ಸ್ಟ್ರೆಚರ್ ಸಿಗದೇ ರೋಗಿಯನ್ನು ಬೆಡ್‍ಶಿಟ್‍ನಲ್ಲಿ ಹಾಕಿ ಎಳೆದೊಯ್ದ ಸಂಬಂಧಿಕರು! ವಿಡಿಯೋ ವೈರಲ್

Public TV
1 Min Read

ಮುಂಬೈ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸಿಗದೇ ರೋಗಿಯನ್ನು ಸಂಬಂಧಿಕರು ಬೆಡ್ ಶೀಟ್‍ನಲ್ಲಿ ಹಾಕಿಕೊಂಡು ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ನಂದೇಡ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಪ್ರಸಿದ್ಧ ಡಾ. ಶಂಕರ ರಾವ್ ಚೌಹಾಣ್ ಸರ್ಕಾರಿ ಆಸ್ಪತ್ರೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮಹಿಳೆಯು ಕಾಲು ಮುರಿದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಮುಗಿದ ಬಳಿಕೆ ಮಹಿಳೆಗೆ ತೆರಳಲು ಸ್ಟ್ರೆಚರ್ ಸೌಲಭ್ಯವಿಲ್ಲದೆ, ರೋಗಿಯ ಸಂಬಂಧಿಕರು ಬೆಡ್ ಶೀಟ್‍ನ ಸಹಾಯದಿಂದ ಎಳೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ಗಳಲ್ಲಿ ಸೆರಹಿಡಿದಿದ್ದಾರೆ. ನಂತರ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಕಳೆದ ಗುರುವಾರ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಂಕರರಾವ್ ಚೌಹಾಣ್ ಸರ್ಕಾರಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಚಂದ್ರಕಾಂತ್ ಮಸ್ಕೆರವರು, ಘಟನೆ ನಡೆದ ದಿನ ಸ್ಥಳದಲ್ಲಿದ್ದ ಅಧಿಕಾರಿಗಳು ಹೇಳುವಂತೆ ಕಾಲು ಮುರಿದುಕೊಂಡ ರೋಗಿಯು ಸ್ಟ್ರೆಚರ್ ಅನ್ನು ಕೇಳಿದ್ದಾರೆ. ಆದರೆ ರೋಗಿಯ ಸಂಬಂಧಿಕರು ಸ್ಟ್ರೆಚರ್ ಬರುವವರೆಗೂ ಕಾಯದೇ ಅವಸರವಾಗಿ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸೌಲಭ್ಯ ಉಚಿತವಾಗಿದ್ದು, ಘಟನೆ ಸಂಬಂಧ ಯಾವುದೇ ದೂರುಗಳು ದಾಖಲಾಗಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *