ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಸೂರ್ಯ ಸೇರಿ ತಮಿಳಿನ 8 ಮಂದಿ ನಟರ ವಿರುದ್ಧ ಅರೆಸ್ಟ್ ವಾರೆಂಟ್

Public TV
1 Min Read

ಚೆನ್ನೈ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳಿನ ಖ್ಯಾತ ನಟರ ವಿರುದ್ಧ ಊಟಿ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್, ಸೂರ್ಯ, ಶರತ್ ಕುಮಾರ್, ಚೆರಣ್, ವಿಜಯಕುಮಾರ್, ವಿವೇಕ್, ಅರುಣ್, ವಿಜಯ್ ಹಾಗೂ ಶ್ರೀಪ್ರಿಯಾ ಮೊದಲಾದವರ ವಿರುದ್ಧ ಕೋರ್ಟ್ ಇಂದು ಅರೆಸ್ಟ್ ವಾರಂಟ್ ಜಾರಿ ಮಾಡಿದೆ.

ಏನಿದು ಪ್ರಕರಣ?: 2009ರ ಅಕ್ಟೋಬರ್ 7ರಂದು ಚೆನ್ನೈನಲ್ಲಿ ನಡೆದಿದ್ದ ದಕ್ಷಿಣ ಭಾರತ ಸಿನಿಮಾ ನಟರ ಸಂಘದ ಸಭೆಯ ವೇಳೆ ತಮಿಳು ಪತ್ರಿಕೆ ದೈನಿಕದ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಪತ್ರಿಕೆ ತಮಿಳು ಚಿತ್ರರಂಗದ ನಟ-ನಟಿಯರ ಮಾನಹಾನಿ ಮಾಡುವಂತಹ ಲೇಖನಗಳನ್ನು ಪ್ರಕಟಿಸಿತ್ತದೆ ಅಂತಾ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕುರಿತು ಪತ್ರಕರ್ತ ಎಮ್ ರೊಜಾರಿಯೋ ಮರಿಯಾ ಸುಸೈ ಅವರು, ಚಿತ್ರ ನಟರ ಬಗ್ಗೆ ಬರೆದಿದ್ದಕ್ಕೆ ನನ್ನ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಅಂತಾ ಆರೋಪಿಸಿ ಊಟಿ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ಸಂಬಂಧ ನಟ ಸೂರ್ಯ, ಸತ್ಯರಾಜ್, ಶರತ್‍ಕುಮಾರ್, ಸುಪ್ರಿಯಾ, ವಿಜಯ್ ಕುಮಾರ್, ಅರುಣ್ ವಿಜಯ್, ವಿವೇಕ್ ಹಾಗೂ ಚೇರನ್‍ಗೆ ವಿಚಾರಣೆಗೆ ಹಾಜರಾಗುವಂತೆ 2011ರ ಡಿಸೆಂಬರ್ 19ರಂದು ಕೋರ್ಟ್ ಸೂಚಿಸಿತ್ತು. ಆದ್ರೆ ನಟರು ಕೋರ್ಟ್ ಗೆ ಹಾಜರಾಗಲು ನಿರಾಕರಿಸಿದ್ದರು. ಅಲ್ಲದೇ ಕೋರ್ಟ್‍ಗೆ ಹಾಜರಾಗದೇ ನೇರವಾಗಿ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ಕೇಳಿ ಮದ್ರಾಸ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು.

ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಮತ್ತೆ 2017ರ ಮೇ 15ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು. ಆ ಬಾರಿಯೂ ವಿಚಾರಣೆಗೆ ಹಾಜರಾಗದ ತಮಿಳು ನಟರ ವಿರುದ್ಧ ಇದೀಗ ಊಟಿಯ ಮ್ಯಾಜಿಸ್ಟ್ರೇಟ್ ನ್ಯಾ. ಸೆಂತಿಲ್ ಕುಮಾರ್ ರಾಜವೇಲ್ ಅವರು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *