ಜಸ್ಟ್‌ 5 ಸಾವಿರಕ್ಕೆ ಸ್ನೇಹಿತರಿಂದಲೇ ಉತ್ತರ ಕರ್ನಾಟಕದ ಯುವ ಗಾಯಕ ಮಾರುತಿ ಲಠ್ಠೆ ಬರ್ಬರ ಕೊಲೆ

Public TV
2 Min Read

– ಕೊಲೆಗೈದು ಅಪಘಾತ ಎಂದು ಬಿಂಬಿಸಿದ್ದ ಹಂತಕರು
– ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ

ಬೆಳಗಾವಿ: 5 ಸಾವಿರ ರೂ. ಹಣವನ್ನು ವಾಪಸ್‌ ನೀಡದ್ದಕ್ಕೆ ಉತ್ತರ ಕರ್ನಾಟಕದ ಯುವ ಗಾಯಕ ಮಾರುತಿ ಲಠ್ಠೆ (25) ಅವರನ್ನು ಸ್ನೇಹಿತರೇ ಬರ್ಬರವಾಗಿ ಕೊಲೆ (Murder) ಮಾಡಿದ ಘಟನೆ ರಾಯಬಾಗ (Raibaga) ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಸಂಜೆ 7 ಗಂಟೆಗೆ ಸ್ನೇಹಿತರಾದ ಮಾರುತಿ ಘಂಟಿ ಹಾಗೂ ಮಹಾಂತೇಶ್ ಜೊತೆ ಮಾರುತಿ ಲಠ್ಠೆ (Maruti Latte) ಪಕ್ಕದ ದೇವೆಣಕಟ್ಟೆ ಗ್ರಾಮಕ್ಕೆ ತೆರಳಿದ್ದರು. ರಾತ್ರಿ ವಾಪಸ್ ಬರುವಾಗ ಗ್ರಾಮದಲ್ಲಿ ಗಲಾಟೆ ನಡೆದಿದೆ. ಹಣದ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಮಾರುತಿ ತಲೆಗೆ ರಾಡ್‌ನಿಂದ ಹೊಡೆದು ಸ್ನೇಹಿತರು ಪರಾರಿಯಾಗಿದ್ದಾರೆ.  ಇದನ್ನೂ ಓದಿ: ಅಂಧರಿಗೆ ಸರ್ಕಾರದಿಂದ ಗುಡ್‌ನ್ಯೂಸ್ ಒಂದೇ ಪಾಸ್‌ನಲ್ಲಿ 4 ನಿಗಮಗಳ ಬಸ್‌ನಲ್ಲಿ ಒಡಾಟಕ್ಕೆ ಅವಕಾಶ

ಕೊಲೆ ಮಾಡಿದ್ದು ಯಾಕೆ?
ಮಾರುತಿ ಹಾಡು ಹಾಡುವುದರ ಜೊತೆಗೆ ಕೃಷಿ ಕೆಲಸವನ್ನು ಮಾಡುತ್ತಿದ್ದರು. ಕಬ್ಬು ಕಟಾವು ಮಾಡಲು ಸ್ನೇಹಿತರ ಬಳಿ 50 ಸಾವಿರ ರೂ. ಸಾಲ ಮಾಡಿದ್ದರು. ಸಾಲದ ಹಣದಲ್ಲಿ 45 ಸಾವಿರ ರೂ. ಮರಳಿಸಿದ್ದರೆ 5 ಸಾವಿರ ರೂ. ಹಣ ಬಾಕಿ ಇಟ್ಟುಕೊಂಡಿದ್ದರು.

ರಾತ್ರಿ ಸ್ನೇಹಿತರು ಉಳಿದ 5 ಸಾವಿರ ರೂ. ಹಣವನ್ನು ವಾಪಸ್‌ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಮಾರುತಿ, ಮುಂದಿನ ದಿನಗಳಲ್ಲಿ ಪಾವತಿಸುತ್ತೇನೆ. ಈಗ ನನ್ನ ಬಳಿ ಇಲ್ಲ ಎಂದು ಹೇಳಿದ್ದಾರೆ. ಬಾಕಿ ಹಣದ ವಿಚಾರಕ್ಕೆ ಮಾರುತಿ ಲಠ್ಠೆ ಹಾಗೂ ಕೊಲೆಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ವಿಕೋಪಕ್ಕೆ ತಿರುಗಿದೆ.  ಗಳ ನಡೆದ ಬಳಿಕ ಮಾರುತಿ ಲಠ್ಠೆ ಬೈಕಿನಲ್ಲಿ ಊರಿಗೆ ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಬೈಕನ್ನು ಕೊಲೆಗಾರರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್‌, ಸದಾನಂದನ್ ಮಾಸ್ಟರ್ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

 

ಬೂದಿಹಾಳ ಗ್ರಾಮದ ಮನೆಯಿಂದ ನೂರು ಮೀಟರ್ ಅಂತರದಲ್ಲೇ ಹಂತಕರು ಬೈಕಿಗೆ ಡಿಕ್ಕಿ ಹೊಡೆದು ಮಾರುತಿ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಮಾರುತಿ ನನ್ನ ಮೇಲೆ ಹಲ್ಲೆಯಾಗುತ್ತಿದೆ. ಬೇಗ ಹುಡುಗರನ್ನು ಕರೆದುಕೊಂಡು ಬಾ ಎಂದು ತನ್ನ ಇನ್ನೊಬ್ಬ ಗೆಳೆಯನಿಗೆ ಕರೆ ಮಾಡಿ ತಿಳಿಸಿದ್ದಾರೆ.

ಫೋನಿನಲ್ಲೇ ಮಾತನಾಡುತ್ತಿದ್ದಾಗಲೇ ಮಾರುತಿ ತಲೆಗೆ ರಾಡ್‌ನಿಂದ ಹೊಡೆದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಾರುತಿಯ ದೇಹದ ಮೇಲೆ ಕಾರು ಹತ್ತಿಸಿ ಬಳಿಕ ಮೃತದೇಹವನ್ನು ರಸ್ತೆಯ ಬದಿಗೆ ಎಸೆದು ಹಿಟ್‌ ಆಂಡ್‌ ರನ್‌ ಕೇಸ್‌ ಎಂದು ಬಂಬಿಸಲು ಪ್ರಯತ್ನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ರಾಯಬಾಗ ಪೊಲೀಸರು ತನಿಖೆ ಆರಂಭಿಸಿದ್ದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಾ ಹುಡುಗಿ ಪಂಚಮಿಗೆ, ಡ್ರೈವರ್ ಮಾವ ಅಂತಿದ್ದಿ ಡೈಲಿ ಜೀವ ತಿಂತಿದ್ದಿ ಹೀಗೆ ಹತ್ತಾರು ವಿಡಿಯೋ ಮಾಡಿ ತನ್ನದೇ ಶೈಲಿಯಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಮಾರುತಿ ಲಠ್ಠೆ ಉತ್ತರ ಕರ್ನಾಟಕದ ಯುವಕರ ಮನ ಗೆದ್ದಿದ್ದರು. ಬಹುತೇಕ ಹಳ್ಳಿಗರು ಮಾರುತಿ ಲಠ್ಠೆ ಹಾಡಿಗೆ ಮನಸೋತು ಅಭಿಮಾನಿಗಳಾಗಿದ್ದರು.

Share This Article