ಕೇಂದ್ರದಿಂದ ಬಾರದ ಪರಿಹಾರ – ರಾಜ್ಯ ಬಿಜೆಪಿ ನಾಯಕರಲ್ಲಿ ಮಡುಗಟ್ಟಿದ ಪ್ರವಾಹ ಅಸಮಾಧಾನ

Public TV
2 Min Read

ಬೆಂಗಳೂರು: ಉತ್ತರ ಕರ್ನಾಟಕ ಈ ಬಾರಿಯ ಪ್ರವಾಹಕ್ಕೆ ತುತ್ತಾಗಿ ನರಳುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೇಂದ್ರದಿಂದ ಮಾತ್ರ ಇದೂವರೆಗೂ ಪ್ರವಾಹ ಬಂದಿಲ್ಲ. ಇದರಿಂದ ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರು, ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮದೇ ಸರ್ಕಾರವಿದ್ದರೂ ಪರಿಹಾರದ ಹಣ ಸಿಗುತ್ತಿಲ್ಲ. ಇತ್ತ ವಿಪಕ್ಷಗಳು ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ಜನರ ಮುಂದೆ ಹೋಗುತ್ತಿದೆ. ಹೀಗೆ ಆದ್ರೆ ಮುಂದಿನ ಉಪಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತವಾಗಲಿದೆ ಎಂದು ಕಮಲ ನಾಯಕರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ.

ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಮತ್ತು ಅತಿವೃಷ್ಠಿ ಜನರ ಬದುಕನ್ನು ಅಂಧಕಾರಕ್ಕೆ ತಳ್ಳಿದೆ. ರಾಜ್ಯ ಸರ್ಕಾರ ನೀಡಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ಪರಿಹಾರದ ವಿಷಯದಲ್ಲಿ ಕೇಂದ್ರದ ವಿಳಂಬ ನೀತಿಗೆ 22 ಜಿಲ್ಲೆಗಳ ಹಲವು ಬಿಜೆಪಿ ನಾಯಕರಲ್ಲಿ ಬೇಸರ ಮನೆ ಮಾಡಿದೆ. ಈಗಾಗಲೇ ಹಲವು ನಾಯಕರು ಸಿಎಂ ಯಡಿಯೂರಪ್ಪ ಮುಂದೆಯೇ ಅಸಮಾಧಾನ ಹೊರಹಾಕಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಪ್ರವಾಹ, ಅತಿವೃಷ್ಠಿ ಸಂಭವಿಸಿ ಒಂದೂವರೆ ತಿಂಗಳು ಕಳೆದಿದೆ. ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ಸಹ ನೆರೆ ಪೀಡಿತ ಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಕೇಂದ್ರದಿಂದ ಬಂದ ಅಧಿಕಾರಿಗಳು ಸಮೀಕ್ಷೆ ನಡೆಸಿ 15 ದಿನ ಕಳೆದಿದೆ. ಜನರು ಶಾಶ್ವತ ಪರಿಹಾರಕ್ಕಾಗಿ ಸರ್ಕಾರದತ್ತ ನೋಡುತ್ತಿದ್ದಾರೆ. ಕ್ಷೇತ್ರಗಳಿಗೆ ತೆರಳಲು ಸಂಕೋಚವಾಗುತ್ತಿದೆ. ರಾಜ್ಯ ಸರ್ಕಾರ 38,415 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದೆ. ಆದ್ರೆ ವಿಪಕ್ಷಗಳು 1 ಲಕ್ಷ ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಸಿಎಂ ಬಳಿ ಬೇಸರ ತೋಡಿಕೊಂಡಿದ್ದಾರೆ.

ಇಂದು ಸಿಎಂ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಶಕುಂತಲಾ ಜೊಲ್ಲೆ, ಸಭೆಯಲ್ಲಿ ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಸರ್ಕಾರ 10 ಸಾವಿರ ರೂ. ಚೆಕ್ ವಿತರಿಸಿದೆ. ಬೆಳಗಾವಿಯಂತೆ ಎಲ್ಲ ಜಿಲ್ಲೆಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಅಡಿಪಾಯಕ್ಕಾಗಿ 1 ಲಕ್ಷ ರೂ.ಚೆಕ್ ನೀಡಲಾಗುತ್ತಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *