ಗೃಹ ಸಚಿವಾಲಯದಿಂದ ನೆರವು ಕೊಡಿಸಲು ನಾನು ಬದ್ಧ – ಪ್ರಹ್ಲಾದ್ ಜೋಷಿ

Public TV
2 Min Read

ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಗೃಹ ಸಚಿವಾಲಯದಿಂದ ನೆರವು ಕೊಡಿಸಲು ನಾನು ಬದ್ಧನಾಗಿದ್ದೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಭರವಸೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಏನು ನೆರವು ಬೇಕು ಎಂದು ಹೇಳಲು ಸಮಯ ಬೇಕಾಗುತ್ತದೆ. ಪರಿಹಾರದ ಕುರಿತು ಈವರೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಲ್ಲ. ಗೃಹ ಇಲಾಖೆಯೊಂದಿಗೆ ಚರ್ಚಿಸಿ ತಕ್ಷಣ ನೆರವು ಒದಗಿಸಲಾಗುವುದು. ಈವರೆಗೆ ರಾಜ್ಯ ಸರ್ಕಾರ ಏನು ನೆರವು ಬೇಕು ಎಂದು ಕೇಂದ್ರಕ್ಕೆ ತಿಳಿಸಿಲ್ಲ. ರಾಜ್ಯ ಸರ್ಕಾರ ಮನವಿ ಮಾಡಿದಲ್ಲಿ ತುರ್ತಾಗಿ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಕೇಂದ್ರ ಸರ್ಕಾರದಿಂದ ಯಾವ ರೀತಿಯ ನೆರವು ಬೇಕೆಂದು ಸರ್ಕಾರ ತಿಳಿಸಿದರೆ ಕೊಡಿಸಲು ನಾನು ಸಿದ್ಧ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹ ನಿಯಂತ್ರಿಸಲು ನೆರವು ನೀಡುವ ಕುರಿತು ಗೃಹ ಇಲಾಖೆ ಜೊತೆ ಚರ್ಚಿಸಿ ತಕ್ಷಣ ಒದಗಿಸಲಾಗುವುದು. ಪ್ರಧಾನಿ ಮೋದಿ ನೃತೃತ್ವದ ಸರ್ಕಾರ ಯಾವುದೇ ರಾಜ್ಯದ ಪ್ರವಾಹ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲಿದೆ. ಪ್ರವಾಹದ ಒಟ್ಟು ನಷ್ಟದ ಅಂದಾಜು ನನಗಿದೆ. ಈಗಾಗಲೇ ಕೇಂದ್ರದಿಂದ ಎನ್‍ಡಿಆರ್‍ಎಫ್ ತಂಡದ ಮೂಲಕ ನೆರವು ಕೊಡಲಾಗುತ್ತಿದೆ. ಪ್ರವಾಹದಿಂದ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದ್ದು, ಗೃಹ ಸಚಿವರಿಂದ ನೆರವು ಕೊಡಿಸಲು ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ನಾನೂ ಸಹ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೊರಟಿದ್ದೇನೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ನೆರವಾಗುತ್ತೇನೆ. ಪರಿಹಾರ ಕಾಮಗಾರಿಗಳಿಗೆ ಚುರುಕು ನೀಡುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಶೀಘ್ರವೇ ಸಚಿವ ಸಂಪುಟ ರಚಿಸಲಾಗುವುದು. ಸದ್ಯ ಪರಿಹಾರ ಕಾರ್ಯ ಮುಗಿಯಬೇಕಿದೆ. ನಂತರ ಸಚಿವ ಸಂಪುಟದ ಬಗ್ಗೆ ಚರ್ಚೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳು ಟೀಕೆ ಮಾಡುವುದು ಸಹಜ. ಆದರೆ ಇಂತಹ ಸಂದರ್ಭದಲ್ಲಿ ಟೀಕೆ ಸಲ್ಲದು. ಕುಮಾರಸ್ವಾಮಿ ಸರ್ಕಾರ ಇದ್ದಿದ್ದರೂ ಇಂತಹ ಸಂದರ್ಭದಲ್ಲಿ ನಾವು ನೆರವು ಕೊಡುತ್ತಿದ್ದೆವು. ಸಂಪುಟ ರಚನೆಯಾಗಿಲ್ಲ ಎಂಬುದನ್ನು ಹೊರತು ಪಡಿಸಿದರೆ, ಅಭಿವೃದ್ಧಿ ಕೆಲಸಕ್ಕೆ ಅಡ್ಡಿಯಾಗಿಲ್ಲ. ಈ ವಯಸ್ಸಲ್ಲೂ ಯಡಿಯೂರಪ್ಪನವರು ಚಟುವಟಿಕೆಯಿಂದ ಓಡಾಡಿ ಪ್ರವಾಹ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ದೆಹಲಿಯಿಂದ ಬಂದು ನೇರವಾಗಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಪಕ್ಷಗಳು ಟೀಕೆ ನಿಲ್ಲಿಸಿ, ನೆರೆ ಪೀಡಿತರ ರಕ್ಷಣೆಗೆ ಒಟ್ಟಾಗಿ ಧಾವಿಸೋಣ ಎಂದು ಕರೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *