ಅನ್ನರಾಮಯ್ಯ ಅಲ್ಲ ಕನ್ನರಾಮಯ್ಯ, ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಕನ್ನ: ಆರ್.ಅಶೋಕ್‌ ಟೀಕೆ

5 Min Read

– ಆರ್ಥಿಕ ಶಿಸ್ತು ಮೀರಿ ಮಾಡಿದ ಸಾಲ, ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ?

ಬೆಂಗಳೂರು: ಕೇಂದ್ರ ಸರ್ಕಾರ ನೀಡುವ ಅನ್ನಭಾಗ್ಯದ ಅಕ್ಕಿಯನ್ನು ಕದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕನ್ನರಾಮಯ್ಯ ಆಗಿದ್ದಾರೆ. ಕೇಂದ್ರದ ಯೋಜನೆಯನ್ನು ತನ್ನದೇ ಯೋಜನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೆ ಸುಳ್ಳು ಹೇಳುತ್ತಾ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ದೌರ್ಭಾಗ್ಯಕರ. ಅನ್ನರಾಮಯ್ಯ ಎಂದು ಜನರು ಹೇಳಬೇಕೆ ಹೊರತು, ಇವರೇ ಹೇಳಿಕೊಳ್ಳಬಾರದು. ಈ ಕಾರಣದಿಂದ ಅವರಿಗೆ ‘ಸುಳ್ಳುರಾಮಯ್ಯ’ ಎಂಬ ಬಿರುದು ಕೊಡಬೇಕಾದ ಪರಿಸ್ಥಿತಿ ಬಂದಿದೆ. ಅನ್ನಭಾಗ್ಯ ಯೋಜನೆ ವಿಚಾರದಲ್ಲಿಯೂ ಅವರು ಸುಳ್ಳಿನ ಪುಂಗಿ ಊದುತ್ತಿದ್ದಾರೆ. ‘ನಾನು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ’ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಚುನಾವಣೆಯ ಸಮಯದಲ್ಲಿ ಘೋಷಿಸಿದ್ದ ಇಂದಿರಾ ಗಾಂಧಿ ಕಿಟ್ – 5 ಕೆಜಿ ಬೇಳೆ, ಎಣ್ಣೆ ಸೇರಿದಂತೆ ಹಲವು ಸಾಮಗ್ರಿಗಳು ಇಂದಿಗೂ ಜನರಿಗೆ ಸಿಗದೆ ಮರೀಚಿಕೆಯಾಗಿದೆ. ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ರಾಜ್ಯ ಸರ್ಕಾರ ತನ್ನ ಚೀಲ ಹಾಕಿ ‘ಇದು ನನ್ನ ಯೋಜನೆ’ ಎಂದು ಬೋರ್ಡ್ ಹಾಕುವುದರಿಂದ ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದರು.

ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಗ್ಯಾರಂಟಿ ಯೋಜನೆಗಳಿಗೆ ವಿರೋಧಿ ಎಂದು ಹೇಳುವುದು ಸಂಪೂರ್ಣ ತಪ್ಪು. ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಸುಮಾರು 5000 ಕೋಟಿ ರೂ. ಯಾಕೆ ನೀಡಲಾಗಿಲ್ಲ ಎಂಬ ಪ್ರಶ್ನೆಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಬೇಕು. ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದಾಗ ಸ್ಪಷ್ಟ ಉತ್ತರ ನೀಡದೇ ಓಡಿ ಹೋಗಿರುವುದು ಎಲ್ಲರಿಗೂ ಗೊತ್ತಿದೆ. ಅನ್ನಭಾಗ್ಯ ಯೋಜನೆಯ 700 ಕೋಟಿ ರೂ. ಹಣವೂ ಇನ್ನೂ ಬಿಡುಗಡೆಯಾಗಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ಅಡ್ಡಿ ಮಾಡುತ್ತಿದೆ ಎಂದು ಹೇಳುವುದು ತಪ್ಪು. ವಾಸ್ತವವಾಗಿ ಜನತೆಗೆ ಮೋಸ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ. ಒಟ್ಟು 5,700 ಕೋಟಿ ರೂ. ಹಣ ಎಲ್ಲಿ ಹೋಯಿತು? ಯಾರು ತಿಂದರು? ಎಂಬುದಕ್ಕೆ ರಾಜ್ಯದ ಜನತೆಗೆ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಪ್ರಕರಣ – ಜಿಮ್ ಟ್ರೈನರ್ ವಿರುದ್ಧ ಕ್ರಮಕ್ಕೆ ಸೂಚಿಸಿದ ಪರಮೇಶ್ವರ್‌

ಹಿಂದುಳಿದ ವರ್ಗಗಳ ವಿಚಾರದಲ್ಲಿಯೂ ಕಾಂಗ್ರೆಸ್ ಸರ್ಕಾರ ದೊಡ್ಡ ಮಟ್ಟದ ಮೋಸ ಮಾಡಿದೆ. ಹಿಂದುಳಿದ ವರ್ಗಗಳ ಎಂಟು ನಿಗಮಗಳಲ್ಲಿ ಅಧ್ಯಕ್ಷರ ನೇಮಕವಾಗಬೇಕಿದ್ದರೂ ಇನ್ನೂ ಆಗಿಲ್ಲ. ಅನುದಾನದಲ್ಲಿಯೂ ಭಾರೀ ಕಡಿತವಾಗಿದೆ. ಅಂಬೇಡ್ಕರ್ ನಿಗಮಕ್ಕೆ ಬಿಜೆಪಿ ಸರ್ಕಾರ 60 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ 20 ಕೋಟಿ ರೂ. ನೀಡಿದೆ.

ತಾಂಡ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ ಸರ್ಕಾರ 110 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ 50 ಕೋಟಿ ರೂ. ನೀಡಿದೆ. ದೇವರಾಜ ಅರಸು ಹಿಂದುಳಿದ ವರ್ಗ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ ಸರ್ಕಾರ 190 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ 90 ಕೋಟಿ ರೂ. ನೀಡಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ ಸರ್ಕಾರ 106 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ 55.5 ಕೋಟಿ ರೂ. ನೀಡಿದೆ. ಒಟ್ಟು ಬಿಜೆಪಿ ಸರ್ಕಾರದ ಅವಧಿಯಲ್ಲಿ 1,699 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ ಕೇವಲ 1,055 ಕೋಟಿ ರೂ. ಮಾತ್ರ ನೀಡಿದೆ. ಸುಮಾರು 600 ಕೋಟಿ ರೂ. ಕಡಿತವಾಗಿದೆ ಎಂದು ದೂರಿದರು. ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕೆ ಸಮಸ್ಯೆಯಾಗಿಲ್ಲ: ಕಾಗೇರಿ

ವಾಲ್ಮೀಕಿ ನಿಗಮದಲ್ಲೂ 165 ಕೋಟಿ ರೂ. ಲೂಟಿ ಪ್ರಕರಣ ಇಡೀ ದೇಶಕ್ಕೆ ಗೊತ್ತಾಗಿದೆ. ಇನ್ನೊಂದೆಡೆ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದರೂ, 56,000 ಉದ್ಯೋಗ ನೀಡುವ ಭರವಸೆ ಇನ್ನೂ ಗಾಳಿಯಲ್ಲೇ ಇದೆ. ಕ್ಯಾಬಿನೆಟ್ ತೀರ್ಮಾನವಾದರೂ ಬಜೆಟ್‌ನಲ್ಲಿ ವೇತನಕ್ಕೆ ಅಗತ್ಯವಾದ 500 ಕೋಟಿ ರೂ. ನೀಡದೆ ಉದ್ಯೋಗ ಹೇಗೆ ನೀಡುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದ ನಾಯಕರಿಗೆ ಮಾತ್ರ ಲಾಭವಾಗುವಂತೆ ಕ್ಯಾಬಿನೆಟ್ ಹುದ್ದೆಗಳ ಮಟ್ಟದ ಅಧಿಕಾರಿಗಳ ನೇಮಕಾತಿ, ಸಾವಿರಾರು ಸದಸ್ಯರ ನೇಮಕ ಮಾಡಿದೆ. ಇದಕ್ಕೆ 150 ಕೋಟಿ ರೂ. ಖರ್ಚು ಆಗುತ್ತದೆ. ಐದು ವರ್ಷಕ್ಕೆ 600–700 ಕೋಟಿ ರೂ. ತೆರಿಗೆದಾರರ ಹಣ ವ್ಯಯವಾಗುತ್ತದೆ. ಬಡವರ ಮಕ್ಕಳಿಗೆ ಉದ್ಯೋಗಕ್ಕೆ ಹಣ ಇಲ್ಲ, ಅನಾಥ ಮಕ್ಕಳಿಗೆ ನೆರವು ಇಲ್ಲ, ಭಿಕ್ಷುಕರ ಕಾಲೋನಿಗೆ ಹಣ ಇಲ್ಲ. ಆದರೆ ಕಾಂಗ್ರೆಸ್ ನಾಯಕರ ‘ಗಂಜಿ ಕೇಂದ್ರ’ಗಳಿಗೆ ಮಾತ್ರ ತೆರಿಗೆದಾರರ ಹಣ ಸಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇಷ್ಟೆಲ್ಲಾ ಮಾಡಿ ಕಾಂಗ್ರೆಸ್ ನಾಯಕರು ಯಾವ ಮುಖದಿಂದ ಜನರ ಮುಂದೆ ಹೋಗಿ ಮತ ಕೇಳುತ್ತಾರೆ ಎಂಬುದು ಜನರ ಪ್ರಶ್ನೆ ಎಂದರು.

ಸಾಲದಲ್ಲಿ ಸುಳ್ಳು
ಬಿಜೆಪಿ ಸರ್ಕಾರ ಹೋಗುವಾಗ 21,000 ಕೋಟಿ ಸಾಲ ಇತ್ತು. ಇದು ಮುಂದುವರಿದ ಭಾಗದಂತೆ ಇರುತ್ತದೆ. ಪ್ರತಿ ಸರ್ಕಾರ ಬಂದಾಗಲೂ ಸಾಲ ಮುಂದುವರಿಯುತ್ತದೆ. ಜಿಎಸ್ಟಿ, ಅಬಕಾರಿ ಮೊದಲಾದ ವಿಭಾಗಗಳಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಆದ್ದರಿಂದ ಸರ್ಕಾರದ ಬಳಿ ಹಣವಿಲ್ಲ. ದಲಿತರ ಹಣದ ದುರ್ಬಳಕೆ, ಕೇರಳಕ್ಕೆ ಅನುದಾನ ಸೇರಿದಂತೆ ಅನೇಕ ಪ್ರಶ್ನೆಗಳನ್ನು ನಾನು ಕೇಳಿದ್ದೆ. ಆದರೆ, ಅದಕ್ಕೆ ಸಿದ್ದರಾಮಯ್ಯ ಉತ್ತರ ನೀಡಿಲ್ಲ ಎಂದರು.

ಆರ್ಥಿಕ ಶಿಸ್ತು 3% ಒಳಗೆ ಇರಬೇಕಾದರೆ ಸರ್ಕಾರ 2.94% ಎಂದು ತೋರಿಸಿದೆ. ಆದರೆ, ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ರೂ., ಅನ್ನಭಾಗ್ಯ ಯೋಜನೆಯ 700 ಕೋಟಿ ರೂ. ಮತ್ತು ಇತರ ಬಾಕಿ ಮೊತ್ತಗಳನ್ನು ಸೇರಿಸಿದರೆ ಅದು 3% ಮೀರಲಿದೆ ಎಂಬುದು ಸ್ಪಷ್ಟ. ಕಳೆದ ಮೂರು ವರ್ಷಗಳಲ್ಲಿ ಗುತ್ತಿಗೆದಾರರಿಗೆ ನೀಡಬೇಕಾದ ಸುಮಾರು 75,000 ಕೋಟಿ ರೂ. ಬಾಕಿಯೂ ಇದೆ. ಇದನ್ನು ಸೇರಿಸಿದರೆ ಆರ್ಥಿಕ ಶಿಸ್ತು 4% ದಾಟುವ ಸಾಧ್ಯತೆ ಇದೆ. ಆದರೆ, ಈ ನಿಜಾಂಶಗಳನ್ನು ಸರ್ಕಾರ ಬಜೆಟ್‌ನಲ್ಲಿ ಸ್ಪಷ್ಟವಾಗಿ ತೋರಿಸಿಲ್ಲ. ಇದಲ್ಲದೆ GST, ಅಬಕಾರಿ ಮತ್ತು ಸಾರಿಗೆ ಇಲಾಖೆಗಳ ಆದಾಯದಲ್ಲಿಯೂ ಸುಮಾರು 28,000 ಕೋಟಿ ರೂ. ನೆಗೆಟಿವ್ ಸ್ಥಿತಿ ಇದೆ ಎಂದು ತಿಳಿಸಿದರು.

ದಲಿತರ ಹಣವನ್ನು ದುರುಪಯೋಗ ಮಾಡಿರುವ ಆರೋಪಗಳ ಬಗ್ಗೆ ಕೂಡ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ದಲಿತ ಕಲ್ಯಾಣಕ್ಕಾಗಿ ಮೀಸಲಾದ ಸಾವಿರಾರು ಕೋಟಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಸದನದಲ್ಲಿಯೇ ಉತ್ತರ ನೀಡಿಲ್ಲ. ಇಷ್ಟೆಲ್ಲಾ ವಿಚಾರಗಳ ನಡುವೆ ಕಾಂಗ್ರೆಸ್ ಸರ್ಕಾರ ಜನರ ಮುಂದೆ ಯಾವ ಮುಖದಿಂದ ಮತ ಕೇಳಲು ಬರುತ್ತದೆ ಎಂಬುದೇ ಇಂದು ರಾಜ್ಯದ ಜನರ ಪ್ರಶ್ನೆಯಾಗಿದೆ ವಾಗ್ದಾಳಿ ನಡೆಸಿದರು.

ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ರೈಲ್ವೆಗೆ 700 ಕೋಟಿ ನೀಡಿದ್ದರೆ, ಮೋದಿ ಸರ್ಕಾರ 7000 ಕೋಟಿ ನೀಡಿದೆ. ಹೆದ್ದಾರಿ ಅಭಿವೃದ್ಧಿಗೆ 30000 ಕೋಟಿ ನೀಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 62 ಲಕ್ಷ ರೈತರಿಗೆ ಹಣ ನೀಡಲಾಗಿದೆ. ನಕಲಿ ಗಾಂಧಿಗಳ ಜಾಲದಲ್ಲಿ ಸಿಲುಕಿದ ಸಿದ್ದರಾಮಯ್ಯ ಮೋದಿಗೆ ಬೈಯುತ್ತಿದ್ದಾರೆ ಎಂದರು.

ದಾವಣಗೆರೆಗೆ ಕೊಡುಗೆ ಇಲ್ಲ
ಶಾಮನೂರು ಶಿವಶಂಕರಪ್ಪ ಶಾಸಕರಾಗಿದ್ದರೂ ಮೆಡಿಕಲ್ ಕಾಲೇಜು ಬರಲಿಲ್ಲ‌. ಜಿಲ್ಲಾಧಿಕಾರಿ ಕಚೇರಿ, ಆರ್‌ಟಿಒ ಕಚೇರಿ, ಸ್ಮಾರ್ಟ್ ಸಿಟಿ, ಎಲ್ಲವೂ ಬಿಜೆಪಿ ಅವಧಿಯಲ್ಲೇ ಬಂದಿದೆ. ಮೆಡಿಕಲ್ ಕಾಲೇಜು ತಪ್ಪಿ ಹೋಗಲು ಇದೇ ಕಾಂಗ್ರೆಸ್ ಕಾರಣ. ಆದ್ದರಿಂದ ಜನರು ಬದಲಾವಣೆ ತರಲು ಯತ್ನಿಸಬೇಕು. ಒಂದೇ ಕುಟುಂಬದಿಂದ ಪ್ರಗತಿ ಅಸಾಧ್ಯ ಎಂದರು.

Share This Article