ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

Public TV
2 Min Read

– 130 ದೋಣಿಗಳನ್ನು ಹೊಂದಿದ್ದ ಕುಟಂಬವೊಂದು 30 ಕೋಟಿ ಲಾಭ ಗಳಿಸಿದೆ ಎಂದ ಸಿಎಂ

ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ (Maha Kumbh Mela) 130 ದೋಣಿಗಳನ್ನು ಹೊಂದಿರುವ ಕುಟುಂಬ 30 ಕೋಟಿ ರೂ. ಲಾಭ ಗಳಿಸಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ತಿಳಿಸಿದ್ದಾರೆ. ಆ ಮೂಲಕ ಕುಂಭಮೇಳವನ್ನು ಟೀಕಿಸಿದ್ದ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸಭೆಯಲ್ಲಿ ಅಂಗೀಕರಿಸಲಾದ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳಿಗೆ ಸಿಎಂ ಚಾಟಿ ಬೀಸಿದ್ದಾರೆ. ಜನರು ನಿಮ್ಮ ಮಾತು ಕೇಳುತ್ತಿಲ್ಲ. ನಿಮ್ಮ ಕೌಂಟ್‌ಡೌನ್‌ ಶುರುವಾಗಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

ಪ್ರಯಾಗ್‌ರಾಜ್‌ನ ದೋಣಿ ಚಾಲಕರನ್ನು ಶೋಷಿಸಲಾಗಿದೆ ಎಂಬ ಸಮಾಜವಾದಿ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾನು ದೋಣಿ ಚಾಲಕನ ಕುಟುಂಬದ ಯಶಸ್ಸಿನ ಕಥೆಯನ್ನು ಹೇಳುತ್ತಿದ್ದೇನೆ. ಅವರ ಬಳಿ 130 ದೋಣಿಗಳಿವೆ. 45 ದಿನಗಳಲ್ಲಿ (ಮಹಾ ಕುಂಭ) ಅವರು 30 ಕೋಟಿ ರೂ. ಲಾಭ ಗಳಿಸಿದ್ದಾರೆ. ಇದರರ್ಥ ಪ್ರತಿ ದೋಣಿಯಿಂದ 23 ಲಕ್ಷ ರೂ. ಗಳಿಸಿದ್ದಾರೆ. ಪ್ರತಿದಿನ ಅವರು ಒಂದು ದೋಣಿಯಿಂದ 50,000-52,000 ರೂ. ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಅಥವಾ ಕೊಲೆಯ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಅರವತ್ತಾರು ಕೋಟಿ ಜನರು ಆಗಮಿಸಿ ಭಾಗವಹಿಸಿದರು. ಕುಂಭಮೇಳದಲ್ಲಿ ಪಾಲ್ಗೊಂಡು ಸಂತೋಷದಿಂದ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದ ವ್ಯವಸ್ಥೆ ಬಗ್ಗೆ ಡಿಕೆಶಿ ಶ್ಲಾಘನೆ – ಯುಪಿ ವಿಧಾನಸಭೆಯಲ್ಲಿ ಯೋಗಿ ಮಾತು

ಮಹಾ ಕುಂಭಮೇಳಕ್ಕೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು. ಇದರಿಂದ ದಾಖಲೆಯ 3 ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮವು ಹೋಟೆಲ್ ಉದ್ಯಮದಲ್ಲಿ 40,000 ಕೋಟಿ ರೂ., ಆಹಾರ ಮತ್ತು ದಿನನಿತ್ಯದ ಅಗತ್ಯ ವಸ್ತುಗಳಲ್ಲಿ 33,000 ಕೋಟಿ ರೂ., ಸಾರಿಗೆಯಲ್ಲಿ 1.5 ಲಕ್ಷ ಕೋಟಿ ರೂ., ಧಾರ್ಮಿಕ ಕೊಡುಗೆಗಳಲ್ಲಿ 20,000 ಕೋಟಿ ರೂ., ದೇಣಿಗೆಗಳಲ್ಲಿ 660 ಕೋಟಿ ರೂ., ಟೋಲ್ ತೆರಿಗೆಯಲ್ಲಿ 300 ಕೋಟಿ ರೂ., ಇತರ ಆದಾಯದಲ್ಲಿ 66,000 ಕೋಟಿ ರೂ. ಗಳಿಸಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್ ವಂತಾರದಲ್ಲಿ ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ ಉದ್ಘಾಟನೆ

Share This Article