ಪ್ರಾಣದ ಜೊತೆ ಅಧಿಕಾರಿಗಳ ಆಟ – ಕೆ.ಆರ್ ಆಸ್ಪತ್ರೆಗೆ ಬರ್ಲಿಲ್ಲ ಜೀವರಕ್ಷಕ ವೆಂಟಿಲೇಟರ್

Public TV
1 Min Read

ಮೈಸೂರು: ನಗರದ ಕೆ.ಆರ್. ಆಸ್ಪತ್ರೆ ಎಂದರೆ ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗೆ ದೊಡ್ಡಾಸ್ಪತ್ರೆ ಎಂದೇ ಹೆಸರುವಾಸಿ. ಆದರೆ ಈ ಆಸ್ಪತ್ರೆಯೇ ದೀರ್ಘಕಾಲದ ರೋಗದಿಂದ ಬಳಲುತ್ತಿದೆ.

ಹೌದು. ಚಾಮರಾಜನಗರ ಜಿಲ್ಲೆಯ ಹನೂರಿನ ಸುಳ್ವಾಡಿ ವಿಷಹಾರ ದುರಂತ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು. ದುರಂತ ನಡೆದ ದಿನ ನೂರಾರು ರೋಗಿಗಳನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಿದ್ದರು. ಆದರೆ ಅಂದು ಆಸ್ಪತ್ರೆಯಲ್ಲಿ ಸಾಕಷ್ಟು ವೆಂಟಿಲೇಟರ್ ವ್ಯವಸ್ಥೆ ಇಲ್ಲದೆ ಮೈಸೂರಿನ ಬೇರೆ ಬೇರೆ ಖಾಸಗಿ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲಿಸಲಾಗಿತ್ತು. ಆಗ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕೆ.ಆರ್. ಆಸ್ಪತ್ರೆಗೆ ಆಗತ್ಯವಿರುವಷ್ಟು ವೆಂಟಿಲೇಟರ್ ಮಂಜೂರು ಮಾಡೋದಾಗಿ ಹೇಳಿತ್ತು. ಆದರೆ ಘಟನೆ ನಡೆದು 7 ತಿಂಗಳಾದರೂ ಟೆಂಡರ್ ಪ್ರಕ್ರಿಯೆ ವಿಳಂಬವಾಗಿ ವೆಂಟಿಲೇಟರ್‍ಗಳು ಮಾತ್ರ ಆಸ್ಪತ್ರೆಗೆ ಸೇರಿಲ್ಲ ಎಂದು ಆಸ್ಪತ್ರೆ ಸೂಪರಿಡೆಂಟ್ ನಂಜುಂಡಸ್ವಾಮಿ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಸದ್ಯ 15 ವೆಂಟಿಲೇಟರ್ ಕಾರ್ಯನಿರ್ವಹಿಸುತ್ತಿದ್ದು, 7 ಹೊಸ ವೆಂಟಿಲೇಟರ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಕೆ.ಆರ್ ಆಸ್ಪತ್ರೆಯಲ್ಲಿ ಇರುವ ಯಾವುದೇ ಅಂಬುಲೆನ್ಸ್ ಗಳಿಗೂ ವೆಂಟಿಲೇಟರ್ ವ್ಯವಸ್ಥೆ ಇಲ್ಲ. ಇದರಿಂದ ಅಂಬುಲೆನ್ಸ್‍ಗಳಿಗೂ ವೆಂಟಿಲೇಟರ್ ಅಳವಡಿಸುವ ಬೇಡಿಕೆ ಸಹ ಇದೆ. ಆದರೂ ಸರ್ಕಾರ ಮಾತ್ರ ಇನ್ನು ಯಾವುದೇ ಕ್ರಮ ವಹಿಸಿಲ್ಲ.

ಮೈಸೂರು ಜಿಲ್ಲೆಯಲ್ಲಿ ಜಿ.ಟಿ. ದೇವೇಗೌಡ, ಸಾರಾ ಮಹೇಶ್ ಇಬ್ಬರು ಸಚಿವರಿದ್ದಾರೆ. ಅದಾಗ್ಯೂ, ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ವೆಂಟಿಲೇಟರ್ ಒದಗಿಸುವಲ್ಲಿ ಇವರಿಗೂ ಕೂಡ ಕಾಳಜಿ ಇಲ್ಲದಂತಿದೆ.

Share This Article
Leave a Comment

Leave a Reply

Your email address will not be published. Required fields are marked *