ಮಂಗಳೂರು, ಕೊಪ್ಪಳ, ವಿಜಯಪುರದಲ್ಲಿ ಬಂದ್ ಗೆ ಇಲ್ಲ ಬೆಂಬಲ- ಜನಜೀವನ ಎಂದಿನಂತೆ ಆರಂಭ

Public TV
2 Min Read

ಮಂಗಳೂರು/ಕೊಪ್ಪಳ/ವಿಜಯಪುರ: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಆದ್ರೆ ಕೊಪ್ಪಳ, ವಿಜಯಪುರ ಮತ್ತು ಮಂಗಳೂರಿನಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಗಿಲ್ಲ.

ಮಂಗಳೂರಿನಲ್ಲಿ ಕರ್ನಾಟಕ ಬಂದ್ ಗೆ ಬೆಂಬಲ ನೀಡಿಲ್ಲ. ಇಲ್ಲಿನ ವರ್ತಕರಿಂದ ನೋ ಬಂದ್ ಡೇ ಆಚರಣೆ ಮಾಡಲಾಗ್ತಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಬಂದ್ ಇಲ್ಲ ಎಂಬ ಪೋಸ್ಟರ್ ಹಾಕಲಾಗಿದೆ. ನಮಗೆ ನೀರಿಲ್ಲ, ನಮಗೆ ನೋವಿದೆ. ಹಾಗಂತ ಪದೇ ಪದೇ ಬಂದ್ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೀಬೇಡಿ. ಈ ಬಾರಿ ಬಂದ್‍ಗೆ ನಮ್ಮ ಬೆಂಬಲ ಇಲ್ಲ ಎಂದು ಪೋಸ್ಟರ್ ಅಂಟಿಸಲಾಗಿದೆ. ಮಂಗಳೂರಿನಲ್ಲಿ ಜನಜೀವನ ಎಂದಿನಂತೆ ಆರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ಕರವೇ ಯಿಂದ ರೈಲ್ವೆ ತಡೆದು ಸಾಂಕೇತಿಕ ಪ್ರತಿಭಟನೆ ನಡೆಯಲಿದೆ.

ಕೊಪ್ಪಳದಲ್ಲಿ ಕೂಡ ಬಂದ್ ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ. ಬಸ್ ಸಂಚಾರ ಹಾಗೂ ಆಟೋ ಸಂಚಾರ ಸಹ ಯತಾಸ್ಥಿತಿಯಲ್ಲಿದ್ದು, ಪ್ರಯಾಣಿಕರು ಎಂದಿನಂತೆ ಪ್ರಯಾಣ ಮಾಡುತ್ತಿದ್ದಾರೆ. ಆದ್ರೆ ಬಂದ್ ಇದೆ ಎಂದುಕೊಂಡು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸ್ಥಗಿತ ಮಾಡಿದ್ದರ ಪರಿಣಾಮವಾಗಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಅಂಗಡಿಗಳು ಆರಂಭವಾಗಿದ್ದು, ವ್ಯಾಪಾರ ವಹಿವಾಟು ಸುಗುಮವಾಗಿ ಸಾಗುತ್ತಿದೆ.

ಜಿಲ್ಲಾ ಆಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಇದರಿಂದಾಗಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ. ಆದ್ರೆ ಕೆಲವೊಂದು ಖಾಸಗಿ ಶಾಲಾ ಕಾಲೇಜುಗಳಿಗೆ ತಾವೇ ರಜೆ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಕೆಲವೊಂದು ಕನ್ನಡಪರ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಲಿವೆ. ಬಂದ್ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದೆ.

ವಿಜಯಪುರ ಜಿಲ್ಲೆಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್ ಹಾಗು ಆಟೋ ಸಂಚಾರ ಎಂದಿನಂತೆ ಆರಂಭವಾಗಿದೆ. ಹೊಟೇಲ್ ಮತ್ತು ವ್ಯಾಪಾರ ವಹಿವಾಟು ಹಾಗು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ಕರವೇ ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಮಾತ್ರ ಮಹಾದಾಯಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಘಿದೆ. ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ ಇಂಡಿ ತಾಲುಕುಗಳಲ್ಲೂ ಕೂಡ ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲವಾಗಿದ್ದು, ಜನ ಜೀವನ ಎಂದಿನಂತಿದೆ.

Share This Article
Leave a Comment

Leave a Reply

Your email address will not be published. Required fields are marked *