ್ದೇನೆ. ಈ ಬಾರಿಯ ಸಂಪುಟ ಸೇರದಿರಲು ನಿರ್ಧರಿಸಿದ್ದು, ನನ್ನ ಸಹಕಾರ ಸದಾ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಎನ್‍ಡಿಎ ಸರ್ಕಾರದ ಅವಧಿಯ ಅಂತಿಮ ಬಜೆಟ್ ವೇಳೆಯೂ ಅರುಣ್ ಜೇಟ್ಲಿ ಅವರು ಆರೋಗ್ಯ ಸಮಸ್ಯೆ ಎದುರಿಸಿದ್ದ ಪರಿಣಾಮ ರೈಲ್ವೇ ಸಚಿವರಾಗಿದ್ದ ಪಿಯೂಷ್ ಗೋಯೆಲ್ ಅವರು ಬಜೆಟ್ ಮಂಡನೆ ಮಾಡಿದ್ದರು. ಇದಕ್ಕೂ ಮುನ್ನ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೂರು ತಿಂಗಳ ಕಾಲ ಸುದೀರ್ಘ ರಜೆ ಪಡೆದಿದ್ದ ಅರುಣ್ ಜೇಟ್ಲಿ ಅವರು ಆ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಅವಧಿಯಲ್ಲೂ ಸಚಿವ ಪಿಯೂಷ್ ಗೋಯಲ್ ಅವರು ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *