ಉತ್ತರ ಕರ್ನಾಟಕ ನಿರ್ಲಕ್ಷ್ಯ – ಸಿಎಂ, ಡಿಸಿಎಂಗೆ ಪತ್ರ ಬರೆದು ಹೊರಟ್ಟಿ ಅಸಮಾಧಾನ

Public TV
1 Min Read

ಬೆಂಗಳೂರು: ಉನ್ನತ ಅಧಿಕಾರಿಗಳ ನೇಮಕ, ಸಚಿವ ಸ್ಥಾನ, ಅನುದಾನ ಹಂಚಿಕೆಯಲ್ಲಿ ಸದಾ ರಾಜ್ಯ ಸರ್ಕಾರದಿಂದ ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕ್ಕೆ ಅನ್ಯಾವಾಗುತ್ತ ಬಂದರು ಕೂಡ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಸವರಾಜ್ ಹೊರಟ್ಟಿ ಅವರು ಸಿಎಂ ಹಾಗೂ ಡಿಸಿಎಂ ಅವರಿಗೆ ಪತ್ರ ಬರೆದಿದ್ದಾರೆ.

ಅಡ್ವಕೇಟ್ ಜನರಲ್ ನೇಮಕ ವಿಚಾರ ಮುಂದಿಟ್ಟು ಮೈತ್ರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಬಸವರಾಜ್ ಹೊರಟ್ಟಿ ಅವರು, ಈ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾವಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಸರ್ಕಾರದ ನಡೆಯನ್ನು ಸವಿವರವಾಗಿ ತಿಳಿಸಿ ಹೇಳಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನುದಾನ ಬಿಡುಗಡೆ, ಉನ್ನತ ಅಧಿಕಾರಿಗಳ ನೇಮಕಾತಿ, ಉಪಕುಲಪತಿ, ನೇಮಕಾತಿಯಲ್ಲಿ ಎಲ್ಲವೂ ದಕ್ಷಿಣ ಕರ್ನಾಟಕದವರ ಪಾಲಾಗುತ್ತಿದೆ. ನಮ್ಮಲ್ಲಿ 50 ಪಿಎಚ್‍ಡಿ ಮಾಡಿದ ಪ್ರಾಧ್ಯಾಪಕರಿದ್ದರು ನಮ್ಮ ಭಾಗದ ಜನರಿಗೆ ಅವಕಾಶ ದಕ್ಕುತ್ತಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ಕಾಳಜಿ ವಹಿಸುತ್ತಾರೆಂದು ನಾವು ಪದೇ ಪದೇ ವೇದಿಕೆಗಳ ಮೂಲಕ ಹೇಳುತ್ತೇವೆ. ಆದರೆ ನಮ್ಮ ಹೇಳಿಕೆಗಳು ಹೇಳಿಕೆಗಳಾಗಿಯೇ ಉಳಿದಿವೆ. ಈ ರೀತಿ ಅನ್ಯಾವನ್ನು ಪದೇ ಪದೇ ಮಾಡುವುದು ಸರಿಯಾದುದಲ್ಲವೆಂದು ನನ್ನ ಭಾವನೆ. ಆದ್ದರಿಂದ ಉತ್ತರ ಕರ್ನಾಟಕದವರ ಪರವಾಗಿ ತಮ್ಮಲ್ಲಿ ವಿನಂತಿಸುವುದೇನೆಂದರೆ ಈ ಅನ್ಯಾಯವನ್ನು ಸರಿಪಡಿಸಿ ತಕ್ಷಣ ಯೋಗ್ಯರಾದವರನ್ನು ನೇಮಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *